×
Ad

ಆರೋಪಪಟ್ಟಿಯಲ್ಲಿರುವ ತೇಜಸ್ವಿ ಸೂರ್ಯ ರಾಜೀನಾಮೆ ನೀಡುವಂತೆ ಎಎಪಿ ಆಗ್ರಹ

Update: 2022-07-24 17:34 IST
ತೇಜಸ್ವಿ ಸೂರ್ಯ

ಬೆಂಗಳೂರು, ಜು.24: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಿವಾಸದ ಮುಂದೆ ದಾಂಧಲೆ ಮಾಡಿದ ಪ್ರಕರಣದ ಆರೋಪಪಟ್ಟಿಯಲ್ಲಿ ಸಂಸದ ತೇಜಸ್ವಿ ಸೂರ್ಯ ಹೆಸರಿದ್ದು, ಅವರು ತಕ್ಷಣವೇ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಎಎಪಿ ಮುಖಂಡ ಜಗದೀಶ್ ವಿ ಸದಂ ಆಗ್ರಹಿಸಿದ್ದಾರೆ.

ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸುತ್ತಾರೆ ಎಂಬ ನಂಬಿಕೆಯಿಂದ ಬೆಂಗಳೂರು ದಕ್ಷಿಣದ ಜನರು ತೇಜಸ್ವಿ ಸೂರ್ಯ ಅವರನ್ನು ಸಂಸದರನ್ನಾಗಿ ಮಾಡಿದ್ದಾರೆ. ಆದರೆ ಇವರು ದೇಶದ ಯುವಜನತೆಯನ್ನು ಗೂಂಡಾಗಿರಿಗೆ ಬಳಸಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ. ಮಾ.30ರಂದು ಸಿಎಂ ಅರವಿಂದ್ ಕೇಜ್ರಿವಾಲ್ ನಿವಾಸದ ಮೇಲೆ ನಡೆದ ದಾಳಿಯ ಚಾರ್ಜ್‍ಶೀಟ್‍ನಲ್ಲಿ ತೇಜಸ್ವಿ ಸೂರ್ಯ ಆರೋಪಿಯಾಗಿರುವುದು ಇದಕ್ಕೆ ನಿದರ್ಶನವಾಗಿದೆ. ಅವರು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಹುದ್ದೆಯ ಗೌರವ ಉಳಿಸಬೇಕು ಎಂದು ಹೇಳಿದರು.

ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರು ಪಕ್ಷದ ಯುವ ಕಾರ್ಯಕರ್ತರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರಾಷ್ಟ್ರ ನಿರ್ಮಾಣಕ್ಕೆ ಬಳಕೆಯಾಗಬೇಕಾದ ಯುವಜನತೆಯನ್ನು ಬಿಜೆಪಿಯು ಕ್ರಿಮಿನಲ್‍ಗಳನ್ನಾಗಿ ಮಾಡುತ್ತಿದೆ. ಮುಖ್ಯಮಂತ್ರಿಯೊಬ್ಬರ ನಿವಾಸದ ಮೇಲೆ ದಾಳಿ ಮಾಡುವಷ್ಟು ಇವರು ಮುಂದುವರಿದಿರುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ. ಈ ಮೂಲಕ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ತೇಜಸ್ವಿ ಅವರು ರಾಷ್ಟ್ರಮಟ್ಟದಲ್ಲಿ ಕಳಂಕ ತಂದಿದ್ದಾರೆ ಎಂದು ಅವರು ಹೇಳಿದರು.

ದಾಳಿಯಲ್ಲಿ ಭಾಗಿಯಾಗಿದ್ದಕ್ಕೆ ತೇಜಸ್ವಿ ಸೂರ್ಯ ಹಾಗೂ ಅವರ ಗೂಂಡಾ ಕಾರ್ಯಕರ್ತರಿಗೆ ಬಿಜೆಪಿಯ ದೆಹಲಿ ಘಟಕವು ಸನ್ಮಾನವನ್ನೂ ಮಾಡಿದೆ. ದೆಹಲಿ ಪೊಲೀಸರು ಕೇಂದ್ರ ಸರಕಾರದ ಹಿಡಿತದಲ್ಲಿರುವುದನ್ನು ದುರ್ಬಳಕೆ ಮಾಡಿಕೊಂಡು ದಾಳಿ ಮಾಡಿ ಸಂಭ್ರಮಿಸುವುದು ಬಿಜೆಪಿಯ ವಿಕೃತ ಮನೋಭಾವನೆಗೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News