ಶಿಶು ಮರಣ ಪ್ರಮಾಣ ಒಂದಂಕಿಗೆ ಇಳಿಸುವ ಗುರಿ: ಮುಖ್ಯಮಂತ್ರಿ ಬೊಮ್ಮಾಯಿ

Update: 2022-07-17 12:39 GMT

ಬೆಂಗಳೂರು, ಜು. 17: ‘ಶಿಶು ಮರಣ ಪ್ರಮಾಣವು ರಾಜ್ಯದಲ್ಲಿ ಶೇ.2ರಷ್ಟಿದ್ದು, ಇದನ್ನು ಒಂದಂಕಿಗೆ ಇಳಿಸುವುದು ನಮ್ಮ ಗುರಿಯಾಗಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಕಟಿಸಿದ್ದಾರೆ.

ರವಿವಾರ ನಗರದ ರೇನ್ಬೋ ಚಿಲ್ಡ್ರನ್ ಹಾಸ್ಪಿಟಲ್ ಆಯೋಜಿಸಿರುವ ಮಕ್ಕಳ ವೈದ್ಯಕೀಯ ಶಾಸ್ತ್ರದಲ್ಲಿನ ವಿಶೇಷ ನವೀಕರಣಗಳ ಕುರಿತ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ತಾಯಿ ಮರಣ ಪ್ರಮಾಣದಲ್ಲಿಯೂ ಇಳಿಕೆಯಾಗಬೇಕು. ರಾಜ್ಯದ 5-6 ಜಿಲ್ಲೆಗಳ ಕಾರಣದಿಂದ ಈ ಪ್ರಮಾಣ ಇಳಿಕೆಯಾಗುತ್ತಿಲ್ಲ.

ಹೀಗಾಗಿಯೇ ರಾಜ್ಯದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಅಭಿವೃದ್ಧಿ ಆಕಾಂಕ್ಷಿ ತಾಲೂಕುಗಳನ್ನು  ಗುರುತಿಸಿ ಶಿಕ್ಷಣ, ಆರೋಗ್ಯ, ಅಪೌಷ್ಟಿಕತೆ, ಮಹಿಳಾ ಮತ್ತು ಮಕ್ಕಳ ಆರೋಗ್ಯದ ಮಾನದಂಡಗಳನ್ನು ಇರಿಸಿಕೊಂಡು ಅಭಿವೃದ್ಧಿಗೆ ಕ್ರಮ ವಹಿಸಲಾಗಿದೆ. ಈ 5 ಜಿಲ್ಲೆಗಳಲ್ಲಿ ಉತ್ತಮ ಸೌಲಭ್ಯಗಳನ್ನು ಒದಗಿಸುವ ಮೂಲಕ ಐಎಂಆರ್ ಇಳಿಕೆ ಮಾಡಲು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ಸ್ವಸ್ಥ  ಭವಿಷ್ಯಕ್ಕಾಗಿ ಮಕ್ಕಳ ತಜ್ಞರು ಈ ಕಾರ್ಯದಲ್ಲಿ ನಮ್ಮೊಂದಿಗೆ ಕೈಜೋಡಿಸಬೇಕು' ಎಂದು ಕರೆ ನೀಡಿದರು

ಅಪೌಷ್ಟಿಕತೆ ನಿವಾರಣೆ: ಬಜೆಟ್‍ನಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಅನುದಾನವನ್ನು ಹೆಚ್ವಿಸಲಾಗಿದೆ.  ಅಪೌಷ್ಟಿಕತೆ ನಿವಾರಣೆಗೆ ಒತ್ತು ನೀಡಲಾಗಿದೆ. ತೀವ್ರ ಅಪೌಷ್ಟಿಕತೆಯುಳ್ಳ ಮಕ್ಕಳಿಗೆ ನೀಡುವ ಆಹಾರವನ್ನೇ ಸಾಮಾನ್ಯ ಅಪೌಷ್ಟಿಕತೆಯುಳ್ಳ ಮಕ್ಕಳಿಗೂ ನೀಡಲಾಗುತ್ತಿದೆ. ಅಂಗನವಾಡಿಗಳಲ್ಲಿ ಮಕ್ಕಳಿಗೆ ಉತ್ತಮ ಆಹಾರ ನೀಡುತ್ತಿರುವುದಲ್ಲದೆ, ಕಾರ್ಮಿಕರ ಮಕ್ಕಳಿಗೂ ವಿಶೇಷ ಪೌಷ್ಟಿಕ ಆಹಾರ ಒದಗಿಸಲಾಗುತ್ತಿದೆ. ನಮ್ಮದು ಸೂಕ್ಷ್ಮ ಚಿಂತನೆಗಳುಳ್ಳ ಸರಕಾರ. ಬಡತನ ನಿರ್ಮೂಲನೆಗೆ ಕ್ರಮ ವಹಿಸಲಾಗಿದೆ' ಎಂದು ಹೇಳಿದರು.

‘ಶಿಕ್ಷಣ, ಮೂಲ ಸೌಕರ್ಯ ಸೇರಿದಂತೆ ತಾಂತ್ರಿಕ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ತಾಂತ್ರಿಕ ಆಧಾರಿತ ರಾಜ್ಯ ನಮ್ಮದು. ಹಳ್ಳಿಗಳಲ್ಲಿ ನಮ್ಮ ಯುವಕರು ತಾಂತ್ರಿಕವಾಗಿ ಕೌಶಲ್ಯಯುಳ್ಳವರಾಗಿರಬೇಕು. ಈ ನಿಟ್ಟಿನಲ್ಲಿ ನಮ್ಮ ಸರಕಾರ ಕಾರ್ಯೋನ್ಮುಖವಾಗಿದೆ. ನಾವೆಲ್ಲರೂ ಪರಿಹಾರದ ಭಾಗವಾಗೋಣ. ಆರೋಗ್ಯ ಕುರಿತ ಸವಾಲುಗಳನ್ನು ಗೆಲ್ಲೋಣ. ತಾಯಿ ಗರ್ಭದಿಂದ ಭೂ ಗರ್ಭದವರೆಗಿನ ಪಯಣದ ಮಧ್ಯೆ ನಮ್ಮ ಪಾತ್ರಗಳನ್ನು ಉತ್ತಮವಾಗಿ ನಿರ್ವಹಿಸೋಣ' ಎಂದು ಅವರು  ತಿಳಿಸಿದರು. 

‘ಗರ್ಭಧಾರಣೆಯಿಂದ ಹಿಡಿದು ಪೂರ್ಣಪ್ರಮಾಣದ ಮಾನವನ ಸೃಷ್ಟಿ ಅದ್ಭುತವಾದುದ್ದು. ಈ ನಿಟ್ಟಿನಲ್ಲಿ ಮಕ್ಕಳ ತಜ್ಞರ ಪಾತ್ರ ಗರ್ಭಧಾರಣೆಯಿಂದಲೇ ಪ್ರಾರಂಭವಾಗುತ್ತದೆ. ತಾಯಿಯ ಆರೋಗ್ಯ ಮಗುವಿನ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಗರ್ಭದಲ್ಲಿಯೇ ಮಗುವಿಗೆ ಪೌಷ್ಟಿಕಾಂಶ ದೊರೆಯಬೇಕು. ಗರ್ಭಿಣಿಯರ ಆರೋಗ್ಯ ಕಾಪಾಡುವುದು ಸರಕಾರ ಮತ್ತು ಸಮಾಜದ ಜವಾಬ್ದಾರಿ' ಎಂದು ಅವರು ನುಡಿದರು.

‘ದೇಶದಲ್ಲಿ ಅಪೌಷ್ಟಿಕತೆಯಿಂದಾಗಿ ಕುರುಡಾಗಿರುವವ ಸಂಖ್ಯೆ ಹೆಚ್ಚಿದೆ. ಅಪೌಷ್ಟಿಕತೆಯಿಂದ ವಿವಿಧ ಸಮಸ್ಯೆ ಗಳನ್ನು ಹೊಟ್ಟುಕೊಂಡೇ ಹುಟ್ಟುವವರ ಸಂಖ್ಯೆಯೂ ಹೆಚ್ಚಿದೆ. ಸೂಕ್ತ ಪೌಷ್ಟಿಕ ಆಹಾರ ಹಾಗೂ ಕಾಳಜಿ ವಹಿಸಬೇಕು. ಸ್ವಸ್ಥ ಸಮಾಜ ನಿರ್ಮಾಣಕ್ಕೆ ಇದು ಸಕಾಲ.  ತಾಯಿಯ ಆರೋಗ್ಯದಿಂದ ಹಿಡಿದು, ಕುಟುಂಬದ ಆರೋಗ್ಯ, ಕುಟುಂಬದ ಆರ್ಥಿಕ ಸಬಲೀಕರಣ, ಆರೋಗ್ಯಕವಂತ ಮಗುವಿನ ಜನನ,  ಮಗುವಿನ ಶಿಕ್ಷಣ ಸೇರಿದಂತೆ ಸಮಗ್ರ ಅಭಿವೃದ್ಧಿಯಾಗಬೇಕು. ವೈಜ್ಞಾನಿಕವಾಗಿ ಆಲೋಚಿಸುವ ಸಚಿವರು ಹಾಗೂ ಅಧಿಕಾರಗಳ ತಂಡ ನಮ್ಮಲ್ಲಿದ್ದು, ಪ್ರಗತಿಪರ ಚಿಂತನೆಯುಳ್ಳ ಸರಕಾರ ನಮ್ಮದು' ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ತೋಟಗಾರಿಕೆ ಸಚಿವ ಮುನಿರತ್ನ, ಸಿಎಂ ರಾಜಕೀಯ ಕಾರ್ಯದರ್ಶಿಡಿ.ಎನ್.ಜೀವರಾಜ್, ರೇನ್‍ಬೋ ಆಸ್ಪತ್ರೆಯ ನಿತ್ಯಾನಂದ ಸೇರಿದಂತೆ ಇನ್ನಿತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News