ಹಲವಾರು ವರ್ಷಗಳಿಂದ ಒಂದೇ ಕಡೆ ಕೆಲಸ ಮಾಡುತ್ತಿರುವ ಪೌರಕಾರ್ಮಿಕರ ವರ್ಗಾವಣೆಗೆ ಕ್ರಮ: ಸಚಿವ ಭೈರತಿ ಬಸವರಾಜು
ಮೈಸೂರು,ಜು.8: ನಗರಪಾಲಿಕೆಗಳಲ್ಲಿ ಹಲವಾರು ವರ್ಷಗಳಿಂದ ಒಂದೇ ಕಡೆ ಕೆಲಸ ಮಾಡುತ್ತಿರುವ ಪೌರಕಾರ್ಮಿಕರ ವರ್ಗಾವಣೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ತಿಳಿಸಿದರು.
ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಪೌರಕಾರ್ಮಿಕರ ಬಹುತೇಕ ಬೇಡಿಕೆಗಳನ್ನು ಈಡೇರಿಸಿದ್ದೇವೆ. ಸರ್ಕಾರಕ್ಕೆ ಇದರಿಂದ 555 ಕೋಟಿ ರೂ. ಹೊರೆಯಾಗಲಿದೆ. ಆದರೂ ಅವರ ಹಿತ ಕಾಯಲು ನಾವು ಬದ್ಧ. ಆದರೆ, ಸರ್ಕಾರದ ಸವಲತ್ತುಗಳನ್ನು ಪೌರಕಾರ್ಮಿಕರು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಸ್ವಚ್ಚತಾ ಕಾರ್ಯಕ್ಕೆ ನೀಡುವ ಹ್ಯಾಂಡ್ ಗ್ಲೌಸ್, ಶೂಗಳನ್ನು ಕೆಲವರು ಬಳಸುತ್ತಿಲ್ಲ. ಇದೂ ಕೂಡಾ ಒಂದು ಸಮಸ್ಯೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಮಳೆ ಹೆಚ್ಚಾಗುತ್ತಿದೆ. ನೆರವಿಗೆ ತುರ್ತಾಗಿ ಧಾವಿಸಲು ವಿಶೇಷ ಟಾಸ್ಕ್ ಪೋರ್ಸ್ ರಚಿಸಲು ಪಾಲಿಕೆ ಆಯುಕ್ತರುಗಳಿಗೆ ಸೂಚನೆ ನೀಡಲಾಗಿದೆ. ರಾತ್ರಿ ವೇಳೆಯೂ ಟಾಸ್ಕ್ಪೋರ್ಸ್ಗಳು ಕೆಲಸ ಮಾಡಬೇಕು ಎಂದರು.
ಮೈಸೂರು ಹೊರವರ್ತುಲ ರಸ್ತೆಯ ವಿದ್ಯುತ್ ದೀಪ ನಿರ್ವಹಣೆಯ ಹೊಣೆಯನ್ನು ಮೈಸೂರು ಮಹಾನಗರಪಾಲಿಕೆಗೆ ವಹಿಸಿದ್ದೇವೆ. ಮುಂದಿನ ತಿಂಗಳಿಂದ ಶಾಶ್ವತವಾಗಿ ಮೈಸೂರು ರಿಂಗ್ ರಸ್ತೆಯಲ್ಲಿ ವಿದ್ಯುತ್ ದೀಪಗಳ ಸಂಪರ್ಕ ಇರುತ್ತದೆ. ಮೈಸೂರು ದೇವರಾಜ ಮಾರುಕಟ್ಟೆಯ ಪುನರ್ ನಿರ್ಮಾಣದಲ್ಲಿ ನಾವು ರಾಜವಂಶಸ್ಥರ ಮನವೊಲಿಸುತ್ತೇವೆ. ಇದರ ನಡುವೆಯೇ ಟೆಂಡರ್ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತಿದೆ ಎಂದು ಸಚಿವ ಭೈರತಿ ಬಸವರಾಜು ತಿಳಿಸಿದರು.