ಕೊಡಗಿನಲ್ಲಿ ಭಾರೀ ಮಳೆ: ಹಲವೆಡೆ ರಸ್ತೆ ಸಂಪರ್ಕ ಕಡಿತ, ಮನೆಗಳು ಜಲಾವೃತ
ಮಡಿಕೇರಿ ಜು.10 : ಧಾರಾಕಾರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ಜೀವನದಿ ಕಾವೇರಿಯನ್ನು ಒಳಗೊಂಡಂತೆ ಕಿರು ತೊರೆಗಳು ಉಕ್ಕಿ ಹರಿದು ಸೃಷ್ಟಿಯಾಗಿರುವ ಪ್ರವಾಹದಿಂದ ಹಲವೆಡೆ ಗ್ರಾಮೀಣ ರಸ್ತೆ ಸಂಪರ್ಕ ಕಡಿತಗೊಂಡಿದ್ದರೆ, ಮತ್ತೆ ಹಲವೆಡೆ ಮನೆಗಳು ಜಲಾವೃತಗೊಂಡಿವೆ. ಜಿಲ್ಲೆಯ ಬಹುತೇಕ ರಸ್ತೆಗಳಿಗೆ ಬರೆ ಕುಸಿದಿದ್ದು, ವಿವಿಧೆಡೆ ಸಂಪರ್ಕ ಕಡಿತಗೊಂಡಿದೆ.
ಭಾಗಮಮಡಲದ ಸಂಗಮದಲ್ಲಿ ಕಾವೇರಿ ಉಕ್ಕಿ ಹರಿಯಲಾರಂಭಿಸಿದ್ದು, ಪ್ರವಾಹದಿಂದ ಮಡಿಕೇರಿ-ಭಾಗಮಂಡಲ ರಸ್ತೆಯ ಮೇಲೆ ಅಡಿಗಳಷ್ಟು ನಿರು ಹರಿಯುತ್ತಿದ್ದರೆ, ಭಾಗಮಂಡಲ-ನಾಪೋಕ್ಲು ರಸ್ತೆ ಸಂಪೂರ್ಣ ಜಲಾವೃತವಾಗಿದೆ.
ಗ್ರಾಮೀಣರ ಸುರಕ್ಷಿತ ಸಂಚಾರಕ್ಕೆ ಬೋಟ್ ಸಹಿತ ಕರ್ತವ್ಯಕ್ಕೆ ಹೋಂ ಗಾರ್ಡ್ಗಳ ನಿಯೋಜನೆ ಮಾಡಲಾಗಿದೆ. ಭಾಗಮಂಡಲ-ಕುದುಪಜೆ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ನದಿ ನೀರಿನ ರಭಸಕ್ಕೆ ಮೋರಿಯೊಂದು ಕೊಚ್ಚಿ ಹೋಗಿದ್ದು, ಗ್ರಾಮಕ್ಕೆ ಸಂಪರ್ಕ ಕಡಿತವಾಗಿದೆ.
ಮನೆಗಳಿಗೆ ನುಗ್ಗಿದ ನೀರು
ಮಡಿಕೇರಿ –ಮಂಗಳೂರು ರಸ್ತೆಯಲ್ಲಿ ಬರುವ ಕೊಯನಾಡು ಗ್ರಾಮದಲ್ಲಿ ಕಿಂಡಿ ಅನೆಕಟ್ಟು ತುಂಬಿ ತನ್ನ ಇಕ್ಕೆಲಗಳಲ್ಲಿ ಸೃಷ್ಟಿಸಿರುವ ಪ್ರವಾಹದಿಂದ ನಾಲ್ಕು ಮನೆಗಳು ಜಲಾವೃತವಾಗಿವೆ. ಅಣೆಕಟ್ಟಿಗೆ ಅಡ್ಡಲಾಗಿ ಸಿಲುಕಿಕೊಂಡ ಮರದಿಂದಾಗಿ ಮನೆಗಳಿಗೆ ನೀರು ನುಗ್ಗಿ ಅನಾಹುತವನ್ನು ಸೃಷ್ಟಿಸಿದೆ. ಮನೆ ಮಂದಿ ಮನೆ ಸಾಮಗ್ರಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾರ್ವಜನಿಕರ ಸಹಕಾರದಿಂದ ಸಾಗಿಸಿದ್ದಾರೆ.
ಮಳೆಯ ತೀವ್ರತೆ ಕಡಿಮೆಯಾಗದಿದ್ದಲ್ಲಿ ಕಿಂಡಿ ಅಣೆಕಟ್ಟೆಯಿಂದ ಉಂಟಾಗಿರುವ ಪ್ರವಾಹದಿಂದ ಮಡಿಕೇರಿ-ಮಂಗಳೂರು ರಸ್ತೆಯೂ ಮುಳುಗಡೆಯಾಗಿ ಪ್ರಮುಖ ಸಂಪರ್ಕ ಕಡಿತವಾಗುವ ಅಪಾಯ ಎದುರಾಗಿದೆ.
ಮಡಿಕೇರಿ ತಾಲ್ಲೂಕಿನ ಮುಕ್ಕೋಡ್ಲುವಿನಲ್ಲಿ ಭಾರೀ ಮಳೆಯಿಂದ ಕಿರು ಹೊಳೆ ಉಕ್ಕಿ ಹರಿಯುತ್ತಿದ್ದು, ಪ್ರವಾಹದ ನೀರಿನಿಂದ ಮುಕ್ಕೋಡ್ಲು ದೇವಸ್ಥಾನ ಸಂಪೂರ್ಣ ಜಲಾವೃತವಾಗಿದೆ.
ಪ್ರವಾಹದಿಂದ ಮುಕ್ಕೋಡ್ಲು-ಹೊದಕಾನ ರಸ್ತೆ ಸಂಪರ್ಕ ಕಡಿತವಾಗಿದೆಯಾದರೆ, ಮುಕ್ಕೋಡ್ಲು ಭದ್ರಕಾಳಿ ದೇವಸ್ಥಾನದ ತೂಗು ಸೇತುವೆಗೆ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿದೆ.
ಮಡಿಕೇರಿ ನಗರದ ಅಂಚಿನ ಗಾಳಿಬೀಡುವಿಗೆ ಒಳಪಟ್ಟ ಒಂದನೇ ಮೊಣ್ಣಂಗೇರಿಯ ರಸ್ತೆಯಲ್ಲಿ ನೀರು ಆವರಿಸಿಕೊಂಡಿದೆಯಾದರೆ, ಗಾಳಿಬೀಡು ಗಣಪರಿ ದೇವಸ್ಥಾನದ ಮುಂಭಾಗದ ರಸ್ತೆ ಜಲಾವೃತವಾಗಿದ್ದು, ಸಂಚಾರಕ್ಕೆ ಸಂಕಷ್ಟವನ್ನು ತಂದೊಡ್ಡಿದೆ.
ಬೊಳಿಬಾಣೆ ಸಂಪರ್ಕ ಕಡಿತ-ನಾಪೋಕ್ಲು -ಮೂರ್ನಾಡು ರಸ್ತೆಯ ಬೊಳಿಬಾಣೆಯಲ್ಲಿ ರಸ್ತೆ ಜಲಾವೃತವಾಗಿದ್ದು, ಸಂಪರ್ಕ ಕಡಿತವಾಗಿದೆ. ನಾಪೋಕ್ಲು, ಚೆರಿಯಪರಂಬು ಕಲ್ಲುಮೊಟ್ಟೆ ಸಂಪರ್ಕ ರಸ್ತೆಯಲ್ಲಿ ಕಾವೇರಿ ಪ್ರವಾಹ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ.
ಬೇತ್ರಿ ಸೇತುವೆ ಮುಳುಗಡೆ ಆತಂಕ- ಮಡಿಕೇರಿ-ವಿರಾಜಪೇಟೆ ನಡುವಿನ ಬೇತ್ರಿಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿರುವ ಸೇತುವೆಯ ಅಂಚಿಗೆ ಪ್ರವಾಹದ ನೀರು ಬಡಿಯುತ್ತಿದ್ದು, ಮಳೆಯ ಪ್ರಮಾಣ ಇದೇ ರೀತಿ ಮುಂದುವರಿದಲ್ಲಿ ಎರಡು ತಾಲ್ಲೂಕಿನ ಸಂಪರ್ಕ ಕಡಿತವಾಗುವ ಆತಂಕ ಎದುರಾಗಿದೆ.
::: ಶಾಲೆ ಹಿಂಭಾಗ ಬರೆ ಕುಸಿತ :::
ಸಂಪಾಜೆ ಕೊಯನಾಡು ಸರಕಾರಿ ಪ್ರಾಥಮಿಕ ಶಾಲೆಯ ಹಿಂಭಾಗದಲ್ಲಿ ಭಾರೀ ಪ್ರಮಾಣದ ಬರೆ ಕುಸಿತವಾಗಿರುವ ಘಟನೆ ನಡೆದಿದೆ. ಇದೇ ಶಾಲೆಯಲ್ಲಿ ಕಾಳಜಿ ಕೇಂದ್ರೆ ತೆರೆದು ಕೆಲವು ಕುಟುಂಬಗಳಿಗೆ ಆಶ್ರಯ ನೀಡಲಾಗಿತ್ತು. ಇದೀಗ ಈ ಕುಟುಂಬಗಳನ್ನು ಕೊಯನಾಡು ಶ್ರೀಗಣಪತಿ ದೇವಾಲಯದ ಸಭಾಂಗಣಕ್ಕೆ ಸ್ಥಳಾಂತರಿಸಲಾಗಿದೆ. ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಸೇರಿದಂತೆ ಎಲ್ಲಾ ಅಧಿಕಾರಿಗಳು ಕೊಯನಾಡು ಮತ್ತಿತರ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರಿಗೆ ಧೈರ್ಯ ತುಂಬಿದರು.