ಹಗಲು ದರೋಡೆ ನಿಲ್ಲಿಸಲು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಬೇಕು: ಸಿದ್ದರಾಮಯ್ಯ

Update: 2022-07-01 16:09 GMT

ಬೆಂಗಳೂರು, ಜು. 1: ‘ಸಗಟು (ಬಲ್ಕ್) ಡೀಸೆಲ್ ಖರೀದಿಯ ಮೇಲೆ ರಾಜ್ಯ ಸಾರಿಗೆ ನಿಗಮಗಳಿಂದ ಹೆಚ್ಚುವರಿಯಾಗಿ 25 ರೂ.ಹಣ ವಸೂಲಿ ಮಾಡುತ್ತಿರುವ ಕೇಂದ್ರ ಸರಕಾರದ ಕ್ರಮ ಸರಿಯಲ್ಲ. ಕೂಡಲೇ ಈ ಹಗಲು ದರೋಡೆ ನಿಲ್ಲಿಸುವಂತೆ ರಾಜ್ಯ ಬಿಜೆಪಿ ಸರಕಾರ ಮತ್ತು ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಬೇಕು' ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. 

ಶುಕ್ರವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ರಾಜ್ಯ ಸಾರಿಗೆ ನಿಗಮಗಳ ಸಿಬ್ಬಂದಿಗಳಿಗೆ ನೀಡಬೇಕಾದ ಸವಲತ್ತುಗಳನ್ನು ಕೂಡಲೆ ಬಿಡುಗಡೆ ಮಾಡಬೇಕು. ವಜಾ ಮಾಡಿರುವ ಸಿಬ್ಬಂದಿಗಳನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕು ಹಾಗೂ ಹೆದ್ದಾರಿಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಶುಲ್ಕ ವಸೂಲಿಯಿಂದ ಸಂಪೂರ್ಣ ವಿನಾಯಿತಿ ನೀಡಬೇಕು ಹಾಗೂ ವಿದ್ಯಾರ್ಥಿ, ಕಾರ್ಮಿಕ ಹಾಗೂ ಇತರೆ ಎಲ್ಲ್ಲ ಜನಸಾಮಾನ್ಯರಿಗೆ ಉತ್ತಮ ಸೇವೆಯನ್ನು ಕಡಿಮೆ ದರದಲ್ಲಿ ನೀಡಬೇಕು' ಎಂದು ಒತ್ತಾಯಿಸಿದ್ದಾರೆ.

‘ಇಡೀ ದೇಶದಲ್ಲಿಯೆ ಅತ್ಯುತ್ತಮ ಸರಕಾರಿ ಸಾರಿಗೆ ವ್ಯವಸ್ಥೆಯನ್ನುಳ್ಳ ರಾಜ್ಯ ಕರ್ನಾಟಕವಾಗಿತ್ತು. 2013-18ರ ವರೆಗಿನ ನಮ್ಮ ಸರಕಾರದ ಅವಧಿಯಲ್ಲಿ ರಾಜ್ಯ ಸಾರಿಗೆಯ ಜನಸ್ನೇಹಿ ಆಡಳಿತಕ್ಕಾಗಿ ಕೇಂದ್ರ ಸರಕಾರವೆ ಹಲವು ಬಾರಿ ಪ್ರಶಸ್ತಿಗಳನ್ನು ನೀಡಿತ್ತು. ಸುವ್ಯವಸ್ಥೆಯಲ್ಲಿದ್ದ ರಾಜ್ಯದ ಸಾರಿಗೆ ವ್ಯವಸ್ಥೆಗೆ ಬಿಜೆಪಿ ಸರಕಾರ ನಿಧಾನ ವಿಷ ಕೊಟ್ಟು ಕೊಲ್ಲುತ್ತಿದೆ' ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಕೆಎಸ್ಸಾರ್ಟಿಸಿ ಸಹಿತ 3 ನಿಗಮಗಳು ಹಾಗೂ ಬಿಎಂಟಿಸಿಯಲ್ಲಿ ಸುಮಾರು 26 ಸಾವಿರ ಬಸ್‍ಗಳಿವೆ. ಪ್ರತಿ ದಿನ ಲಕ್ಷಾಂತರ ಕಾರ್ಮಿಕರು, ವಿದ್ಯಾರ್ಥಿಗಳು, ರೈತರು ಹಾಗೂ ಜನಸಾಮಾನ್ಯರು ಸರಕಾರಿ ಬಸ್ಸುಗಳಲ್ಲಿ ಓಡಾಡುತ್ತಿದ್ದಾರೆ. ಸುಮಾರು 1.30 ಲಕ್ಷ ನೌಕರರಿಗೆ ಸರಕಾರದ ನಾಲ್ಕೂ ಸಾರಿಗೆ ನಿಗಮಗಳು ಉದ್ಯೋಗ ನೀಡಿವೆ. ಪ್ರತಿದಿನ ಸುಮಾರು 20-25 ಕೋಟಿ ರೂ.ಗಳ ಆದಾಯವಿದೆ. ಇಷ್ಟಿದ್ದರೂ ಬಿಜೆಪಿ ಸರಕಾರವು ಸಮರ್ಥವಾಗಿ ಸಾರಿಗೆ ವ್ಯವಸ್ಥೆಯನ್ನು ನಿಭಾಯಿಸಲು ವಿಫಲವಾಗಿದೆ' ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

‘ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್ಸುಗಳು ಪ್ರತಿದಿನ ಸುಮಾರು 13 ಲಕ್ಷ ಲೀ.ಡೀಸೆಲ್ ಬಳಸುತ್ತವೆ. ಲೀಟರ್ ಮೇಲೆ 25 ರೂ.ಹೆಚ್ಚಿಗೆ ಪಾವತಿಸಬೇಕಾಗಿರುವುದರಿಂದ ಪ್ರತಿದಿನ 3.25 ಕೋಟಿ ರೂ., ವರ್ಷಕ್ಕೆ 1,187 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತವನ್ನು ಪಾವತಿಸಬೇಕಾಗಿದೆ. ಬಿಜೆಪಿ ಸರಕಾರದ ಈ ನೀತಿಯಿಂದಾಗಿ ರಾಜ್ಯದ ಸರಕಾರಿ ಸಾರಿಗೆ ವ್ಯವಸ್ಥೆಯು ವಿಪರೀತ ಸಂಕಷ್ಟಕ್ಕೆ ಸಿಲುಕಿಕೊಂಡಿದೆ' ಎಂದು ಅವರು ತಿಳಿಸಿದರು.

‘ಸಾರಿಗೆ ನಿಗಮಗಳಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಎರಡೂವರೆ ವರ್ಷಗಳಿಂದ ವೇತನ ಪರಿಷ್ಕರಣೆ ಆಗಿಲ್ಲ. ಈ ನೌಕರರು ರಾಜ್ಯದ ಇತರೆ ಸರಕಾರಿ ನೌಕರರು ಪಡೆಯುತ್ತಿರುವ ವೇತನಗಳಿಗಿಂತ ಶೇ.40ರಷ್ಟು ಕಡಿಮೆ ಪಡೆಯುತ್ತಿದ್ದಾರೆ. ಕಾರ್ಮಿಕರನ್ನು 10-12ಗಂಟೆಗಳಷ್ಟು ಕಾಲ ದುಡಿಸುತ್ತಿದ್ದಾರೆ. ಸರಕಾರದ ಈ ಶೋಷಣೆಯನ್ನು ವಿರೋಧಿಸಿ ಕಳೆದ ವರ್ಷ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರೆಂದು ವಜಾ ಮಾಡಿದ್ದ ಸಿಬ್ಬಂದಿಗಳಲ್ಲಿ 1,500 ಜನರನ್ನು ಇದುವರೆಗೂ ಕೆಲಸಕ್ಕೆ ಸೇರಿಸಿಕೊಂಡಿಲ್ಲ' ಎಂದು ಅವರು ತಿಳಿಸಿದ್ದಾರೆ.

‘ಲಭ್ಯವಿರುವ ಇಂಧನ ಕೇವಲ 3-4 ದಿನಕ್ಕೆ ಮಾತ್ರ ಸಾಕಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆ ನಂತರ ಏನು ಮಾಡಬೇಕೆಂಬ ಬಗ್ಗೆ ಸರಕಾರ ಉಸಿರುಬಿಡುತ್ತಿಲ್ಲ. ಇದನ್ನೆಲ್ಲ ನೋಡಿದರೆ ಜನಸಾಮಾನ್ಯರ ಸಾರಿಗೆ ವ್ಯವಸ್ಥೆಯನ್ನು ಖಾಸಗಿಯವರಿಗೆ ವಹಿಸಿಕೊಡಲು ಸಿದ್ಧತೆ ನಡೆಯುತ್ತಿರುವ ಹಾಗೆ ಕಾಣುತ್ತಿದೆ. ಈಗಾಗಲೆ ಬೆಂಗಳೂರಿನ ಬಿಜೆಪಿಯ ಎಡಬಿಡಂಗಿ ಮನಸ್ಥಿತಿಯ ಸಂಸದರೊಬ್ಬರು ಸಾರಿಗೆ ವ್ಯವಸ್ಥೆಯನ್ನು ಖಾಸಗಿಯರಿಗೆ ಒಪ್ಪಿಸಬೇಕು ಎಂದು ಹೇಳಿದ್ದರು' ಎಂದು ಅವರು ಟೀಕಿಸಿದ್ದಾರೆ.

‘ಸರಕಾರಿ ಬಸ್ಸುಗಳಿಗೆ ರಿಯಾಯಿತಿ ದರದಲ್ಲಿ ಡೀಸೆಲ್ ವಿತರಿಸಬೇಕಾದ ಹಾಗೂ ಡೀಸೆಲ್ ಮೇಲೆ ತೆರಿಗೆ ಮನ್ನಾ ಮಾಡಬೇಕಾದ ಮೋದಿ ಮತ್ತು ಬೊಮ್ಮಾಯಿಯವರ ಬಿಜೆಪಿ ಸರಕಾರ ಜನರನ್ನು ಸುಲಿಗೆ ಮಾಡಲು ನಿಂತಿವೆ. ಜನಪರವಾಗಿ ಯೋಚಿಸುವವರು, ಸಾಮಾನ್ಯ ತಿಳುವಳಿಕೆ ಇರುವವರು ಮಾಡುವ ಕೆಲಸವೆ ಇದು? ಸರಕಾರಿ ಉದ್ದೇಶಕ್ಕೆ ಬಳಕೆಯಾಗುತ್ತಿರುವ ಇಂಧನಕ್ಕೆ ಸಂಪೂರ್ಣವಾಗಿ ತೆರಿಗೆ ವಿನಾಯಿತಿ ನೀಡಬೇಕು' ಎಂದು ಅವರು ಒತ್ತಾಯಿಸಿದ್ದಾರೆ.

‘ಮೋದಿ ಸರಕಾರ ಕೆಎಸ್ಸಾರ್ಟಿಸಿ ಸೇರಿ ಸಾರಿಗೆ ನಿಗಮಗಳು ಖರೀದಿಸುವ ಪ್ರತಿ ಲೀ.ಡೀಸೆಲ್ ಮೇಲೆ ಖಾಸಗಿಯವರಿಗಿಂತ 25 ರೂ.ಗಳಷ್ಟು ಹೆಚ್ಚು ಸಂಗ್ರಹಿಸುತ್ತಿದೆ. ಸಗಟು(ಬಲ್ಕ್) ಖರೀದಿಸುವವರು ಪ್ರತಿ ಲೀ. ಮೇಲೆ 25 ರೂ.ಹೆಚ್ಚು ಪಾವತಿಸಬೇಕೆಂಬ ನಿಯಮದಿಂದಾಗಿ ಈ ಸಮಸ್ಯೆ ಬಂದೊದಗಿದೆ. ಖಾಸಗಿಯವರಿಗೆ ಪ್ರತಿ ಲೀ. ಡೀಸೆಲ್ 88 ರೂ.ಗೆ ಲಭಿಸಿದರೆ, ಸರಕಾರದ ನಿಗಮಗಳು 113 ರೂ. ಪಾವತಿಸಬೇಕಾಗಿದೆ. ಇದು ಮೋದಿ ಸರಕಾರ ಜನಸಾಮಾನ್ಯರ ಸಾರಿಗೆಗೆ ಮಾಡುತ್ತಿರುವ ಕ್ಷಮಿಸಲಾಗದ ದ್ರೋಹ'

-ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News