ನ್ಯಾಯನಿಷ್ಠರ ಬಾಯಿ ಮುಚ್ಚಿಸುವ ಹತಾಶ ಪ್ರಯತ್ನ: ಸಿದ್ದರಾಮಯ್ಯ

Update: 2022-07-06 12:38 GMT
ಫೈಲ್ ಚಿತ್ರ

ಬೆಂಗಳೂರು, ಜು.6: ಆರೋಪಿ ನೂಪುರ್ ಶರ್ಮಾ ಅವರಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‍ನ ದ್ವಿಸದಸ್ಯ ಪೀಠ ವ್ಯಕ್ತಪಡಿಸಿದ್ದ ಅಭಿಪ್ರಾಯವನ್ನು ನಿವೃತ್ತ ನ್ಯಾಯಮೂರ್ತಿಗಳು ಮತ್ತು ಸೇನಾಧಿಕಾರಿಗಳು ವಿರೋಧಿಸಿ ಕ್ರಮಕೈಗೊಳ್ಳಲು ಆಗ್ರಹಿಸಿದ್ದು ಅತ್ಯಂತ ದುರದೃಷ್ಟಕರ ಬೆಳವಣಿಗೆ. ಇದು ಸತ್ಯ ಮತ್ತು ನ್ಯಾಯನಿಷ್ಠರ ಬಾಯಿಮುಚ್ಚಿಸುವ ಹತಾಶ ಪ್ರಯತ್ನ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.

ಈ ಸಂಬಂಧ ಟ್ವೀಟ್‍ಗಳನ್ನು ಮಾಡಿರುವ ಅವರು, ಇತ್ತೀಚಿನ ಕೆಲವು ನ್ಯಾಯಮೂರ್ತಿಗಳ ನಡವಳಿಕೆಗಳ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಅಸಮಾಧಾನ-ಆಕ್ರೋಶ ವ್ಯಕ್ತವಾಗುತ್ತಿರುವಾಗ ಸುಪ್ರೀಂಕೋರ್ಟ್‍ನ ಇಬ್ಬರು ನ್ಯಾಯಮೂರ್ತಿಗಳ ಹೇಳಿಕೆ ನ್ಯಾಯಾಂಗದ ಬಗ್ಗೆ ಭರವಸೆ ಮೂಡಿಸಿತ್ತು. ಈಗ ಅಂತಹ ದನಿಗಳನ್ನು ಕೂಡಾ ದಮನಿಸುವ ಪ್ರಯತ್ನ ನಡೆದಿರುವುದು ವಿಷಾದನೀಯ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಎರಡು ದಿನಗಳ ಹಿಂದೆಯಷ್ಟೇ ಆಡಳಿತಾರೂಢ ಪಕ್ಷದ ನಾಯಕರು ನ್ಯಾಯಾಲಯದ ಕಾರ್ಯನಿರ್ವಹಣೆಯಲ್ಲಿ ಮಧ್ಯಪ್ರವೇಶಿಸಿ ತಮ್ಮ ಮೇಲೆ ಒತ್ತಡ ಹೇರುತ್ತಿರುವ ಬಗ್ಗೆ ಹೈಕೋರ್ಟ್ ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಇಂತಹ ಅಪರೂಪದ ನ್ಯಾಯಮೂರ್ತಿಗಳನ್ನು ನಾವೆಲ್ಲರೂ ಒಗ್ಗೂಡಿ ಬೆಂಬಲಿಸಬೇಕಾಗಿದೆ ಎಂದು ಅವರು ಕರೆ ನೀಡಿದ್ದಾರೆ.

ಕಾರ್ಯಾಂಗ-ಶಾಸಕಾಂಗಗಳು ಕರ್ತವ್ಯ ನಿರ್ವಹಣೆಯಲ್ಲಿ ವಿಫಲವಾದಾಗ ಜನತೆ ನ್ಯಾಯಾಂಗದ ಕಡೆ ಭರವಸೆಯಿಂದ ನೋಡುತ್ತಾರೆ. ಪ್ರಭುತ್ವದ ಒತ್ತಡಗಳನ್ನು ಮೀರಿ ಜನತೆಯ ಭರವಸೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ನ್ಯಾಯಮೂರ್ತಿಗಳ ದನಿ ಉಡುಗಿಹೋಗಲು ಬಿಡಬಾರದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News