ಜನ್ಮದಿನೋತ್ಸವಕ್ಕೆ ತೆರಳಿದ್ದ ವಾಹನ ಅಪಘಾತದಲ್ಲಿ ಓರ್ವ ಮೃತ್ಯು: ಸಿದ್ದರಾಮಯ್ಯ ಸಂತಾಪ

Update: 2022-08-03 04:25 GMT

ಬೆಂಗಳೂರು: ನಾಳೆ(ಆ.3) ದಾವಣಗೆರೆಯಲ್ಲಿ ನಡೆಯಲಿರುವ ಸಿದ್ದರಾಮಯ್ಯ ಅವರ‌ ಜನ್ಮ ದಿನ ಕಾರ್ಯಕ್ರಮಕ್ಕೆ ಹೊರಟಿದ್ದ ವಾಹನವೊಂದು ಬಾಗಲಕೋಟೆಯ ಹೂಲಗೇರಿ ಕ್ರಾಸ್ ಬಳಿ ಅಪಘಾತಕ್ಕೀಡಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ.

ಮೃತರನ್ನು ಚಿಕ್ಕ ಆಲಗುಂಡಿಯ ಪ್ರಕಾಶ ಬಡಿಗೇರ್ ಎಂದು ಗುರುತಿಸಲಾಗಿದೆ. 

ಗಾಯಾಳುಗಳಾದ ಬಾಬು ಅಪ್ಪಾಸಾಬ್ ನದಾಫ್, ಶಿವಪ್ಪ ಚಿಚಕಂಡಿ, ಸೋಮೇಶ್ ಹೊಂಬಾಳೆ, ಸಿದ್ದಪ್ಪ ಪಂಚಗಾವಿ, ಮುತ್ತಪ್ಪ ಗುಂಜಾಗೊಳ, ಮುದಕಪ್ ಹೊಂಬಾಳೆ, ಶ್ರೀಶೈಲ ಮಠಪತಿ ಎಂಬವರನ್ನು ಚಿಕಿತ್ಸೆಗೆ ಖಾಸಗಿ ಆಸ್ಪ್ರತ್ರೆಗೆ ದಾಖಲಿಸಲಾಗಿದೆ. 

ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ,'ನನ್ನ ಹುಟ್ಟುಹಬ್ಬದ ಸಮಾರಂಭಕ್ಕಾಗಿ ದಾವಣಗೆರೆಗೆ ಆಗಮಿಸುತ್ತಿದ್ದ ಮುದೋಳ ತಾಲೂಕಿನ ಪ್ರಕಾಶ್ ಬಡಿಗೇರ್ ಎಂಬವರು ರಸ್ತೆ ಅಪಘಾತದಲ್ಲಿ‌ ಮೃತಪಟ್ಟ ಸುದ್ದಿ ತಿಳಿದು ಆಘಾತವಾಯಿತು. ಮೃತ ಪ್ರಕಾಶ್ ಅವರ ಕುಟುಂಬದ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತೇನೆ' ಎಂದು ತಿಳಿಸಿದ್ದಾರೆ. 

'ನನ್ನ ಹುಟ್ಟುಹಬ್ಬದ ಸಮಾರಂಭಕ್ಕಾಗಿ ದಾವಣಗೆರೆಗೆ ವಾಹನಗಳಲ್ಲಿ ಆಗಮಿಸುವವರು ಅನಗತ್ಯ ಧಾವಂತ ತೋರದೆ ಎಚ್ಚರಿಕೆಯಿಂದ ವಾಹನ ಚಲಾಯಿಸಿಕೊಂಡು ಬರಬೇಕೆಂದು ಕೈಮುಗಿದು ಮನವಿ ಮಾಡಿಕೊಳ್ಳುತ್ತಿದ್ದೇನೆ.  ನಿಮ್ಮ ಜೀವ ನಮಗೆ‌ ಮಾತ್ರವಲ್ಲ ನಿಮ್ಮನ್ನು ನಂಬಿರುವ ಕುಟುಂಬಕ್ಕೂ ಅಷ್ಟೇ ಅಮೂಲ್ಯ ಎಂಬ ಅರಿವಿರಲಿ' ಎಂದೂ ಸಿದ್ದರಾಮಯ್ಯ ತನ್ನ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.


ಸಿದ್ದರಾಮಯ್ಯನವರ 75ನೇ ಹುಟ್ಟು ಹಬ್ಬದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಮುಧೋಳದಿಂದ ದಾವಣಗೆರೆಗೆ ಆಗಮಿಸುವ ವೇಳೆ ಅಪಘಾತದಲ್ಲಿ ಮೃತಪಟ್ಟಿರುವ ಪ್ರಕಾಶ್ ಬಡಿಗೇರ್ ಅವರಿಗೆ ನನ್ನ ಸಂತಾಪಗಳು. ಅಪಘಾತದಲ್ಲಿ ನಾಲ್ವರಿಗೆ ಗಂಭೀರಗಳಾಗಿದ್ದು ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸುತ್ತೇನೆ.

- ಬಿ.ಕೆ ಹರಿಪ್ರಸಾದ್, ವಿಧಾನ ಪರಿಷತ್ ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News