×
Ad

ಎನ್‍ಕೌಂಟರ್ ಹೇಳಿಕೆ ನೀಡಿದ್ದ ಸಚಿವ ಅಶ್ವತ್ಥ ನಾರಾಯಣ್ ವಿರುದ್ಧ ಆಪ್ ಕಿಡಿ

Update: 2022-07-30 19:03 IST

ಬೆಂಗಳೂರು, ಜು.30: ಆರೋಪಿಗಳನ್ನು ಎನ್‍ಕೌಂಟರ್ ಮಾಡಬೇಕು ಎಂದು ಕಾನೂನಿನ ಅರಿವಿಲ್ಲದವರಂತೆ ಹೇಳಿಕೆ ನೀಡಿ, ಜನರನ್ನು ಹಾದಿ ತಪ್ಪಿಸುತ್ತಿರುವ ಡಾ. ಸಿ.ಎನ್. ಅಶ್ವತ್ಥ ನಾರಾಯಣ್ ಅವರು ಸಚಿವರಾಗಿರುವುದು ರಾಜ್ಯದ ದುರದೃಷ್ಟ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡ ಹೇಳಿದರು.

ಶನಿವಾರ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, “ರಾಜ್ಯ ಬಿಜೆಪಿ ಸರಕಾರದ ಮುಖ್ಯಮಂತ್ರಿ ಹಾಗೂ ಸಚಿವರ ಹೇಳಿಕೆಗಳನ್ನು ಗಮನಿಸಿದರೆ ಜಂಗಲ್‍ರಾಜ್ ತರಲು ಪ್ರಯತ್ನಿಸುತ್ತಿರುವಂತೆ ಭಾಸವಾಗುತ್ತಿದೆ. ಯಾವ ಸಂದರ್ಭಗಳಲ್ಲಿ ಎನ್‍ಕೌಂಟರ್ ಮಾಡಲಾಗುತ್ತದೆ ಎಂಬ ಸಾಮಾನ್ಯ ತಿಳಿವಳಿಕೆಯೂ ಇಲ್ಲದೆ ಅನಾಗರಿಕರಂತೆ ಸಚಿವ ಅಶ್ವತ್ಥ್ ನಾರಾಯಣ್ ಹೇಳಿಕೆ ನೀಡಿದ್ದಾರೆ. ಪ್ರವೀಣ್ ನೆಟ್ಟಾರು ಅವರ ಹತ್ಯೆಯನ್ನೇ ನೆಪ ಮಾಡಿಕೊಂಡು ರಾಜ್ಯ ಬಿಜೆಪಿಯು ಜನರಲ್ಲಿ ಗೊಂದಲ ಸೃಷ್ಟಿಸಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದೆ” ಎಂದು ಆರೋಪಿಸಿದರು.

ಹಿರಿಯ ವಕೀಲ ಲಕ್ಷ್ಮೀಕಾಂತ ರಾವ್ ಮಾತನಾಡಿ, ರಾಜ್ಯದ ಅಮಾಯಕ ಯುವ ಜನಾಂಗವನ್ನು ರಕ್ತಪಾತದೆಡೆಗೆ ತಳ್ಳುತ್ತಿರುವ ಬಿಜೆಪಿಯ ನಡೆಯನ್ನು ಯುವಜನತೆ ಸೂಕ್ಷ್ಮ ಮನಸ್ಸುಗಳಿಂದ ಗಮನಿಸುತ್ತಿದೆ. ಇದರ ಪ್ರತಿಫಲವನ್ನು ಈಗಾಗಲೇ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಂತ್ರಿ ಸುನೀಲ್ ಕುಮಾರ್ ಘಟನೆಯಿಂದ ಕರಾವಳಿ ಭಾಗದಲ್ಲಿ ಸಾಕಷ್ಟು ಅಪಮಾನಿತರಾಗಿದ್ದಾರೆ. ರಾಜ್ಯದ ಜನತೆ ನಿಂಧಿಸುವ ಮುನ್ನ ಜನೋತ್ಸವ ಕಾರ್ಯಕ್ರಮವನ್ನು ಸಹ ರದ್ದು ಮಾಡಿದ್ದಾರೆ. ಇದಕ್ಕಿಂತ ಅಪಮಾನಕಾರಿ ಆದಂಥ ಸಂಗತಿ ಬಿಜೆಪಿಗರಿಗೆ ಮತ್ತೊಂದಿಲ್ಲ ಎಂದರು.

ಡಮ್ಮಿ ಮುಖ್ಯಮಂತ್ರಿ

ಯಾವುದೇ ಕಾರಣಕ್ಕೂ ಯೋಗಿ ಮಾದರಿ ನಮಗೆ ಬೇಕಾಗಿಲ್ಲ. ಕೇವಲ ಕೋಮು ಧ್ರುವೀಕರಣ ರಾಜಕಾರಣವನ್ನು ಹೊಂದಿರುವ ಬಿಜೆಪಿಯು ಕರ್ನಾಟಕವನ್ನು ತನ್ನ ಪ್ರಯೋಗ ಶಾಲೆಯನ್ನಾಗಿ ರೂಪಿಸಲು ಡಮ್ಮಿ ಮುಖ್ಯಮಂತ್ರಿ ಬೊಮ್ಮಾಯಿಯವರನ್ನು ಬಳಸಿಕೊಳ್ಳುತ್ತಿರುವುದು ತೀರಾ ಅಸಹ್ಯಕರ ಸಂಗತಿ. ಸ್ವಪಕ್ಷದ ವಿರುದ್ಧವೇ ತಿರುಗಿ ಬಿದ್ದಿರುವ ಬಿಜೆಪಿ ಕಾರ್ಯಕರ್ತರನ್ನು ಸಮಾಧಾನ ಮಾಡಿಸಲು ಮುಖ್ಯಮಂತ್ರಿಯವರು ಉತ್ತರ ಪ್ರದೇಶದ ಹೆಸರನ್ನು ಹೇಳುತ್ತಿದ್ದಾರೆ. ಯೋಗಿ ಮಾದರಿಯಂತೆ ಕಂಡಕಂಡವರ ಮನೆಗಳ ಮೇಲೆಲ್ಲ ಬುಲ್ಡೋಜರ್ ಹತ್ತಿಸುವ ಹೇಳಿಕೆಗಳನ್ನು ನೀಡುತ್ತಿದ್ದಾರೆ. 

-ನಂಜಪ್ಪ ಕಾಳೇಗೌಡ, ಎಎಪಿ ಮುಖಂಡ

---------------------------------------------

ತೇಜಸ್ವಿ ಸೂರ್ಯ ವಿರುದ್ಧ ಕ್ರಮವೇಕಿಲ್ಲ?

ಕಾಂಗ್ರೆಸ್ ಸರಕಾರವಿದ್ದಿದ್ದರೆ ಕಲ್ಲು ಹೊಡೆಯಬಹುದಿತ್ತು ಎಂದು ತೇಜಸ್ವಿ ಸೂರ್ಯ ಹೇಳಿರುವ ಆಡಿಯೋ ವೈರಲ್ ಆಗಿದೆ. ದೇಶಭಕ್ತಿಯ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ತೇಜಸ್ವಿ ಸೂರ್ಯ ಅವರ ದೇಶಭಕ್ತಿ ಎಂತಹದ್ದು ಎನ್ನುವುದು ಇದರಿಂದಲೇ ತಿಳಿಯುತ್ತದೆ. ತೇಜಸ್ವಿ ಸೂರ್ಯ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು.

-ಲಕ್ಷ್ಮೀಕಾಂತ್ ರಾವ್, ಹಿರಿಯ ವಕೀಲ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News