ಕಪ್ಪು ಬಟ್ಟೆ ಧರಿಸಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯು ರಾಮಮಂದಿರ ಶಂಕುಸ್ಥಾಪನೆ ವಿರುದ್ಧವಾಗಿದೆ: ಅಮಿತ್ ಶಾ

Update: 2022-08-06 07:42 GMT

ಹೊಸದಿಲ್ಲಿ: ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎಂದು ಶುಕ್ರವಾರ ಆರೋಪಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸುತ್ತಿರುವುದು ಅಯೋಧ್ಯೆಯಲ್ಲಿ ರಾಮ ಮಂದಿರದ ಶಂಕುಸ್ಥಾಪನೆ ವಿರುದ್ಧವಾಗಿದೆ  ಎಂದು ಹೇಳಿದ್ದಾರೆ.

ಇಂದು(ಶುಕ್ರವಾರ) ರಾಮ ಮಂದಿರದ ಪ್ರತಿಷ್ಠಾಪನಾ ಮಹೋತ್ಸವದ ವರ್ಷಾಚರಣೆ ಎಂದ ಅವರು, ಕಾಂಗ್ರೆಸ್ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸುವ ಮೂಲಕ ತಾವು ರಾಮಜನ್ಮಭೂಮಿ ಶಂಕುಸ್ಥಾಪನೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ ಹಾಗೂ  ತುಷ್ಟೀಕರಣ ನೀತಿಯನ್ನು ಮುಂದುವರಿಸುತ್ತಿದ್ದೇವೆ ಎಂಬ ಸೂಕ್ಷ್ಮ ಸಂದೇಶವನ್ನು ರವಾನಿಸುತ್ತಿದೆ ಎಂದಿದ್ದಾರೆ.

ಬೆಲೆ ಏರಿಕೆಯ ವಿರುದ್ಧದ ತನ್ನ ಪ್ರಜಾಸತ್ತಾತ್ಮಕ ಪ್ರದರ್ಶನಗಳನ್ನು "ದಿಕ್ಕು ತಪ್ಪಿಸುವ, ತಬ್ಬಿಬ್ಬುಗೊಳಿಸುವ, ಧ್ರುವೀಕರಿಸುವ ಹಾಗೂ  ದುರುದ್ದೇಶಪೂರಿತ ತಿರುವು ನೀಡುವ" ಹತಾಶ ಪ್ರಯತ್ನ ಇದಾಗಿದೆ ಎಂದು ಗೃಹ ಸಚಿವ ಅಮಿತ್ ಶಾಗೆ ಕಾಂಗ್ರೆಸ್ ತಿರುಗೇಟು ನೀಡಿದೆ.

ಬೆಲೆ ಏರಿಕೆ, ನಿರುದ್ಯೋಗ ಹಾಗೂ  ಜಿಎಸ್‌ಟಿ ವಿರುದ್ಧದ ಕಾಂಗ್ರೆಸ್ ನದ ಇಂದಿನ ಪ್ರಜಾಸತ್ತಾತ್ಮಕ ಪ್ರತಿಭಟನೆಗಳನ್ನು ದಿಕ್ಕು ತಪ್ಪಿಸುವ, ತಬ್ಬಿಬ್ಬುಗೊಳಿಸುವ, ಧ್ರುವೀಕರಿಸುವ ಮತ್ತು ದುರುದ್ದೇಶಪೂರಿತ ತಿರುವು ನೀಡುವ ಹತಾಶ ಪ್ರಯತ್ನವನ್ನು ಗೃಹ ಸಚಿವರು ಮಾಡಿದ್ದಾರೆ. ಕೇವಲ ರೋಗಗ್ರಸ್ತ ಮನಸ್ಸು ಮಾತ್ರ ಇಂತಹ ನಕಲಿ ವಾದಗಳನ್ನು ಮಾಡುತ್ತದೆ. ಪ್ರತಿಭಟನೆಯ ಬಿಸಿ ಗೃಹ ಸಚಿವರಿಗೆ ತಟ್ಟಿರುವುದು ಇದರಿಂದ ಸ್ಪಷ್ಟವಾಗಿವೆ!" ಎಂದು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.

ಕಳೆದ ವಾರದಿಂದ ಯೋಜಿತವಾಗಿದ್ದ ಕಾಂಗ್ರೆಸ್ ಪ್ರತಿಭಟನಾ ಮೆರವಣಿಗೆ ಶುಕ್ರವಾರ  ಭಾರೀ ರೋಚಕವಾಗಿ ಮಾರ್ಪಟ್ಟಿತು. ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದಿಲ್ಲಿಪೊಲೀಸರು ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಪಕ್ಷದ ಪ್ರಮುಖ ನಾಯಕರನ್ನು ವಶಕ್ಕೆ ಪಡೆದಿದ್ದರು.

"ಕಾಂಗ್ರೆಸ್ಸಿಗರು  ಪ್ರತಿದಿನ ಏಕೆ ಪ್ರತಿಭಟನೆಗಳನ್ನು ನಡೆಸುತ್ತಾರೆ? ಕಾಂಗ್ರೆಸ್ ಹಿಡನ್ ಅಜೆಂಡಾವನ್ನು ಹೊಂದಿದೆ ಎಂದು ನಾನು ಭಾವಿಸುತ್ತೇನೆ.  ಅವರು ತಮ್ಮ ತುಷ್ಟೀಕರಣ ನೀತಿಯನ್ನು ಮರೆಮಾಚುವ ರೀತಿಯಲ್ಲಿ ವಿಸ್ತರಿಸಿದ್ದಾರೆ" ಎಂದು ಶಾ ಹೇಳಿದ್ದಾರೆ. ಗೃಹ  ಸಚಿವಾಲಯ ದಿಲ್ಲಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಉಸ್ತುವಾರಿ ಹೊಂದಿದೆ.

ಪ್ರತಿಭಟನೆಯ ಸಮಯವನ್ನು ಪ್ರಶ್ನಿಸಿದ ಅವರು, ಇಂದು ಜಾರಿ ನಿರ್ದೇಶನಾಲಯವು ಯಾರನ್ನೂ ಕರೆದಿಲ್ಲ ಅಥವಾ ಯಾರನ್ನೂ ವಿಚಾರಣೆ ಮಾಡಿಲ್ಲ, ಯಾವುದೇ ದಾಳಿಗಳು ನಡೆದಿಲ್ಲ ... ಇಂದು ಏಕೆ ಪ್ರತಿಭಟನೆ ನಡೆಸಬೇಕು ಎಂದು ನನಗೆ ಅರ್ಥವಾಗುತ್ತಿಲ್ಲ. 550 ವರ್ಷಗಳ ಹಿಂದಿನ ಸಮಸ್ಯೆಗೆ ಶಾಂತಿಯುತ ಪರಿಹಾರ ಒದಗಿಸಿ, ರಾಮಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣಕ್ಕೆ  ಪ್ರಧಾನಿ ನರೇಂದ್ರ ಮೋದಿ ಅಡಿಪಾಯ ಹಾಕಿದ ದಿನದಂದೇ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ದೇಶದಲ್ಲಿ ಎಲ್ಲಿಯೂ ಗಲಭೆ ಹಿಂಸಾಚಾರ ನಡೆದಿಲ್ಲ... ತುಷ್ಟೀಕರಣ ನೀತಿ ದೇಶಕ್ಕಾಗಲೀ, ಕಾಂಗ್ರೆಸ್‌ಗಾಗಲೀ ಒಳ್ಳೆಯದಲ್ಲ ಎಂದು ಹೇಳುತ್ತೇನೆ ಎಂದು ಗೃಹ ಸಚಿವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News