ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕಾದರೆ ಯಡಿಯೂರಪ್ಪ ಮಾರ್ಗದರ್ಶನ ಅತ್ಯಗತ್ಯ: ಸಚಿವ ಮುರುಗೇಶ್ ನಿರಾಣಿ

Update: 2022-07-22 13:44 GMT
ಬಿ.ಎಸ್. ಯಡಿಯೂರಪ್ಪ- ಫೈಲ್ ಚಿತ್ರ

ಬೆಂಗಳೂರು, ಜು.22: ದಕ್ಷಿಣ ಭಾರತದಲ್ಲಿ ಬಜೆಪಿಯನ್ನು ಬೇರುಮಟ್ಟದಿಂದ ಸಂಘಟಿಸಿ ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಾರ್ಗದರ್ಶನ ಅಗತ್ಯ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು ಎಂದರೆ ಯಡಿಯೂರಪ್ಪ ಅವರ ಸಲಹೆ ಹಾಗೂ ಮಾರ್ಗದರ್ಶನ ಅತ್ಯಗತ್ಯ ಎಂದು ಪ್ರತಿಪಾದಿಸಿದರು.

ಯಡಿಯೂರಪ್ಪ ಮತ್ತೆ ನಾನು ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. 2023 ರ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕೇಸರಿ ಬಾವುಟ ಹಾರಬೇಕಾದರೆ ನಮಗೆ ಅವರ ನಾಯಕತ್ವ ಬೇಕು. ಸಕ್ರಿಯ ರಾಜಕಾರಣದಲ್ಲಿ ಮುಂದುವರೆಯುವುದು, ನಿವೃತ್ತಿ ಘೋಷಣೆ ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಯಡಿಯೂರಪ್ಪ ಅವರಿಗೆ ವಯಸ್ಸಾಗಿದೆ ಎಂದು ಯಾರಾದರೂ ಅಂದುಕೊಂಡರೆ ಅದು ತಪ್ಪು ಎಂದು ಮುರುಗೇಶ್ ನಿರಾಣಿ ಹೇಳಿದರು.

ಮುರುಗೇಶ್ ನಿರಾಣಿ- ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ 

ಯಡಿಯೂರಪ್ಪ ಈಗಲೂ 18ರ ಯುವಕರು ನಾಚುವಂತೆ ಪಕ್ಷ ಸಂಘಟನೆ ಹಾಗೂ ಪ್ರವಾಸ ಮಾಡುತ್ತಾರೆ. ಆಡುಮುಟ್ಟದ ಸೊಪ್ಪಿಲ್ಲ, ಬಿಎಸ್‍ವೈ ಹೋಗದ ಸ್ಥಳ ಕರ್ನಾಟಕದಲ್ಲಿ ಇಲ್ಲ. ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಅವರ ಪಾತ್ರವನ್ನು ಯಾರೊಬ್ಬರೂ ಮರೆಯುವಂತಿಲ್ಲ. ಬಿ.ಬಿ.ಶಿವಪ್ಪ, ಅನಂತ್‍ಕುಮಾರ್, ಶಂಕರಮೂರ್ತಿ, ತಂಗಾ, ಬಸವರಾಜ್ ಪಾಟೀಲ್ ಸೇಡಂ, ಅವರ ಜೊತೆ ಹಳ್ಳಿ ಹಳ್ಳಿ ಸುತ್ತಿ ಪಕ್ಷವನ್ನು ಸಂಘಟಿಸಿದ್ದಾರೆ. ಅವರ ಈ ದಿಢೀರ್ ನಿರ್ಧಾರ ನಮಗೂ ಆಶ್ಚರ್ಯ ಎಂದು ಅವರು ಹೇಳಿದರು.

ಸಕ್ರಿಯ ರಾಜಕಾರಣದಲ್ಲಿ ಅವರು ಇನ್ನು ಇರಬೇಕು ಎಂಬುದು ನನ್ನಂತಹ ಲಕ್ಷಾಂತರ ಕಾರ್ಯಕರ್ತರ ಒತ್ತಾಸೆಯಾಗಿದೆ. ಅವರು ಯಾವುದೇ ಒತ್ತಡಕ್ಕೆ ಮಣಿದು ಇಂತಹ ನಿರ್ಧಾರ ತೆಗೆದುಕೊಂಡಿಲ್ಲ. ನಮ್ಮ ಪಕ್ಷ ಯಾವುದೇ ಹಂತದಲೂ ಅವರನ್ನು ಕಡೆಗಣಿಸಿಲ್ಲ ಎಂದ ಮುರುಗೇಶ್ ನಿರಾಣಿ, ಶಿಕಾರಿಪುರ ಕ್ಷೇತ್ರವನ್ನು ಪುತ್ರ ವಿಜಯೇಂದ್ರ ಅವರಿಗೆ ಬಿಟ್ಟು ಕೊಡುವುದಾಗಿ ಹೇಳಿರುವುದು ಸ್ವಾಗತರ್ಹ ಬೆಳವಣಿಗೆ. ಇಡೀ ರಾಜ್ಯದಲ್ಲೇ ಅದೊಂದು ಮಾದರಿ ಕ್ಷೇತ್ರ ಎಂದು ಬಣ್ಣಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News