ಬಾಗಲಕೋಟೆ: ಸಿದ್ದರಾಮಯ್ಯ ವಾಹನಕ್ಕೆ ಹಣ ಎಸೆದ ಮಹಿಳೆಯಿಂದ ಕ್ಷಮೆಯಾಚನೆ

Update: 2022-07-17 10:00 GMT

ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದ ಹಣವನ್ನು ಅವರ ಬೆಂಗಾವಲು ವಾಹನಕ್ಕೆ ಬಿಸಾಕಿದ್ದ ಮಹಿಳೆ ಸಾಮಾಜಿಕ ತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಕ್ಷಮೆ ಯಾಚಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಅಗೌರವ ತೋರಿಸುವ ಯಾವುದೇ ಉದ್ದೇಶ ನಮ್ಮದಾಗಿರಲಿಲ್ಲ ಎಂದು ಅವರು ಹೇಳಿದ್ದಾರೆ. 

"ಕೆಲವರು ಸೃಷ್ಟಿ ಮಾಡಿದ ಅಶಾಂತಿಯ ವಾತಾವರಣದಿಂದ ಕೆರೂರಿನಲ್ಲಿ ಉದ್ರಿಕ್ರ ವಾತಾವರಣ ನಿರ್ಮಾಣವಾಗಿದೆ. ಯಾವುದೇ ತಪ್ಪು ಮಾಡದಿದ್ದರೂ ಅಮಾಯಕರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಹೀಗಾಗಿ ನಮ್ಮ ಮನಸ್ಸಿಗೆ ಭಾರಿ ನೋವಾಗಿತ್ತು. 
ಈ ನೋವಿನಲ್ಲಿ ಸಿದ್ದರಾಮಯ್ಯ ಅವರ ಮಂದೆ ಅನುಚಿತವಾಗಿ ನಡೆದುಕೊಳ್ಳಬೇಕಾಯಿತು. ಇದಕ್ಕಾಗಿ ನಾವು ತೀವ್ರ ವಿಷಾದ ವ್ಯಕ್ತಪಡಿಸುತ್ತೇವೆ. ಸಿದ್ದರಾಮಯ್ಯ ಅವರ ಮನಸ್ಸಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇವೆ" ಎಂದು ಅವರು ಹೇಳಿದ್ದಾರೆ.

ಸಿದ್ದರಾಮಯ್ಯ ಅವರಿಗೆ ಅಗೌರವ ತೋರಿಸುವ ಯಾವುದೇ ಉದ್ದೇಶ ನಮ್ಮದಾಗಿರಲಿಲ್ಲ. ಅವರಿಗೆ ಅವಮಾನ ಮಾಡುವ ಉದ್ದೇಶವೂ ಎಳ್ಳಷ್ಟು ನಮ್ಮಲ್ಲಿ ಇರಲಿಲ್ಲ. ನಡೆದಿರುವ ಘಟನೆಗಳ ಹಿನ್ನೆಲೆಯಲ್ಲಿ ನಮ್ಮ ಮನಸ್ಸಿಗೆ ತೀವ್ರ ಘಾಸಿಯಗಿದೆ. ಸಿದ್ದರಾಮಯ್ಯ ಅವರು ಹಣ ನೀಡುವುದಕ್ಕಿಂತ ಅವರು ನಮಗೆ ನ್ಯಾಯ ಒದಗಿಸಿಕೊಡಬೇಕು ಎಂಬುದೇ ನಮ್ಮ ಕಳಕಳಿಯ ಮನವಿ. ಸಿದ್ದರಾಮಯ್ಯ ಅವರು ನಮ್ಮ ಸಮುದಾಯದ ನಾಯಕರು. ಸದಾ ನಮ್ಮ ಸಮುದಾಯದ ಪರ ನಿಲ್ಲುವ ರಾಜಕಾರಣಿ ಅವರು. ಈ ರೀತಿ ಇರುವಾಗ ಅವರಿಗೆ ಅವಮಾನ ಮಾಡುವ ಮಟ್ಟಕ್ಕೆ ನಾವು ಹೋಗುವುದಿಲ್ಲ. ಆಕಸ್ಮಿಕವಾಗಿ ನಡೆದಿರುವ ಘಟನೆ ಇದಾಗಿಯೇ ಹೊರತು ಸಿದ್ದರಾಮಯ್ಯ ಅವರಿಗೆ ಅಗೌರವ ತೋರಿಸುವ ಉದ್ದೇಶ ನಮ್ಮದಾಗಿರಲಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News