ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರು ಶ್ರಮಿಸಿ: ಪ್ರವಾಸೋದ್ಯಮ ಸಚಿವ ಆನಂದಸಿಂಗ್

Update: 2022-07-25 16:10 GMT

ಬೆಂಗಳೂರು: ‘ಉಜ್ವಲ ಭಾರತ-ಉಜ್ವಲ ಭವಿಷ್ಯ' ದಿವಸ ವಿದ್ಯುತ್@2047 ಆಚರಣೆಹೊಸಪೇಟೆ(ವಿಜಯನಗರ), ಜು. 25: ‘ಜಾತಿಯ ವಿಷ ಬೀಜ ಇಂದು ನಮ್ಮ ದೇಶದ ಪ್ರಗತಿಗೆ ಮಾರಕವಾಗಿದ್ದು, ಇಂತಹ ಸಂಕೋಲೆ ಹಾಗೂ ಸ್ವಾರ್ಥ ದಿಂದ ಹೊರಬಂದು ದೇಶಕ್ಕೆ ಕೊಡುಗೆ ನೀಡಲು ಪ್ರತಿಯೊಬ್ಬರು ಶ್ರಮಿಸಬೇಕು' ಎಂದು ಪ್ರವಾಸೋದ್ಯಮ, ಪರಿಸರ ಹಾಗೂ ಜೀವಿಶಾಸ್ತ್ರ ಸಚಿವ ಆನಂದಸಿಂಗ್ ಕರೆ ನೀಡಿದರು.

ಸೋಮವಾರ ಕೇಂದ್ರ ವಿದ್ಯುತ್ ಸಚಿವಾಲಯ, ವಿಜಯನಗರ ಜಿಲ್ಲಾಡಳಿತ ಮತ್ತು ಜೆಸ್ಕಾಂ ಸಹಯೋಗದೊಂದಿಗೆ ಆಝಾದಿ ಕಾ ಅಮೃತ್ ಮಹೋತ್ಸವ ಆಚರಣೆ ನಿಮಿತ್ತ ಹೊಸಪೇಟೆ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಉಜ್ವಲ ಭಾರತ-ಉಜ್ವಲ ಭವಿಷ್ಯ ದಿವಸ ವಿದ್ಯುತ್@2047’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅತಿಹೆಚ್ಚು ಯುವಕರನ್ನು ಹೊಂದಿರುವ ದೇಶ ನಮ್ಮದಾಗಿದ್ದು, ಯುವಕರು ನಮ್ಮ ದೇಶದ ಭವಿಷ್ಯಕ್ಕಾಗಿ, ಅಭಿವೃದ್ಧಿಗಾಗಿ ಶ್ರಮ ವಹಿಸಬೇಕು. ಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ಯೋಜನೆಗಳನ್ನು ನಾಡಿನ ಕಟ್ಟಕಡೆಯ ಜನರಿಗೂ ತಲುಪಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದು ಅವರು ಹೇಳಿದರು.

ಪ್ರಪಂಚದಲ್ಲಿಯೇ ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿರುವ ಚೀನಾ ತಂತ್ರಜ್ಞಾನದಲ್ಲಿ ಜಗತ್ತನ್ನೆ ತನ್ನ ಹಿಡಿತದಲ್ಲಿಟ್ಟುಕೊಳ್ಳುವ ಹಾದಿಯಲ್ಲಿ ಸಾಗುತ್ತಿದೆ. ಆದರೆ ಭಾರತ ದೇಶವು ಜನಸಂಖ್ಯೆಯಲ್ಲಿ ಚೀನಾ ದೇಶವನ್ನು ಹಿಂದಿಕ್ಕುವ ಹಾದಿಯಲ್ಲಿ ಸಾಗುತ್ತಿದ್ದು, ತಂತ್ರಜ್ಞಾನದಲ್ಲಿ ಹಿಂದೆ ಉಳಿದಿದೆ. ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನದ ಅಗತ್ಯತೆ ಇದ್ದು, ನಮ್ಮ ವಿದ್ಯಾರ್ಥಿಗಳು ತಂತ್ರಜ್ಞಾನದಲ್ಲಿ ಪ್ರಗತಿ ಸಾಧಿಸಬೇಕಾಗಿದೆ ಎಂದು ಆನಂದ್ ಸಿಂಗ್ ತಿಳಿಸಿದರು.

ನಾವು ಇಲ್ಲದಿದ್ದರೂ ನಮ್ಮ ಕೆಲಸಗಳು ಸಾರ್ವಜನಿಕರ ನೆನಪಿನಲ್ಲಿ ಉಳಿಯಬೇಕು ಎನ್ನುವ ದೃಷ್ಟಿಯಿಂದ ಪದವಿಯ ಆಸೆಯನ್ನು ಬಿಟ್ಟು ವಿಜಯನಗರ ಜಿಲ್ಲೆ ರಚನೆಯಾಗಲು ಶ್ರಮಿಸಿದ್ದೇನೆ ಎಂದು ಇದೇ ಸಂದರ್ಭದಲ್ಲಿ ವಿಜಯನಗರ ಜಿಲ್ಲೆಯ ರಚನೆಯ ಬಗ್ಗೆ ಅವರು ಸ್ಮರಿಸಿಕೊಂಡರು.

ಆಝಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ವಿಜಯನಗರ ಜಿಲ್ಲೆಯಲ್ಲಿ 405 ಅಡಿ ಎತ್ತರದ ಧ್ವಜಸ್ತಂಭ ನಿರ್ಮಾಣವಾಗುತ್ತಿದ್ದು, ಇದು ವಿಶ್ವದ ಎತ್ತರದ ಸ್ತಂಭಗಳಲ್ಲಿ 9ನೇ ಸ್ಥಾನದಲ್ಲಿದೆ. ಇದು ವಿಜಯನಗರ ಜಿಲ್ಲೆಯ ಹೆಮ್ಮ ವಿಷಯದ ಸಂಕೇತವಾಗಿದೆ ಎಂದು ಆನಂದ್ ಸಿಂಗ್ ಹೇಳಿದರು.

ಎನ್‍ಟಿಪಿಸಿ ಎಜಿಎಂ ಕುಲದೀಪ್ ಪರಿಹಾರ್ ಮಾತನಾಡಿ, 2014ರಲ್ಲಿ 2.48 ಲಕ್ಷ ಮೆಗಾವ್ಯಾಟ್ ನಿಂದ ಇಂದು 4 ಲಕ್ಷ ಮೆಗಾವ್ಯಾಟ್‍ಗೆ ಉತ್ಪಾದನೆ ಸಾಮಥ್ರ್ಯ ಹೆಚ್ಚಳವಾಗಿದ್ದು, ಇದು ನಮ್ಮ ಬೇಡಿಕೆಗಿಂತ 1.85 ಲಕ್ಷ ಮೆಗಾವ್ಯಾಟ್ ಹೆಚ್ಚು ಉತ್ಪಾದನೆಯಾಗಿದೆ. 1.63 ಲಕ್ಷ ಸಿಸಿಎಮ್ ಟ್ರಾನ್ಸ್‍ಮಿಷನ್ ಲೈನ್‍ಗಳನ್ನು ಸೇರಿಸಲಾಗಿದ್ದು, ಇಡೀ ದೇಶವನ್ನು ಒಂದು ಆವರ್ತನದಲ್ಲಿ ಚಲಿಸುವ ಒಂದು ಗ್ರಿಡ್‍ಗೆ ಸಂಪರ್ಕಿಸುತ್ತದೆ. ಲಡಾಕ್‍ನಿಂದ ಕನ್ಯಾಕುಮಾರಿವರೆಗೆ ಮತ್ತು ಕಚ್‍ನಿಂದ ಮ್ಯಾನ್ಮಾರ್ ಗಡಿಯವರೆಗೆ ಇದು ವಿಶ್ವದ ಅತಿದೊಡ್ಡ ಸಮಗ್ರ ಗ್ರಿಡ್ ಆಗಿ ಹೊರಹೊಮ್ಮಿದೆ ಎಂದರು.

ಈ ಗ್ರೀಡ್ ಬಳಸಿ ನಾವು 1.12ಲಕ್ಷ ಮೆಗಾವ್ಯಾಟ್ ವಿದ್ಯುತ್ ಅನ್ನು ದೇಶದ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ರವಾನಿಸಬಹುದಾಗಿದೆ. 2030ರ ವೇಳೆಗೆ ಶೇ.40ರಷ್ಟು ಇಂಧನ ಮೂಲಗಳಿಂದ ನಮ್ಮ ಉತ್ಪದನಾ ಸಾಮರ್ಥ್ಯದ ನವೀಕರಿಸಬಹುದಾಗಿದ್ದು, ನಾವು ಈ ಗುರಿಯನ್ನು ನವೆಂಬರ್ 2021ರ ವೇಳೆಗೆ ನಿಗಧಿತ ಸಮಯಕ್ಕಿಂತ 9 ವರ್ಷಗಳ ಮುಂಚಿತವಾಗಿಯೇ ಸಾಧಿಸಿದ್ದೇವೆ ಎಂದು ಅವರು ತಿಳಿಸಿದರು.

ಸರಕಾರವು ವಿದ್ಯುತ್ ನಿಯಮಗಳು 2020 ಅನ್ನು ಪರಿಚಯಿಸಿದ್ದು, ಹೊಸ ಸಂಪರ್ಕವನ್ನು ಪಡೆಯಲು ಗರಿಷ್ಠ ಸಮಯದ ಮಿತಿಯನ್ನು ಸೂಚಿಸಿದೆ, ಮೀಟರ್ ಸಂಬಂಧಿತ ದೂರುಗಳನ್ನು ಪರಿಹರಿಸಲು ಟೈಮ್‍ಲೈನ್‍ಗಳನ್ನು ಮತ್ತು ಗ್ರಾಹಕರ ದೂರುಗಳನ್ನು ಪರಿಹರಿಸಲು 24/7 ಕಾಲ್ ಸೆಂಟರ್‍ಗಳನ್ನು ಸ್ಥಾಪಿಸಲಾಗುತ್ತಿವೆ. ಗ್ರಾಹಕರು ಈಗ ರೂಫ್ ಟಾಫ್ ಸೋಲಾರ್ ಅಳವಡಿಸಿಕೊಳ್ಳುವ ಮೂಲಕ ಸಾಧಕರಾಗಬಹುದಾಗಿದ್ದು, ಸೌರ ಪಂಪ್‍ಗಳನ್ನು ಅಳವಡಿಸಿಕೊಳ್ಳಲು ಕೆಂದ್ರ ಸರಕಾರ ಶೇ.30 ಮತ್ತು ರಾಜ್ಯ ಸರಕಾರದಿಂದ ಶೇ.30ರಷ್ಟು ಸಬ್ಸಿಡಿ ನೀಡುವುದರ ಜೊತೆಗೆ ಶೇ.30ರಷ್ಟು ಬ್ಯಾಂಕ್ ಸಾಲ ದೊರೆಯಲಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಹೊಸಪೇಟೆ ನಗರಸಭೆ ಅಧ್ಯಕ್ಷೆ ಸುಂಕಮ್ಮ, ಬಳ್ಳಾರಿ ಜೆಸ್ಕಾಂನ ಅಧೀಕ್ಷಕ ಅಭಿಯಂತರ ವೆಂಕಟೇಶುಲು, ಜೆಸ್ಕಾಂ ಹೊಸಪೇಟೆ ನಗರ ವಿಭಾಗದ ಕಾರ್ಯನಿರ್ವಾಹಕ ಎಂಜನಿಯರ್ ಶ್ರೀನಿವಾಸ್ ಜಿ.ಜೆ ಮತ್ತು ಹಗರಿಬೊಮ್ಮನಹಳ್ಳಿ ಜೆಸ್ಕಾಂ ಕಾರ್ಯನಿರ್ವಾಹಕ ಎಂಜನಿಯರ್ ರಾಮಚಂದ್ರ ಡಿ.ಸುತಾರ್, ಜೆಸ್ಕಾಂ ಕಂಟ್ರೋಲರ್ ಆನಂದ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News