ಕಾಂಗ್ರೆಸ್‌ ಹಾಸ್ಯೋತ್ಸವಕ್ಕೆ ಕ್ಷಣಗಣನೆ ಆರಂಭ: ಬಿಜೆಪಿ ವ್ಯಂಗ್ಯ

Update: 2022-07-01 07:12 GMT

ಬೆಂಗಳೂರು: 'ಕಾಂಗ್ರೆಸ್‌ ಈಗ ವ್ಯಕ್ತಿ ಪೂಜೆಯ ಮೂಲಕ ಪಕ್ಷ ಕಟ್ಟುತ್ತೇವೆ ಎಂಬ ಭ್ರಮೆಯಲ್ಲಿದೆ. ವಾಸ್ತವದಲ್ಲಿ ಕಾಂಗ್ರೆಸ್‌ ಬೀದಿಗೆ ಬಂದಿದ್ದೇ ನಕಲಿ ಗಾಂಧಿ ಕುಟುಂಬದ ವ್ಯಕ್ತಿಗಳ ಪೂಜೆಯಿಂದ ಎನ್ನುವುದನ್ನು ಮರೆತಿದೆ. ಸಿದ್ದರಾಮೋತ್ಸವದ ಬೆನ್ನಿಗೆ ಉಳಿದ ಘಟಾನುಘಟಿ ನಾಯಕರು ಮೈ ಕೊಡವಿ ನಿಂತಿದ್ದಾರೆ. ಕಾಂಗ್ರೆಸ್‌ ಹಾಸ್ಯೋತ್ಸವ ಕ್ಕೆ ಕ್ಷಣಗಣನೆ ಆರಂಭವಾಗಿದೆ' ಎಂದು ಬಿಜೆಪಿ ವ್ಯಂಗ್ಯವಾಡಿದೆ. 

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಸಿದ್ದರಾಮೋತ್ಸವದ ಸುದ್ದಿ ಕೇಳಿದ್ದೇ ತಡ ಕಾಂಗ್ರೆಸ್‌ ಪಕ್ಷದಲ್ಲಿ ಉತ್ಸವದ ಚಟುವಟಿಕೆಗಳು ಗರಿಗೆದರಿವೆ. ಶಿವಕುಮಾರೋತ್ಸವ, ಖರ್ಗೆಯೋತ್ಸವ, ಪರಮೇಶ್ವರೋತ್ಸವ ಜೊತೆಗೆ ಜಾರ್ಜಿಗೊಂದು ಉತ್ಸವ, ಜಮೀರನಿಗೊಂದು ಉತ್ಸವ ಮಾಡಿಬಿಡಿ! ಒಟ್ಟಾರೆ ಇದು ಕಾಂಗ್ರೆಸ್‌ ಹಾಸ್ಯೋತ್ಸವ ಅಲ್ಲದೆ ಮತ್ತೇನಲ್ಲ ಎಂದು ಬಿಜೆಪಿ ಟೀಕಿಸಿದೆ. 

ರಾಜ್ಯ ನಾಯಕರ ಉತ್ಸವದ ಬಳಿಕ ಸೋನಿಯೋತ್ಸವ, ರಾಹುಲೋತ್ಸವ ಆಯೋಜಿಸುವ ಇರಾದೆಯಿದೆಯೇ? ಇದುವರೆಗೆ ಸುಳ್ಳಿನಉತ್ಸವ ಮಾಡಿದ ಕಾಂಗ್ರೆಸ್‌ ಈಗ ಹಾಸ್ಯೋತ್ಸವ ಕ್ಕೆ ಮುನ್ನುಡಿ ಬರೆಯುತ್ತಿದೆ. ಅಧಿಕಾರವಿಲ್ಲದೆ ಬೀದಿಗೆ ಬಿದ್ದಿರುವವರಿಗೆ ಈಗ ಭರಪೂರ ಮನೋರಂಜನೆ ಎಂದು ಬಿಜೆಪಿ ಲೇವಡಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News