ಅಧಿಕಾರಿಗಳ ಮೇಲೆ ಸರಕಾರಕ್ಕೆ ನಿಯಂತ್ರಣ ಇಲ್ಲವೇ: ದಿನೇಶ್ ಗುಂಡೂರಾವ್ ಪ್ರಶ್ನೆ
ಬೆಂಗಳೂರು, ಜು. 5: ‘ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಕಾರ್ಯವೈಖರಿ ಬಗ್ಗೆ ಪ್ರಶ್ನೆ ಮಾಡಿದ್ದ ನ್ಯಾಯಮೂರ್ತಿಗಳನ್ನು ಐಪಿಎಸ್ ಅಧಿಕಾರಿಯೊಬ್ಬರು ವರ್ಗಾವಣೆ ನಡೆಸಲು ಮುಂದಾಗುತ್ತಾರೆಂದರೆ ಸರಕಾರ ಸತ್ತು ಹೋಗಿದೆ ಎಂದರ್ಥ. ಈ ಸರಕಾರದಲ್ಲಿ ಐಎಎಸ್-ಐಪಿಎಸ್ಗಳು ಹೈಕೋರ್ಟ್ ನ್ಯಾಯಮೂರ್ತಿಗಳನ್ನೇ ವರ್ಗಾವಣೆ ಮಾಡುವಷ್ಟು ಬಲಾಢ್ಯರೆ? ಹಾಗಾದರೆ ಈ ಸರಕಾರಕ್ಕೆ ಅಧಿಕಾರಿಗಳ ಮೇಲೆ ನಿಯಂತ್ರಣವೇ ಇಲ್ಲವೆ?' ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ತಮ್ಮ ವರ್ಗಾವಣೆಗೆ ಐಪಿಎಸ್ ಅಧಿಕಾರಿಯೊಬ್ಬರು ಸರಕಾರಿ ಮಟ್ಟದಲ್ಲಿ ಪ್ರಭಾವ ಬೀರುತ್ತಿರುವ ಬಗ್ಗೆ ಸ್ವತಃ ನ್ಯಾಯಮೂರ್ತಿಗಳೇ ಹೇಳಿಕೊಂಡಿದ್ದಾರೆ. ಹಾಗಾದರೆ ಆ ಐಪಿಎಸ್ ಅಧಿಕಾರಿ ನ್ಯಾಯಾಂಗಕ್ಕಿಂತ ದೊಡ್ಡವರೆ? ನ್ಯಾಯಮೂರ್ತಿಗಳ ವರ್ಗಾವಣೆ ಪ್ರಕರಣ ಅತ್ಯಂತ ಗಂಭೀರವಾದದ್ದು. ಸರಕಾರ ನ್ಯಾಯಮೂರ್ತಿಗಳ ಆರೋಪದ ಕುರಿತು ತಕ್ಷಣವೆ ತನಿಖೆಗೆ ಆದೇಶಿಸಲಿ' ಎಂದು ಆಗ್ರಹಿಸಿದ್ದಾರೆ.
‘ಬಿಜೆಪಿ ಸರಕಾರದಲ್ಲಿ ಕೆಲ ಐಎಎಸ್-ಐಪಿಎಸ್ ಅಧಿಕಾರಿಗಳು ಕೊಬ್ಬಿದ ಗೂಳಿಗಳಾಗಿದ್ದಾರೆ. ಭ್ರಷ್ಟ ಅಧಿಕಾರಿಗಳೊಂದಿಗೆ ಸರಕಾರವೇ ಕೈ ಜೋಡಿಸಿ ಶೇ.40ರಷ್ಟು ಕಮೀಷನ್ ಹೊಡೆಯುತ್ತಿರುವಾಗ ಈ ಅಧಿಕಾರಿಗಳಿಗೆ ಸರಕಾರದ ಮೇಲೆ ಭಯವಿರಲು ಹೇಗೆ ಸಾಧ್ಯ? ಇಂದು ನ್ಯಾಯಮೂರ್ತಿಗಳ ವರ್ಗಾವಣೆಗೆ ಯತ್ನಿಸಿದವರು ಮುಂದೆ ಮುಖ್ಯಮಂತ್ರಿ ಬದಲಾವಣೆಗೂ ಕೈ ಹಾಕುವುದಿಲ್ಲವೆ?' ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
‘ಈ ಭ್ರಷ್ಟ ಸರಕಾರದಲ್ಲಿ ದೀನ ದಲಿತರ ಹಾಗೂ ನೊಂದವರ ಆಶಾಕಿರಣವಾಗಿ ಉಳಿದಿರುವುದು ನ್ಯಾಯಾಂಗವೊಂದೆ. ಈಗ ಆ ನ್ಯಾಯಾಂಗದ ಮೇಲೂ ದುಷ್ಟರ ಕಣ್ಣು ಬಿದ್ದಿದೆ. ಇದು ನ್ಯಾಯಾಂಗ ವ್ಯವಸ್ಥೆಗೆ ಮಾರಕ. ಕಾರ್ಯಾಂಗದ ಅಧಿಕಾರಿಯೊಬ್ಬರು ನ್ಯಾಯಾಂಗದ ಮೇಲೆ ಪ್ರಭುತ್ವ ಸಾಧಿಸಲು ಹೊರಟಿರುವುದು ಸಣ್ಣ ಸಂಗತಿಯಲ್ಲ. ಸರಕಾರ ಈ ಕೂಡಲೆ ಕ್ರಮ ತೆಗೆದುಕೊಳ್ಳಲಿ' ಎಂದು ದಿನೇಶ್ ಗುಂಡೂರಾವ್ ಒತ್ತಾಯಿಸಿದ್ದಾರೆ.
3
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) July 5, 2022
ರಾಜ್ಯ BJP ಸರ್ಕಾರದಲ್ಲಿ ಕೆಲ IAS-IPS ಅಧಿಕಾರಿಗಳು ಕೊಬ್ಬಿದ ಗೂಳಿಗಳಾಗಿದ್ದಾರೆ. ಭ್ರಷ್ಟ ಅಧಿಕಾರಿಗಳೊಂದಿಗೆ ಸರ್ಕಾರವೇ ಕೈ ಜೋಡಿಸಿ 40% ಕಮೀಷನ್ ಹೊಡೆಯುತ್ತಿರುವಾಗ ಈ ಅಧಿಕಾರಿಗಳಿಗೆ ಸರ್ಕಾರದ ಮೇಲೆ ಭಯವಿರಲು ಹೇಗೆ ಸಾಧ್ಯ?
ಇಂದು ನ್ಯಾಯಮೂರ್ತಿಗಳ ವರ್ಗಾವಣೆಗೆ ಯತ್ನಿಸಿದವರು ಮುಂದೆ ಮುಖ್ಯಮಂತ್ರಿಗಳ ಬದಲಾವಣೆಗೂ ಕೈ ಹಾಕುವುದಿಲ್ಲವೆ?