ಕೊಡಗು: ಭಾರೀ ಮಳೆಗೆ ಕೋಪಟ್ಟಿಯಲ್ಲಿ ಕೊಚ್ಚಿ ಹೋದ ಕಾಲು ಸೇತುವೆ, ಕಲ್ಲುಗುಂಡಿ ಜಲಾವೃತ

Update: 2022-08-02 08:46 GMT

ಮಡಿಕೇರಿ ಆ.2 : ಕಾವೇರಿ ನಾಡು ಕೊಡಗು ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುತ್ತಿದೆ. ಆದರೆ ಜಿಲ್ಲೆಯ ಗಡಿ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಗ್ರಾಮಸ್ಥರಿಗೆ ಜಲ ಸಂಕಷ್ಟ ಎದುರಾಗಿದೆ.

ಸೋಮವಾರ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಪಯಸ್ವಿನಿ ನದಿ ತುಂಬಿ ಹರಿದು ಸಂಪಾಜೆ ಸಮೀಪದ ಕಲ್ಲುಗುಂಡಿ ರಸ್ತೆ ಸಂಪೂರ್ಣ ಜಲಾವೃತಗೊಂಡಿತು. ವಾಹನಗಳ ಸಂಚಾರದಲ್ಲಿ ಅಡಚಣೆ ಉಂಟಾಯಿತು. ಅಕ್ಕಪಕ್ಕದ ಅಂಗಡಿ, ಮುಂಗಟ್ಟು, ಮನೆಗಳಿಗೂ ನೀರು ನುಗ್ಗಿದೆ. ವರ್ತಕರಿಗೆ ಅಪಾರ ನಷ್ಟ ಉಂಟಾಗಿದ್ದು, ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಕಿಂಡಿ ಅಣೆಕಟ್ಟೆಯಿಂದ ಅಪಾಯ 

ಇದೇ ವ್ಯಾಪ್ತಿಯ ಕೊಯನಾಡಿನಲ್ಲೂ ಮಳೆಯಿಂದ ಪ್ರವಾಹ ಏರ್ಪಟ್ಟಿದೆ. ಗ್ರಾಮಸ್ಥರ ವಿರೋಧದ ನಡುವೆಯೂ ಇಲ್ಲಿ ನಿರ್ಮಾಣಗೊಂಡಿರುವ ಕಿಂಡಿ ಅಣೆಕಟ್ಟೆಯಲ್ಲಿ ಮರದ ದಿಮ್ಮಿಗಳು ಕೊಚ್ಚಿ ಬಂದು ನಿಂತ ಪರಿಣಾಮ ಅಪಾಯದ ಮಟ್ಟ ಮೀರಿ ಹರಿದ ನದಿಯ ನೀರು ಸುತ್ತಮುತ್ತಲ ಮನೆಗಳನ್ನು ಆವರಿಸಿದೆ. ಪಕ್ಕದಲ್ಲೇ ಇರುವ   ನಿವಾಸಿಗಳು ರಾತ್ರೋರಾತ್ರಿ ಮನೆ ಖಾಲಿ ಮಾಡಿದರು. ಹಲವು ಕುಟುಂಬಗಳನ್ನು ಕೊಯನಾಡಿನ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

::: ಶಾಸಕರ ಭೇಟಿ 

ಪ್ರವಾಹದ ಪರಿಸ್ಥಿತಿಯನ್ನು ಎದುರಿಸುತ್ತಿರುವ ಕೊಯನಾಡಿಗೆ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಭೇಟಿ ನೀಡಿ ಪರಿಶೀಲಿಸಿದರು. ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕಾಳಜಿ ಕೇಂದ್ರದಲ್ಲಿರುವ ಕುಟುಂಬಗಳಿಗೆ ಧೈರ್ಯ ತುಂಬಿದರು.

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಕೂಡ ಕೊಯನಾಡು ಹಾಗೂ ಸಂಪಾಜೆ ವ್ಯಾಪ್ತಿಯ ಮಳೆಹಾನಿ ಪ್ರದೇಶಗಳನ್ನು ವೀಕ್ಷಿಸಿದರು. ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಕೊಯನಾಡು ನಿವಾಸಿಗಳ ಸಮಸ್ಯೆಗಳನ್ನು ಆಲಿಸಿದರು.

► ಗ್ರಾಮಸ್ಥರ ಅಸಮಾಧಾನ

2018 ರಲ್ಲಿ ಸುರಿದ ಮಹಾಮಳೆ ಮತ್ತು ಜಲಸ್ಫೋಟದಿಂದ ಗುಡ್ಡಗಳು ಕುಸಿದು ಬಂದು ಜೋಡುಪಾಲ ಹಾಗೂ ಕೊಯನಾಡಿನಲ್ಲಿ ಪಯಸ್ವಿನಿ ನದಿಯ ಮಾರ್ಗವೇ ಬದಲಾಗಿತ್ತು. ಅಲ್ಲದೆ ಮನೆಗಳು ಕೊಚ್ಚಿ ಹೋಗಿ ಸಾವುನೋವುಗಳು ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಕೊಯನಾಡಿನಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡುವುದು ಹೆಚ್ಚು ಅಪಾಯಕಾರಿ ಎಂದು 2021 ರಲ್ಲಿ ಕಾಮಗಾರಿ ಆರಂಭದ ಸಂದರ್ಭದಲ್ಲೇ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದರು.

ಆದರೆ ಸ್ಥಳೀಯರ ಅಭಿಪ್ರಾಯಗಳನ್ನು ಕಡೆಗಣಿಸಿ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಿದ ಪರಿಣಾಮ ಇಂದು ಕೊಯನಾಡು ನದಿ ವ್ಯಾಪ್ತಿಯ ಮನೆಗಳು ಮುಳುಗಡೆಯ ಅಪಾಯ ಎದುರಿಸುತ್ತಿವೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನಮ್ಮ ಮನವಿಯನ್ನು ದಿಕ್ಕರಿಸಿ ಕಿಂಡಿ ಅಣೆಕಟ್ಟು ನಿರ್ಮಿಸಿದ್ದಾರೆ. ಇದರಿಂದ ಮಹಾಮಳೆಯ ರಭಸಕ್ಕೆ ಕೊಚ್ಚಿ ಬರುತ್ತಿರುವ ಮರದ ದಿಮ್ಮಿಗಳು ಇಲ್ಲಿ ನಿಂತು ಪ್ರವಾಹ ಏರ್ಪಡುತ್ತಿದೆ ಎಂದು ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

► ಕೊಚ್ಚಿ ಹೋದ ಕಾಲು ಸೇತುವೆ

ಕಾವೇರಿ ನದಿಯ ಉಗಮ ಸ್ಥಾನ ತಲಕಾವೇರಿ ಮತ್ತು ಭಾಗಮಂಡಲ ವ್ಯಾಪ್ತಿಯಲ್ಲೂ ಧಾರಾಕಾರ ಮಳೆಯಾಗುತ್ತಿದೆ. ಈ ಭಾಗದ ಕೋಪಟ್ಟಿ ಗ್ರಾಮದ ಕಾಲು ಸೇತುವೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದು, ಗ್ರಾಮಸ್ಥರು ಸಂಪರ್ಕ ಕಳೆದುಕೊಂಡಿದ್ದಾರೆ. ಉತ್ತಮ ಸೇತುವೆ ನಿರ್ಮಾಣಕ್ಕಾಗಿ ಕಳೆದ ಕೆಲವು ವರ್ಷಗಳಿಂದ ಸ್ಥಳೀಯರು ಒತ್ತಾಯಿಸುತ್ತಾ ಬಂದಿದ್ದರೂ ಜನಪ್ರತಿನಿಧಿಗಳಿಂದ ಯಾವುದೇ ಸ್ಪಂದನೆ ದೊರೆತ್ತಿರಲಿಲ್ಲ. ಕಳೆದ ವರ್ಷ ಸೇತುವೆ ಇಲ್ಲದ ಕೋಪಟ್ಟಿ ಗ್ರಾಮದ ಕುರಿತು ಪತ್ರಿಕೆಯಲ್ಲಿ ಸುದ್ದಿಯಾದಾಗ ಸ್ಥಳಕ್ಕೆ ಭೇಟಿ ನೀಡಿದ್ದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೇತುವೆ ನಿರ್ಮಾಣದ ಭರವಸೆ ನೀಡಿದ್ದರು.

ಆದರೆ ಒಂದು ವರ್ಷ ಕಳೆದರೂ ಭರವಸೆ ಈಡೇರಿಲ್ಲ, ಚುನಾವಣೆ ಸಂದರ್ಭ ಮಾತ್ರ ಜನಪ್ರತಿನಿಧಿಗಳಿಗೆ ಕೋಪಟ್ಟಿ ಗ್ರಾಮದ ಮೇಲೆ ಇನ್ನಿಲ್ಲದ ಕಾಳಜಿ ಬರುತ್ತದೆ. ನಂತರ ತಿರುಗಿಯೂ ನೋಡುವುದಿಲ್ಲವೆಂದು ಸ್ಥಳೀಯ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾಲು ಸೇತುವೆ ಮುರಿದು ಹೋಗಿರುವುದರಿಂದ ವಿದ್ಯಾರ್ಥಿಗಳಿಗೆ ಶಾಲಾ, ಕಾಲೇಜುಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ರಸ್ತೆ ಮಾರ್ಗದ ಮೂಲಕ ತೆರಳಲು ಮಳೆಯ ನಡುವೆ 4- 5 ಕಿ.ಮೀ ದೂರ ನಡೆದುಕೊಂಡೇ ಹೋಗಬೇಕಾಗಿದೆ. ಇದು ಮಕ್ಕಳು ಹಾಗೂ ವಯೋವೃದ್ದರಿಗೆ ಅಸಾಧ್ಯವಾಗಿದೆ. ತಕ್ಷಣ ಕೊಡಗು ಜಿಲ್ಲಾಡಳಿತ ಎಚ್ಚೆತ್ತುಕೊಂಡು ಪುಣ್ಯಕ್ಷೇತ್ರ ಭಾಗಮಂಡಲದ ಸಮೀಪದಲ್ಲೇ ಇರುವ ಕೋಪಟ್ಟಿ ಗ್ರಾಮಕ್ಕೆ ಸೇತುವೆ ನಿರ್ಮಿಸಿಕೊಡುವ ಯೋಜನೆಗೆ ಚಾಲನೆ ನೀಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

::: ಕರಿಕೆಯಲ್ಲಿ ಮಳೆ

ಕೊಡಗು- ಕೇರಳ ಗಡಿಯ ಕರಿಕೆ ಗ್ರಾಮದಲ್ಲಿ ಮಳೆ ನಿರಂತರವಾಗಿದೆ. ರಸ್ತೆಗೆ ಅಡ್ಡಲಾಗಿ ಬಿದ್ದ ಬರೆ, ಮರವನ್ನು ತೆರವುಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ.

ಉಳಿದಂತೆ ಜಿಲ್ಲೆಯ ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ, ಪೊನ್ನಂಪೇಟೆ ಮತ್ತು ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News