ಸಂಚಾರಿ ವಿಜಯ್ ಅಭಿನಯದ 'ತಲೆದಂಡ' ಸೇರಿ ಕನ್ನಡದ 3 ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ

Update: 2022-07-22 15:44 GMT

ನವದೆಹಲಿ/ಬೆಂಗಳೂರು, ಜು.22: 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಇಂದು ಪ್ರಕಟವಾಗಿದ್ದು, 2020ನೇ ಸಾಲಿನಲ್ಲಿ ಬಿಡುಗಡೆಯಾದ ಚಿತ್ರಗಳ ಪೈಕಿ ಕನ್ನಡದ ‘ತಲೆದಂಡ’, ‘ಡೊಳ್ಳು’, ‘ನಾದದ ನವನೀತ’ ಹಾಗೂ ತುಳುವಿನ ‘ಜೀಟಿಗೆ’ ಚಿತ್ರಗಳು ರಜತ ಕಮಲ ಪ್ರಶಸ್ತಿ ಪುರಸ್ಕಾರಕ್ಕೆ ಒಳಗಾಗಿವೆ.

ಈ ಬಾರಿ ದಕ್ಷಿಣ ಭಾರತದ ಚಿತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದು ವಿಶೇಷವಾಗಿದ್ದು, ತಮಿಳಿನ ‘ಸೂರಾರೈ ಪೊಟ್ರು’ ಚಿತ್ರದಲ್ಲಿನ ನಟನೆಗಾಗಿ ಸೂರ್ಯ ಅತ್ಯುತ್ತಮ ನಟ ಹಾಗೂ ಅಪರ್ಣಾ ಬಾಲಮುರಳಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ಹಿಂದಿಯ ‘ತಾನಾಜಿ–ದಿ ಅನ್‍ಸಂಗ್ ವಾರಿಯರ್’ ಚಿತ್ರಕ್ಕಾಗಿ ಅಜಯ್ ದೇವಗನ್ ‘ಅತ್ಯುತ್ತಮ ನಟ’ ಪ್ರಶಸ್ತಿಯನ್ನು ನಟ ಸೂರ್ಯ ಅವರ ಜೊತೆ ಹಂಚಿಕೊಂಡಿದ್ದಾರೆ. 

ನಟ ದಿ. ಸಂಚಾರಿ ವಿಜಯ್ ಅಭಿನಯದ ‘ತಲೆದಂಡ’ (ನಿರ್ದೇಶನ: ಪ್ರವೀಣ್ ಕೃಪಾಕರ್) ಚಿತ್ರವನ್ನು ಪರಿಸರ ಸಂರಕ್ಷಣೆ ಸಂಬಂಧಿತ ಅತ್ಯುತ್ತಮ ಚಲನಚಿತ್ರ ಎಂದು ಪರಿಗಣಿಸಲಾಗಿದೆ. ಪ್ರಶಸ್ತಿಯು ರಜತ ಕಮಲ ಮತ್ತು ರೂ. 1.50 ಲಕ್ಷ ನಗದು ಒಳಗೊಂಡಿದೆ. 

ಸಾಗರ್ ಪುರಾಣಿಕ್ ನಿರ್ದೇಶನದ ‘ಡೊಳ್ಳು’ ಚಿತ್ರವೂ ಅತ್ಯುತ್ತಮ ಕನ್ನಡ ಚಲನಚಿತ್ರ ವಿಭಾಗದ ಅಡಿ ರಜತ ಕಮಲಕ್ಕೆ ಭಾಜನವಾಗಿದೆ. ಪ್ರಶಸ್ತಿಯು ರೂ. 1 ಲಕ್ಷ ನಗದು ಒಳಗೊಂಡಿದೆ. ಅತ್ಯುತ್ತಮ ಧ್ವನಿಗ್ರಹಣಕ್ಕಾಗಿ(ಆಡಿಯೋಗ್ರಫಿ) ಇದೇ ಚಿತ್ರಕ್ಕೆ ಪ್ರಶಸ್ತಿ ಲಭಿಸಿದ್ದು, ರೂ. 50 ಸಾವಿರ ನಗದು ಒಳಗೊಂಡಿದೆ. 

ಸಂವಿಧಾನದ 8ನೇ ಪರಿಚ್ಛೇದದ ಅಡಿ ಹೊರತಾದ ಭಾಷೆಗಳ ಚಿತ್ರಗಳ ವಿಭಾಗದಲ್ಲಿ ತುಳು ಚಿತ್ರ ‘ಜೀಟಿಗೆ’ಗೆ (ನಿರ್ದೇಶನ: ಸಂತೋಷ್ ಮಾಡ) ರಜತ ಕಮಲ ಲಭಿಸಿದೆ. 

ಅತ್ಯುತ್ತಮ ಕಲೆ, ಸಂಸ್ಕೃತಿ ಆಧಾರಿತ ಚಿತ್ರ ವಿಭಾಗದ ಅಡಿ ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ನಾದದ ನವನೀತ– ಡಾ.ಪಂಡಿತ್ ವೆಂಕಟೇಶ್‍ಕುಮಾರ್’ ರಜತ ಕಮಲ ಪ್ರಶಸ್ತಿ ಪಡೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News