ಧಾರಾಕಾರ ಮಳೆ: ಮಲೆನಾಡು ಭಾಗದಲ್ಲಿ ಗುಡ್ಡ ಕುಸಿತ
ಶಿವಮೊಗ್ಗ: ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ಬಿಟ್ಟುಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಮಲೆನಾಡು ಭಾಗದಲ್ಲಿ ಗುಡ್ಡ ಕುಸಿತಗೊಂಡಿವೆ.ಸಾಗರ ತಾಲೂಕಿನ ಸಂಕಣ್ಣ ಶಾನುಭೋಗ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡಗಳಲೆ ಗ್ರಾಮದಲ್ಲಿ ಗುಡ್ಡ ಕುಸಿತಗೊಂಡಿದೆ.
ಅಡಗಳಲೆ ಗ್ರಾಮದ ಸುಧಾ ಸಂತೋಷ್, ಜೀನದತ್ತ, ಮಂಜಮ್ಮ ಅವರ ತೋಟ, ಗದ್ದೆಯ ಬಳಿ ಗುಡ್ಡ ಕುಸಿತಗೊಂಡಿದ್ದು, 10ಕ್ಕೂ ಹೆಚ್ಚು ಎಕರೆ ಅಡಿಕೆ ತೋಟ ಹಾಗೂ ಗದ್ದೆ ಸಂಪೂರ್ಣ ಮಣ್ಣು ಪಾಲಾಗಿದೆ. ಗುಡ್ಡದ ಮಣ್ಣು ಗದ್ದೆ, ತೋಟದಲ್ಲಿ ಕೊಚ್ಚಿಕೊಂಡು ಹೋಗಿ ನಿಂತಿದೆ. ಹಳ್ಳದ ನೀರು ಕೂಡ ತೋಟ, ಗದ್ದೆಯ ಮೇಲೆ ಹರಿದು ಹೋಗುತ್ತಿದೆ.
ಗುಡ್ಡ ಕುಸಿತದಿಂದ ಕೃಷಿ ಭೂಮಿ ಮೂಲ ಸ್ವರೂಪವನ್ನೇ ಕಳೆದುಕೊಂಡಿದೆ. ಮಳೆ ಹೀಗೆ ಮುಂದುವರಿದರೆ ಜಿಲ್ಲೆಯಲ್ಲಿ ಮತ್ತಷ್ಟು ಅವಘಡಗಳು ನಡೆಯುವ ಸಾಧ್ಯತೆಯಿದೆ. ಕಳೆದ 3 ವರ್ಷದಿಂದ ಜಿಲ್ಲೆಯ ವಿವಿಧ ಭಾಗದಲ್ಲಿ ಗುಡ್ಡ ಕುಸಿತ ಉಂಟಾಗುತ್ತಿದೆ. ಈ ಹಿಂದೆ ತೀರ್ಥಹಳ್ಳಿಯ ಹೆಗಲತ್ತಿ, ಸಾಗರದ ಆರೋಡಿ ಬಳಿ ಸಹ ಗುಡ್ಡ ಕುಸಿತ ಉಂಟಾಗಿತ್ತು.