ಬಿಜೆಪಿ ಸರಕಾರ GST ಮೂಲಕ ಜನರನ್ನು ಜೀವಂತವಾಗಿ ಸಾಯಿಸುತ್ತಿದೆ: ಡಿ.ಕೆ. ಶಿವಕುಮಾರ್

Update: 2022-07-20 14:34 GMT

ಬೆಂಗಳೂರು, ಜು.20: ಬಿಜೆಪಿ ಸರಕಾರ ಜಿಎಸ್‍ಟಿ ಮೂಲಕ ಜೀವಂತವಾಗಿರುವಾಗಲೇ ಜನರಿಗೆ ವಿಷ ಕೊಟ್ಟು ಸಾಯಿಸಲು ಮುಂದಾಗಿದೆ. ಇದರ ವಿರುದ್ಧ ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಪಕ್ಷ ಹೋರಾಟ ಮಾಡಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರ ಇರುವುದು ಜನ ಸಂತೋಷವಾಗಿರುವಂತೆ ನೋಡಿಕೊಳ್ಳಲು. ಆದರೆ ಸರಕಾರಿ ಉದ್ಯೋಗಿಗಳು, ವ್ಯಾಪಾರಸ್ಥರು, ಜನಸಾಮಾನ್ಯರ ಆದಾಯ ಹೆಚ್ಚು ಮಾಡದೆ, ಎಲ್ಲ ಅಗತ್ಯವಸ್ತುಗಳ ಬೆಲೆ ಏರಿಕೆ ಮಾಡಿ ಅವರನ್ನು ದಿನನಿತ್ಯ ಪಿಕ್ ಪಾಕೆಟ್ ಮಾಡುತ್ತಿದೆ ಎಂದು ಕಿಡಿಗಾರಿದರು.

ಜಿಎಸ್‍ಟಿ ಹಾಕಿ ಜನರನ್ನು ಜೀವಂತವಾಗಿ ಸಾಯಿಸುತ್ತಿದೆ. ಪೆಟ್ರೋಲ್, ಡೀಸೆಲ್, ಹಾಲು ಮೊಸರು ಎಲ್ಲವೂ ದುಬಾರಿಯಾಗಿದೆ. ಇದರ ಹೊರೆಯನ್ನು ಜನರು ಹೇಗೆ ಹೊರುತ್ತಾರೆ. ಹಾಲು ಉತ್ಪಾದನೆ ಮಾಡುವ ರೈತರಿಗೆ ಪ್ರತಿ ಲೀಟರ್‍ಗೆ 28 ರೂ.ನೀಡುತ್ತಿದ್ದಾರೆ. ಹಾಲಿಗೆ 5 ರೂ.ಹೆಚ್ಚು ಮಾಡಲಿಲ್ಲ. ಆದರೆ, ಹಸುಗಳಿಗೆ ಹಾಕುವ ಮೇವು, ನೀಡುವ ಚಿಕಿತ್ಸೆ ಬೆಲೆ ಹೆಚ್ಚಿದೆ. ರೈತ ಪಶುಸಂಗೋಪನೆ ಮೂಲಕ ತಾನೇ ಉದ್ಯೋಗ ಸೃಷ್ಟಿಸಿಕೊಂಡು ಬದುಕುತ್ತಿದ್ದರೂ ಈ ಸರಕಾರ ಆತನ ಬಗ್ಗೆ ಯೋಚಿಸುತ್ತಿಲ್ಲ ಎಂದು ಅವರು ದೂರಿದರು. 

ಆಸ್ಪತ್ರೆ ಕೊಠಡಿಯಲ್ಲಿ 5 ಸಾವಿರಕ್ಕಿಂತ ಕಡಿಮೆ ದರ ಇದ್ದರೆ ಶೇ.5ರಷ್ಟು ತೆರಿಗೆ, ಹೊಟೇಲ್ ಕೊಠಡಿ 1000 ರೂ.ಮೇಲಿದ್ದರೆ ಅದಕ್ಕೆ ಶೇ.12ರಷ್ಟು ಜಿಎಸ್‍ಟಿ ಹಾಕಲಾಗಿದೆ. ಹಳ್ಳಿ ಹಾಗೂ ನಗರ ಪ್ರದೇಶಗಳಲ್ಲಿ ಸಣ್ಣ ಪುಟ್ಟ ಹೊಟೇಲ್ ನಡೆಸುವವರು ಸಾವಿರ ರೂ.ಮೊತ್ತದ ಕೊಠಡಿ ಇಟ್ಟುಕೊಂಡಿರುತ್ತಾರೆ. ಅವರಿಗೆ ಈ ರೀತಿ ತೆರಿಗೆ ಬರೆ ಹಾಕುವುದೇ? ಎಂದು ಶಿವಕುಮಾರ್ ಪ್ರಶ್ನಿಸಿದರು.

ಬ್ಯಾಂಕ್ ಚೆಕ್ ಬುಕ್ ತೆಗೆದುಕೊಳ್ಳಲು ಶೇ.18ರಷ್ಟು ಜಿಎಸ್‍ಟಿ ಹಾಕಲಾಗಿದೆ. ರೈತರ ಪಂಪ್, ಮೋಟರ್ ಗಳಿಗೆ ಶೇ.18ರಷ್ಟು, ಮಕ್ಕಳ ಕಲಿಕೆ ಸಾಮಗ್ರಿಗಳಾದ ನಕ್ಷೆ, ಪೆನ್ಸಿಲ್, ಶಾರ್ಪನರ್ ಸೇರಿದಂತೆ ಇತರೆ ವಸ್ತುಗಳ ಮೇಲೆ ಶೇ.12ರಷ್ಟು ತೆರಿಗೆ ಹಾಕಲಾಗಿದೆ. ಶವ ಸುಡಲು ತೆರಿಗೆ ಕಟ್ಟುವ ಸ್ಥಿತಿ ನಿರ್ಮಾಣವಾಗಿದೆ. ಜನರಿಗೆ ಇಷ್ಟು ಕಿರುಕುಳ ನೀಡುತ್ತಿರುವುದು ಸರಿಯೇ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಇಂದೇ ಸಭೆ ಕರೆದು, ಸರಕಾರದಿಂದಲೇ ಈ ತೆರಿಗೆ ಭರಿಸಿ ಈ ಹೊರೆಯನ್ನು ಜನರಿಗೆ ಹಾಕದಂತೆ ತಡೆಯಬೇಕು. ಆ ಮೂಲಕ ಬಡವರ ಪಿಕ್ ಪಾಕೆಟ್ ಮಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಪ್ರತಿ ತಾಲೂಕು ಮಟ್ಟದಿಂದ ಹೋಬಳಿ ಮಟ್ಟದವರೆಗೂ ಈ ಬಗ್ಗೆ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ. ಬಿಜೆಪಿ ಸರಕಾರ ಈಗಾಗಲೇ ಭ್ರಷ್ಟ ಸರಕಾರ ಎಂದು ಹೆಸರು ಪಡೆದುಕೊಂಡಿದೆ ಎಂದು ಶಿವಕುಮಾರ್ ಹೇಳಿದರು.

ಭ್ರಷ್ಟಾಚಾರ ಗಗನ ಮುಟ್ಟಿದೆ. ನಿನ್ನೆ ಗುಂಡ್ಲುಪೇಟೆಯಲ್ಲಿ ರೈತರನ್ನು ಭೇಟಿಯಾದಾಗ ತೋಟಗಾರಿಕಾ ಸಚಿವನಿಗೆ ಶೇ.8.5ರಷ್ಟು ಲಂಚ ನೀಡಬೇಕಂತೆ. ಈ ವಿಚಾರವಾಗಿ ರೈತರು ಪ್ರಧಾನಮಂತ್ರಿಗೆ ಪತ್ರ ಬರೆದಿದ್ದು, ಎಲ್ಲ ಮಾಹಿತಿಯನ್ನು ಪಡೆದಿದ್ದೇವೆ. ಆ ಮೂಲಕ ರಾಜ್ಯದಲ್ಲಿ ಭ್ರಷ್ಟಾಚಾರ, ಬೆಲೆ ಏರಿಕೆ ಗಗನಕ್ಕೇರಿದರೆ, ಜನರ ಆದಾಯ ಪಾತಾಳಕ್ಕೆ ಕುಸಿದಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ, ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಜಿಎಸ್‍ಟಿ ಸಭೆ ವಿಚಾರದಲ್ಲಿ ಸ್ಪಷ್ಟನೆ ನೀಡಿದ್ದು, ಪಶ್ಟಿಮ ಬಂಗಾಳ ಹಾಗೂ ರಾಜಸ್ಥಾನ ಆರ್ಥಿಕ ಸಚಿವರು ಈ ವಿಚಾರವಾಗಿ ಕೇಂದ್ರ ಸರಕಾರ ಯಾವುದೇ ಚರ್ಚೆ ನಡೆಸಿಲ್ಲ ಎಂದು ಹೇಳಿದ್ದಾರೆ. ಈ ಕುರಿತ ಶಿಫಾರಸ್ಸನ್ನು ನಾವು ವಿರೋಧಿಸಿದ್ದೆವು ಎಂದರು. 

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮೊದಲು ಸರ್ವಾನುಮತದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ನಂತರ ಬಹುತೇಕರ ಒಪ್ಪಿಗೆ ಪಡೆಯಲಾಗಿದೆ ಎಂದು ಹೇಳಿದ್ದಾರೆ. ಇವೆರಡಕ್ಕೂ ವ್ಯತ್ಸಾಸ ಇದ್ದು, ಆ ಮೂಲಕ ಬಿಜೆಪಿ ಸುಳ್ಳು ಹೇಳುತ್ತಿದೆ ಎಂಬುದು ಸ್ಪಷ್ಟವಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.


'ನಾಳೆ ಕಾಂಗ್ರೆಸ್ ಪ್ರತಿಭಟನೆ'

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಈಡಿ ಅಧಿಕಾರಿಗಳು ವಿಚಾರಣೆಗೊಳಪಡಿಸುತ್ತಿರುವುದರಿಂದ ನಾಳೆ(ಗುರುವಾರ) ಬೆಂಗಳೂರಿನಲ್ಲಿ ಪ್ರತಿಭಟನೆ ಇಟ್ಟುಕೊಂಡಿದ್ದು, ಇದರ ಜತೆಗೆ ಜು.22 ರಂದು ಜಿಎಸ್‍ಟಿ ವಿಚಾರವಾಗಿಯೂ ಜಿಲ್ಲಾ ಮಟ್ಟದಲ್ಲಿ ನಾವು ಹೋರಾಟ ಮಾಡುತ್ತೇವೆ. ನಂತರ ತಾಲೂಕು ಮಟ್ಟದಲ್ಲಿ ಹೋರಾಟ ಮಾಡುತ್ತೇವೆ.

-ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News