ಸಾಗರ: ಜೋಗ ಪ್ರವಾಸಕ್ಕೆ ಬಂದಿದ್ದ ಯುವತಿ ಕಾಲು ಜಾರಿ ಬಿದ್ದು ಮೃತ್ಯು; ಕೊಲೆ ಶಂಕೆ
ಸಾಗರ : ಜೋಗ ಪ್ರವಾಸಕ್ಕೆ ಬಂದಿದ್ದ ಮಹಿಳೆ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ತಾಲೂಕಿನ ಕಾರ್ಗಲ್ ವ್ಯಾಪ್ತಿಯ ಶರಾವತಿ ಹಿನ್ನೀರಿನಲ್ಲಿ ಸೋಮವಾರ ನಡೆದಿದೆ.
ಬೆಂಗಳೂರಿನ ಹೊಸಕೋಟೆ ನಿವಾಸಿ ನಿಶಾ(24), ಪತಿ ನಾಗೇಶ್ ಸೋಮವಾರ ಜೋಗಕ್ಕೆ ಪ್ರವಾಸಕ್ಕೆ ಬಂದಿದ್ದರು ಎನ್ನಲಾಗಿದೆ.
ಪತಿ ನಾಗೇಶ್ ಕೋಲಾರದಲ್ಲಿ ಆಟೋ ಮೊಬೈಲ್ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿದ್ದಾರೆ ಎಂದು ತಿಳಿದು ಬಂದಿದೆ.
ಇವರು ಜೋಗದಲ್ಲಿ ಎಲ್ಲೂ ರೂಮ್ ಮಾಡಿರಲಿಲ್ಲ ಎಂದು ತಿಳಿದು ಬಂದಿದ್ದು, ಕಾರಿನಲ್ಲೇ ಉಳಿದುಕೊಂಡಿದ್ದರು ಎಂದು ಹೇಳಲಾಗುತ್ತಿದೆ.
ಜೋಗದಿಂದ 5 ಕಿಮಿ ದೂರದಲ್ಲಿರುವ ಜಂಗಲ್ ರೆಸಾರ್ಟ್ ಬಳಿ ಕೈ ಕಾಲು ಮುಖ ತೊಳೆಯಲು ಹೋದಾಗ ಈ ಘಟನೆ ನಡೆದಿದೆ.
ನಿಶಾ ಕಾಲು ಜಾರಿ ಬಿದ್ದಿದ್ದು, ತಕ್ಷಣವೇ ಸ್ಥಳೀಯರ ಸಹಾಯದಿಂದ ನಾಗೇಶ್ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ದುರಾದೃಷ್ಟವಶಾತ್ ನಿಶಾ ಸಾವನ್ನಪ್ಪಿದ್ದಾರೆ.
ಮೃತ ನಿಶಾರ ಚಿಕ್ಕಪ್ಪ ಈ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇಬ್ಬರೇ ಇರುವುದರಿಂದ ನಿಶಾರ ಆಕಸ್ಮಿಕ ಸಾವಲ್ಲ ಇದೊಂದು ಕೊಲೆಯಾಗಿರುವ ಸಾಧ್ಯತೆ ಇದೆ. ಹಾಗಾಗಿ ಈ ಬಗ್ಗೆ ತನಿಖೆ ನಡೆಸಬೇಕೆಂದು ದೂರಿನಲ್ಲೇ ಉಲ್ಲೇಖಿಸಿದ್ದಾರೆ.