ಕೊಡವರ ಬಗ್ಗೆ ಅವಹೇಳನ ಪ್ರಕರಣ: ಆರೋಪಿಯ ಗಡಿಪಾರಿಗೆ ಒತ್ತಾಯ

Update: 2022-07-20 12:41 GMT
ದಿವಿನ್ ದೇವಯ್ಯ- ಆರೋಪಿ

ಮಡಿಕೇರಿ, ಜು.20: ಕೊಡಗಿನಲ್ಲಿ ನಡೆದ ಜನಾಂಗೀಯ ನಿಂದನೆ ಪ್ರಕರಣ ಮತ್ತು ಈ ನೆಪದಲ್ಲಿ ಮುಸ್ಲಿಮ್ ಸಮುದಾಯವನ್ನು ತೇಜೋವದೆ ಮಾಡಿದ ಸಮಾಜಘಾತಕ ಕೃತ್ಯಕ್ಕೆ ಸೂಕ್ತ ನ್ಯಾಯ ಒದಗಿಸುವಂತೆ ಕೋರಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರನ್ನು ಭೇಟಿ ಮಾಡಿದ ಕೊಡಗಿನ ಅಲ್ಪಸಂಖ್ಯಾತ ಪ್ರಮುಖರ ನಿಯೋಗವೊಂದು, ಪ್ರಕರಣದಲ್ಲಿ ಇದೀಗ ಬಂಧಿತನಾಗಿರುವ ಆರೋಪಿಯನ್ನು ಗಡಿಪಾರು ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸಿದೆ. 

ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಕರ್ನಾಟಕ ಪೊಲೀಸ್ ಪ್ರಧಾನ ಕಚೇರಿಯಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ ಪ್ರವೀಣ್ ಸೂದ್ ಮತ್ತು ರಾಜ್ಯ ಪೊಲೀಸ್ ಅಪರಾಧ ವಿಭಾಗದ ಸಹಾಯಕ ಇನ್ ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ ಸೀಮಾ ಲಾಟ್ಕರ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ ಈ ನಿಯೋಗ, ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ ನಲ್ಲಿ ಬಂದ ಪೋಸ್ಟ್ ಗೆ ಸಂಬಂಧಿಸಿದಂತೆ  ಆರೋಪಿಯು ನಕಲಿ ಖಾತೆಯನ್ನು ಸೃಷ್ಟಿಸಿ ಕಳೆದ 20ದಿನಗಳ ಹಿಂದೆ ಜನಾಂಗೀಯ ನಿಂದನೆ ಮಾಡಿದ ಪ್ರಕರಣ ಇಡೀ ಕೊಡಗು ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಗೆ ಕಾರಣವಾಗಿತ್ತು. ಈ ವ್ಯಕ್ತಿ ಕೊಡವರ ಆರಾಧ್ಯ ದೇವತೆ ಕಾವೇರಿ ಮಾತೆಯನ್ನು ಮತ್ತು ಕೊಡವ ಮಹಿಳೆಯರನ್ನು ತೀರಾ ಅವಮಾನಿಸುವ ರೀತಿಯಲ್ಲಿ ನಿಂದಿಸುವ ಮೂಲಕ ಜನಾಂಗೀಯ ಸಂಘರ್ಷಕ್ಕೆ ಸಂಚು ರೂಪಿಸಿದ್ದ. ಈ ವ್ಯವಸ್ಥಿತ ಪಿತೂರಿಯ ಹಿಂದೆ  ಪ್ರಭಾವಿ ಜಾಲವೊಂದು ಕಾರ್ಯನಿರ್ವಹಿಸಿರುವ ಶಂಕೆಯಿದ್ದು, ಆದ್ದರಿಂದ ಇಡೀ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಕೃತ್ಯ ಬೆಳಕಿಗೆ ಬರುತ್ತಿದ್ದಂತೆ ಇದನ್ನು ಮುಸ್ಲಿಮ್ ಸಮಿದಾಯಕ್ಕೆ ಸೇರಿದ ವ್ಯಕ್ತಿಗಳೇ ಮಾಡಿರುತ್ತಾರೆ ಎಂಬ ಸ್ವಯಂನಿರ್ಧಾರಕ್ಕೆ ಬಂದ ಸಂಘಪರಿವಾರ ಹಾಗೂ ಕೆಲವು ಸಂಘ-ಸಂಸ್ಥೆಗಳು ಮುಸ್ಲಿಮ್ ಜನಾಂಗವನ್ನು ಗುರಿಯಾಗಿಸಿ ವ್ಯಾಪಕವಾಗಿ ತೇಜೋವಧೆ ಮಾಡಿರುತ್ತಾರೆ. ಅಲ್ಲದೆ ಕೆಲವು ಸಂಘ-ಸಂಸ್ಥೆಗಳು ಕೊಡಗಿನ ಮುಸ್ಲಿಮರೇ ಈ ಕೃತ್ಯ ಎಸಗಿರುತ್ತಾರೆ ಎಂದು ಕಲ್ಪಿಸಿಕೊಂಡು ಪತ್ರಿಕಾ ಹೇಳಿಕೆ ಮೂಲಕವೂ ತೀವ್ರ ಅಪಪ್ರಚಾರ ಮಾಡಿ ಕೊಡಗಿನಲ್ಲಿ ಕೋಮುಗಲಭೆ ಸೃಷ್ಟಿಸಲು ತೀವ್ರ ಪ್ರಯತ್ನ ನಡೆಸಿದ್ದರು ಎಂದು ನಿಯೋಗದಲ್ಲಿದ್ದ ಪ್ರಮುಖರು ಡಿಜಿಪಿ ಅವರ ಗಮನ ಸೆಳೆದಿದ್ದಾರೆ. 

ಜನಾಂಗೀಯ ದ್ವೇಷ ಹುಟ್ಟು ಹಾಕುವ ಆರೋಪಿಯ ಸಂಚು ಬಹಿರಂಗವಾಗುತ್ತಿದ್ದಂತೆ ಈ ಕೃತ್ಯಕ್ಕೆ ಯಾವುದೇ ಸಂಬಂಧವಿಲ್ಲದ ಸಿದ್ದಾಪುರದ ಮೊಹಮ್ಮದ್ ಅಸ್ಫಾಕ್ ಎಂಬ 17 ವರ್ಷ ಪ್ರಾಯದ ಅಮಾಯಕ ಯುವಕನ ಚಿತ್ರವನ್ನು ಸಾಮಾಜಿಕ ಜಾಲತಾಣದಿಂದ ತೆಗೆದು ಈತನೇ ಈ ಕೃತ್ಯವೆಸಗಿರುವುದಾಗಿ ವ್ಯಾಪಕವಾದ ಪ್ರಚಾರ ಮಾಡಿರುತ್ತಾರೆ. ಇದರಿಂದ ಈ ಯುವಕನಿಗೆ ಮತ್ತು  ಕುಟುಂಬದವರಿಗೆ ತೀವ್ರ ರೀತಿಯ ಮಾನಸಿಕ ಹಿಂಸೆಯಾಗಿದೆ. ಈ ಕಾರಣದಿಂದ ಮಗನ ಭಾವಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ತೇಜೋವದೆ ನಡೆಸಲಾಗಿದೆ ಎಂದು ಯುವಕ ಮುಹಮ್ಮದ್ ಅಶ್ಫಾಕ್ ನ ತಂದೆ  ಪೊಲೀಸರಿಗೆ ದೂರು ನೀಡಿದ್ದರೂ ಇದುವರೆಗೆ ಪ್ರಕರಣ ದಾಖಲಾಗಿರುವುದಿಲ್ಲ ಎಂದು ನಿಯೋಗ ಡಿಜಿಪಿ ಅವರಲ್ಲಿ ದೂರಿತು.

ಕೊಡವರ ವಿರುದ್ಧ ಜನಾಂಗೀಯ ನಿಂದನೆ ಮಾಡಿ ಅದನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡಿರುವ ಹಿಂದೆ ವ್ಯವಸ್ಥಿತವಾದ ಷಡ್ಯಂತರವಿದೆ.  ಕೋಮುಗಲಭೆ ಸೃಷ್ಟಿಸಲು ಮಾಡಲಾಗಿರುವ ಈ ಸಂಚಿನಲ್ಲಿ ಸಮಾಜಘಾತುಕ ಮತ್ತು ವಿದ್ವಾಂಸಕ ಶಕ್ತಿಗಳ ಕೈವಾಡವಿದೆ. ಕೊಡಗಿನಲ್ಲಿ ಈ ಹಿಂದಿನಿಂದಲೂ ಕೋಮುಗಲಭೆ ಸೃಷ್ಟಿಸಲು ನಿರಂತರವಾದ ಶ್ರಮ ನಡೆಸಲಾಗುತ್ತಿದೆ. ಜನಾಂಗೀಯ ನಿಂದನೆಯನ್ನು ನೆಪವಾಗಿಸಿಕೊಂಡು ತೀವ್ರ ರೀತಿಯ ಪ್ರತಿಭಟನೆಯ ಮೂಲಕ ಗಲಭೆ ನಡೆಸುವ ಹುನ್ನಾರ ನಡೆದಿತ್ತು. ಆದರೆ ಇದೀಗ ಆರೋಪಿ ಮುಸ್ಲಿಂ ಅಲ್ಲ ಎಂದು ಬಹಿರಂಗಗೊಂಡ ಕಾರಣ ಎಲ್ಲಾ ಪ್ರತಿಭಟನೆಗಳನ್ನು ರದ್ದುಗೊಳಿಸಲಾಗಿದೆ. ಇದರಿಂದ ಈ ಪ್ರತಿಭಟನೆಯ ಹಿಂದಿನ ಉದ್ದೇಶವನ್ನು ಅರ್ಥೈಸಿಕೊಳ್ಳಬಹುದಾಗಿದೆ ಎಂದು ಪ್ರಮುಖರು ಹೇಳಿದರು.

ಪೊಲೀಸ್ ಇಲಾಖೆಯ ಸಮಗ್ರ ತನಿಖೆಯ ಮೂಲಕ ಮಾತ್ರವಷ್ಟೇ ಈ ಸಂಚಿನ ಸತ್ಯಾಂಶವನ್ನು ಹೊರಗೆಳೆಯಲು ಸಾಧ್ಯ. ಕೊಡಗು ಜಿಲ್ಲೆಯಲ್ಲಿ ಏನಾದರೂ ಮಾಡಿ ಕೋಮು ಗಲಭೆ ಸೃಷ್ಟಿಸಿ ಅದರ ಲಾಭವನ್ನು ಪಡೆದುಕೊಳ್ಳಬೇಕು ಎಂಬ ದುರುದ್ದೇಶದಿಂದ ಅಗೋಚರ ಶಕ್ತಿಯೊಂದು ಹಿಂದಿನಿಂದಲೂ ನಿರಂತರವಾಗಿ ಕಾರ್ಯಾಚರಿಸುತ್ತಿರುವ ಬಗ್ಗೆ ಬಲವಾದ ಶಂಕೆಯಿದೆ. ಇದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು.

ಇದಕ್ಕಾಗಿ ಮತೀಯ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳನ್ನು ವ್ಯಾಪಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಇದನ್ನು ಕಟ್ಟು ನಿಟ್ಟಾಗಿ ನಿಯಂತ್ರಿಸಬೇಕು ಎಂದು ಪ್ರಮುಖರು ಡಿಜಿಪಿಯವರಲ್ಲಿ ಆಗ್ರಹಿಸಿದರು.  

ಆರೋಪಿಯು ರಾಜಕೀಯ ಪ್ರಭಾವವಿರುವ ಕೌಟುಂಬಿಕ ಹಿನ್ನೆಲೆಯವನಾದ್ದರಿಂದ ಮುಂದೆ ಸಾಕ್ಷ್ಯ ನಾಶಪಡಿಸುವ ಎಲ್ಲಾ ಸಾಧ್ಯತೆಗಳಿದ್ದು, ಈ ಬಗ್ಗೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು. ಅಮಾಯಕ ಯುವಕ ಮೊಹಮ್ಮದ್ ಅಸ್ಫಾಕ್ ನ ತಂದೆ ಸಿದ್ದಾಪುರ ಪೊಲೀಸ್ ಠಾಣೆಗೆ ನೀಡಿದ ದೂರನ್ನು ಪರಿಗಣಿಸಿ ಕೂಡಲೇ ಸಂಬಂಧಿಸಿದವರ ವಿರುದ್ಧ ಪ್ರಕರಣ ದಾಖಲಿಸಬೇಕು. ಈ ವಿಚಾರದಲ್ಲಿ ಸಿದ್ದಾಪುರದ ಅಮಾಯಕ ಯುವಕನ ಹೆಸರನ್ನು ಅನಗತ್ಯವಾಗಿ ಎಳೆದು ತಂದು ಅವನ ಭಾವಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿ ತೇಜೋವಧೆ ಮಾಡಿರುವವರ ಎಲ್ಲರ ವಿರುದ್ಧವು ಪ್ರಕರಣ ದಾಖಲಿಸಬೇಕು ಮತ್ತು ಯುವಕನ ಮತ್ತು ಯುವಕನ ಕುಟುಂಬದವರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂಬ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ಇದೇ ಸಂದರ್ಭದಲ್ಲಿ ಡಿ.ಜಿ.ಪಿ. ಅವರಿಗೆ ನೀಡಲಾಯಿತು. ಮನವಿ ಸ್ವೀಕರಿಸಿದ ಡಿಜಿಪಿ ಪ್ರವೀಣ್ ಸೂದ್ ಮಾತನಾಡಿ, ಈ ಪ್ರಕರಣವನ್ನು ಸಮಗ್ರ ತನಿಖೆಗೊಳಪಡಿಸಿ ಸಂಬಂಧಿಸಿದವರಿಗೆ ಸೂಕ್ತ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ನಿಯೋಗದಲ್ಲಿದ್ದ ಪ್ರಮುಖರು ತಿಳಿಸಿದ್ದಾರೆ.

ನಿಯೋಗದಲ್ಲಿ ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಉಪಾಧ್ಯಕ್ಷರಾದ ಕೆ.ಎಂ. ಅಬ್ದುಲ್ ರಹಿಮಾನ್ (ಬಾಪು),  ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ಅಧ್ಯಕ್ಷರಾದ ಪಿ.ಎ. ಹನೀಫ್, ಐಮಂಗಲ (ಕೊಮ್ಮೆತೋಡು) ಮುಸ್ಲಿಂ ಜಮಾಅತ್ತಿನ ಮಾಜಿ ಅಧ್ಯಕ್ಷರಾದ ಕೋಳುಮಂಡ ರಫೀಕ್, ಕೊಡಗು ಜಿಲ್ಲಾ ವಕ್ಫ್ ಸಲಹಾ ಸಮಿತಿ ಮಾಜಿ ಸದಸ್ಯರಾದ ಕೆ.ಎಂ. ಭಾವ ಮೊದಲಾದವರು ಇದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News