ಮುಂದಿನ ಆಗಸ್ಟ್ 15 ರೊಳಗೆ ಶಿಗ್ಗಾಂವಿಯಲ್ಲಿ 10 ಸಾವಿರ ಜನರಿಗೆ ಉದ್ಯೋಗ ನೀಡುವ ಸಂಕಲ್ಪ: ಸಿಎಂ ಬೊಮ್ಮಾಯಿ

Update: 2022-07-16 15:28 GMT

ಹಾವೇರಿ, ಜು. 16: ಮುಂದಿನ ಆಗಸ್ಟ್ 15 ರೊಳಗೆ ಶಿಗ್ಗಾಂವಿಯಲ್ಲಿ 10 ಸಾವಿರ ಜನರಿಗೆ ಉದ್ಯೋಗ ನೀಡುವ ಸಂಕಲ್ಪ ಮಾಡಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಶಿಗ್ಗಾಂವಿಯಲ್ಲಿ ಟೆಕ್ಸಟೈಲ್ ಪಾರ್ಕ್‍ನ ವಿವಿಧ ಕಾಮಗಾರಿಗಳಿಗೆ, ಸಿದ್ಧ ಉಡುಪು ಘಟಕದ ನಿರ್ಮಾಣ ಕಾಮಗಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ-4ರಿಂದ ಕಲ್ಯಾಣ ರಸ್ತೆ ಅಗಲೀಕರಣ ಹಾಗೂ ಸುಧಾರಣಾ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಎರಡು ಮೂರು ವರ್ಷಗಳಲ್ಲಿ ಎಲ್ಲಾ ತಾಲ್ಲೂಕುಗಳಲ್ಲಿ ಉದ್ಯೋಗ ನೀಡುವ ಉದ್ದಿಮೆಗಳು, ವಿಶೇಷವಾಗಿ ಹೆಣ್ಣುಮಕ್ಕಳಿಗೆ ಉದ್ಯೋಗ ಒದಗಿಸುವ ಗಾರ್ಮೆಂಟ್ ಕಾರ್ಖಾನೆಗಳನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ. ಶಿಗ್ಗಾವಿಯ ಟೆಕ್ಸ್ ಪೋರ್ಟ್‍ನ ವತಿಯಿಂದ ಮೊದಲ ಹಂತದಲ್ಲಿ ಮೂರು ಸಾವಿರ ಹಾಗೂ ಎರಡನೇ ಹಂತದಲ್ಲಿ 5 ಸಾವಿರ ಉದ್ಯೋಗವನ್ನು ನೀಡಲಿದೆ. ಜವಳಿ ಪಾರ್ಕ್‍ನಿಂದ ಒಟ್ಟು 10 ಸಾವಿರಕ್ಕಿಂತ ಹೆಚ್ಚು ಜನರಿಗೆ ಉದ್ಯೋಗ ದೊರೆಯಲಿದೆ. ಇದು ಸುಲಭದ ಮಾತಲ್ಲ. ಬೇರೆ ಯಾವ ಉದ್ಯಮಗಳಾಗಲಿ, ಸರಕಾರದಿಂದಾಗಲಿ ಇದು ಸಾಧ್ಯವಿಲ್ಲ. ಈ ಉದ್ಯಮಗಳಿಗೆ ರಫ್ತು ಮಾಡುವ ವಿಪುಲ ಅವಕಾಶವಿದೆ. ಇಡೀ ವಿಶ್ವ ಇಂದು ಭಾರತದ ಗಾರ್ಮೆಂಟ್ ಉದ್ಯಮದತ್ತ ನೋಡುತ್ತಿದೆ. ಕೇವಲ ಬೆಂಗಳೂರು, ಮುಂಬೈಯಂಥ ನಗರಗಳಲ್ಲಿ ಹೆಪ್ಪುಗಟ್ಟಲು ಬಿಡದೆ ಗ್ರಾಮಗಳಲ್ಲಿ  ಇದು ಸಾಧ್ಯವಾಗಬೇಕು. ಎಲ್ಲರ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಬೇಕೆಂಬ ಮಹತ್ವಾಕಾಂಕ್ಷೆಯಿಂದ ಈ ಯೋಜನೆಯನ್ನು ರೂಪಿಸಲಾಗಿದೆ ಎಂದರು.

ಎಲ್ಲಾ ತಾಲೂಕುಗಳಲ್ಲಿ ಜವಳಿ ಪಾರ್ಕ್‍ಗಳ ಸ್ಥಾಪನೆ: ಜವಳಿ ಕೈಗಾರಿಕೆಯಲ್ಲಿ ಹೆಚ್ಚಿನ ಜನರಿಗೆ ಕೆಲಸ ಸಿಗುತ್ತದೆ. ಬೆಂಗಳೂರಿನಲ್ಲಿಯೇ 10 ಲಕ್ಷಕ್ಕಿಂತ ಹೆಚ್ಚು ಜನ ಗಾರ್ಮೆಂಟ್ಸ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ. ಶೇ.90ರಷ್ಟು ಹೆಣ್ಣುಮಕ್ಕಳು ಇಂದು ಕುಟುಂಬಕ್ಕೆ ಕೊಡುವ ಶಕ್ತಿ ದುಡಿಮೆಯಿಂದ ಬಂದಿದೆ. ಉತ್ತರ ಕರ್ನಾಟಕದ ಎಲ್ಲ ತಾಲ್ಲೂಕುಗಳಲ್ಲ ಆಗಬೇಕೆಂಬ ಕನಸು ನನ್ನದು. ಇಂತಹ ಜವಳಿ ಪಾರ್ಕ್‍ಗಳನ್ನು ಎಲ್ಲಾ ತಾಲ್ಲೂಕುಗಳಲ್ಲಿ ಸ್ಥಾಪಿಸಲಾಗುವುದು. ಸ್ವಲ್ಪ ಸಮಯದ ಅವಶ್ಯಕತೆ ಇದೆ ಎಂದರು.

ವಿದ್ಯೆ–ಉದ್ಯೋಗ ನಮ್ಮ ಬದುಕಿನ ಭವ್ಯ ಭವಿಷ್ಯದ ಅಸ್ತ್ರಗಳು: ವಿದ್ಯೆ–ಉದ್ಯೋಗ ನಮ್ಮ ಬದುಕಿನ ಭವ್ಯ ಭವಿಷ್ಯಕ್ಕಾಗಿ ಇರುವ ಅಸ್ತ್ರಗಳು. ಇಲ್ಲೇ ಉದ್ಯೋಗ ಸೃಷ್ಟಿಯಾದರೆ, ರೈತರ ಹೆಣ್ಣುಮಕ್ಕಳಿಗೆ ಆರ್ಥಿಕ ಸಬಲೀಕರಣವಾಗುತ್ತದೆ. ಆದಾಯ ಹೆಚ್ಚಾಗುತ್ತದೆ. ಅವರು ಸ್ವಾಭಿಮಾನದ ಬದುಕು ಬದುಕಬಹುದು. ಹೆಚ್ಚು ಉದ್ಯೋಗ ನೀಡುವ ಕೈಗಾರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹಕಗಳನ್ನು ನೀಡಲಾಗುವುದು. ರೈತರು ಬೆಳೆದ ಪದಾರ್ಥಗಳ ಆಗ್ರೋ ಕೈಗಾರಿಕೆಗಳಿಗೆ ಮಹತ್ವ ನೀಡಲಾಗಿದೆ. ರೈತರು ಬೆಳೆದ ಪದಾರ್ಥಗಳನ್ನು ಸಂಸ್ಕರಿಸಿದರೆ ಹೆಚ್ಚಿನ ಬೆಲೆ ದೊರೆಯುತ್ತದೆ. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಗುಜರಾತ್‍ನ ಅಂಬುಜಾ ಕಾರ್ಖಾನೆ ಇದೆ. ಎಥನಾಲ್ ಕಾರ್ಖಾನೆ ಸೆಪ್ಟೆಂಬರ್ ಮಾಹೆಯಲ್ಲಿ ಬರುತ್ತಿದೆ. ಅಲ್ಲಿಯೂ 2 ಸಾವಿರ ಜನರಿಗೆ ಉದ್ಯೋಗ ನೀಡಲಾಗುವುದು. ಯುವಕರಿಗೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ, ಪರಿಣಿತಿ ನೀಡಿ ಅವರೂ ಬದುಕಿನಲ್ಲಿ ಮುಂದೆ ಬರಬೇಕೆಂಬ ಆಶಯದೊಂದಿಗೆ ಈ ಎಲ್ಲ ಕೆಲಸಗಳನ್ನು ಮಾಡುತ್ತಿದ್ದೇವೆ ಎಂದರು.

ಶಿಗ್ಗಾಂವ ತಾಲ್ಲೂಕಿನ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ: ಟೆಕ್ಸ್‍ಟೈಲ್ ಪಾರ್ಕ್‍ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿಸಲಾಗುವುದು. ಶಿಗ್ಗಾಂವ ತಾಲ್ಲೂಕಿನ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ. ಸುಮಾರು 29 ಕೋಟಿರೂ. ವೆಚ್ಚದಲ್ಲಿ ಡಿಪೋ, 200 ಕೋಟಿ ವೆಚ್ಚದಲ್ಲಿ ಆಸ್ಪತ್ರೆ, ಜಿಟಿಟಿಸಿ, ಕೋಲ್ಡ್ ಸ್ಟೋರೇಜ್, ವಸತಿ ಶಾಲೆಗಳು, ಹೊಸ ಪಿಯು ಕಾಲೇಜು, ಮನೆಗಳ ನಿರ್ಮಾಣ ಕೈಗೊಳ್ಳಲಿದ್ದೇವೆ. ಸುಮಾರು 3000 ಮನೆಗಳನ್ನು ಬಂಕಾಪುರ, ಶಿಗ್ಗಾಂವಿ, ಸವಣೂರುನಲ್ಲಿ ಕಟ್ಟಲಾಗುತ್ತಿದೆ. ಸುಮಾರು 80 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣವಾಗುತ್ತಿದೆ. ಅಭಿವೃದ್ಧಿ ವೇಗ ಉತ್ತುಂಗಕ್ಕೆ ಬರುತ್ತಿದ್ದು, ಅದರ ಪ್ರತಿಫಲ ರೈತರಿಗಾಗಬೇಕು. 3-4 ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ರೈತರಿಗೆ ಬೆಳೆವಿಮೆ ಬಂದಿಲ್ಲದಿರುವುದನ್ನು ಗಮನಿಸಲಾಗಿದೆ. ಬೆಳೆಗಳ ಮರುಸಮೀಕ್ಷೆ ನಡೆಸಿ ಶೀಘ್ರ ಬೆಳೆವಿಮೆ ನೀಡಲು ಆದೇಶ ನೀಡಲಾಗಿದೆ ಎಂದರು.

2023 ಜನವರಿ ಅಂತ್ಯದೊಳಗೆ ಟೆಕ್ಸ್ ಟೈಲ್ ಪಾರ್ಕ್‍ನಲ್ಲಿ ಉತ್ಪಾದನೆ ಪ್ರಾರಂಭ: ಕೃಷಿ, ಕೈಗಾರಿಕೆ, ಸೇವಾ ವಲಯದ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮಗಳನ್ನು ಆಯವ್ಯಯದಲ್ಲಿ ರೂಪಿಸಲಾಗಿದೆ. ಸ್ತ್ರೀಶಕ್ತಿ ಸಂಘಗಳಿಗೆ ಆಂಕರ್ ಬ್ಯಾಂಕಿನ ಮೂಲಕ 1.50 ಲಕ್ಷಗಳ ಆರ್ಥಿಕ ನೆರವು, ಪ್ರಾಜೆಕ್ಟ್ ಗಳನ್ನು ಒದಗಿಸಿ, ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಒದಗಿಸುವ ಯೋಜನೆಗೆ ಜುಲೈ 28 ರಂದು ಉದ್ಘಾಟನೆ ಮಾಡಲಿದ್ದೇನೆ. ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಶಿಕ್ಷಣ ಹಾಗೂ ಉದ್ಯೋಗ ನೀಡಲು ಪ್ರಾಶಸ್ತ್ಯ ನೀಡಲಾಗಿದೆ. ರಾಜ್ಯದ ಶೈಕ್ಷಣಿಕ ಕೇಂದ್ರಗಳಲ್ಲಿ ತಲಾ 1000 ವಿದ್ಯಾರ್ಥಿಗಳಿಗೆ ದೀನದಯಾಳ್ ಉಪಾಧ್ಯಾಯ ವಸತಿ ಸಮುಚ್ಛಯ, ಹಾವೇರಿಯಲ್ಲಿ 1000 ಎಕರೆಯ ಇಂಡಸ್ಟ್ರಿಯಲ್ ಟೌನ್ ನಿರ್ಮಾಣ ಕೈಗೊಳ್ಳಲಿದ್ದು ಉದ್ಯೋಗ ಸೃಷ್ಟಿಯಾಗಲಿದೆ. ರಾಜ್ಯದಲ್ಲಿ ಔದ್ಯೋಗಿಕ ಕ್ರಾಂತಿ ನಡೆಯುತ್ತಿದೆ.ಯಾವುದೇ ಭೇದವಿಲ್ಲದೇ ಸಮಗ್ರ ತಾಲ್ಲೂಕಿನ ಅಭಿವೃದ್ಧಿಯನ್ನು ಕೈಗೊಳ್ಳಲಾಗುವುದು. ಆಸಕ್ತರು ಅಕ್ಟೋಬರ್ ತಿಂಗಳಿನಿಂದ ತರಬೇತಿ ಪಡೆಯಬಹುದಾಗಿದ್ದು, ಜನವರಿ ಅಂತ್ಯದೊಳಗೆ ಟೆಕ್ಸ್ ಟೈಲ್ ಪಾರ್ಕ್‍ನಲ್ಲಿ ಉತ್ಪಾದನೆ ಪ್ರಾರಂಭವಾಗಲಿದೆ. ಉದ್ಯೋಗದಿಂದ ಸ್ವಾಭಿಮಾನದ ಬದುಕನ್ನು ಬದುಕಬಹುದು. ಸರಕಾರದ ಈ ಎಲ್ಲ ಕಾರ್ಯಕ್ರಮಗಳಿಗೆ ಜನರ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News