ಅಗತ್ಯ ಬಿದ್ದರೆ ರಾಜ್ಯದಲ್ಲೂ ಯೋಗಿ ಮಾಡೆಲ್ ಸರಕಾರ ಬರುತ್ತೆ: ಸಿಎಂ ಬೊಮ್ಮಾಯಿ
ಬೆಂಗಳೂರು: ಕೋಮು ಭಾವನೆ ಕದಡುವ ಶಕ್ತಿಗಳನ್ನು ಸದೆಬಡಿಯುತ್ತೇವೆ. ಬಾಯಿ ಮಾತಿನಲ್ಲಿ ಅಲ್ಲ ಕಠಿಣ ಕ್ರಮಕೈಗೊಂಡಿದ್ದೇವೆ. ರಾಜ್ಯದಲ್ಲಿ ಅಪರಾಧಗಳ ತಡೆಗೆ ಹಲವು ಕ್ರಮಕೈಗೊಂಡಿದ್ದೇವೆ. ಅಗತ್ಯ ಬಿದ್ದರೆ ರಾಜ್ಯದಲ್ಲೂ ಯೋಗಿ ಮಾಡೆಲ್ ಸರಕಾರ ಬರುತ್ತೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ತಮ್ಮ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಬೊಮ್ಮಾಯಿ, ಉತ್ತರ ಪ್ರದೇಶದಲ್ಲಿ ಪರಿಸ್ಥಿತಿ ಬೇರೆಯೇ ಇದೆ. ಅಲ್ಲಿಗೆ ಯೋಗಿ ಅವರೇ ಸರಿಯಾದ ಮುಖ್ಯಮಂತ್ರಿ. ಕರ್ನಾಟಕವನ್ನು ನಿಯಂತ್ರಣ ಮಾಡೋದಕ್ಕೆ ಹಲವಾರು ವಿಧಾನಗಳಿದ್ದು, ಅದನ್ನೆಲ್ಲ ಪ್ರಯೋಗ ಮಾಡ್ತಾ ಇದ್ದೇವೆ, ಪ್ರಸಂಗ ಬಂದರೆ ರಾಜ್ಯದಲ್ಲೂ ಯೋಗಿ ಮಾಡೆಲ್ ಸರಕಾರ ಬರುತ್ತೆ ಎಂದರು.
'ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆ ಜನೋತ್ಸವ ಸಮಾವೇಶ ಕಾರ್ಯಕ್ರಮವನ್ನು ಎಲ್ಲರ ಜೊತೆ ಚರ್ಚಿಸಿ ರದ್ದುಗೊಳಿಸಿದ್ದೇವೆ' ಎಂದು ಇದೇ ವೇಳೆ ತಿಳಿಸಿದರು.
'ರಾಜ್ಯದಲ್ಲಿ ಮೊದಲಬಾರಿಗೆ 8, 000 ಶಾಲಾ ಕೊಠಡಿಗಳನ್ನು ನಿರ್ಮಿಸುವ ಕಾಮಗಾರಿಗೆ ಚಾಲನೆ ನೀಡಲಾಗುವುದು. 100 ಪಿಎಚ್ ಸಿ ಗಳನ್ನು ಸಿಎಚ್ ಸಿಗಳಾಗಿ ಮೇಲ್ದರ್ಜೆಗೆ ಏರಿಸಲಾಗುವುದು. ಕಲ್ಯಾಣ ಕರ್ನಾಟಕದಲ್ಲಿ 71 ಪಿಎಚ್ ಸಿ ಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು' ಎಂದು ಬೊಮ್ಮಾಯಿ ಹೇಳಿದರು.