ಕಲಬುರಗಿ: ಬಾಡಿಗೆ ಹಂತಕರಿಂದ ತಮ್ಮನನ್ನೇ ಕೊಲೆ ಮಾಡಿಸಿದ ಅಕ್ಕಂದಿರು!

Update: 2022-08-08 03:21 GMT

ಕಲಬುರಗಿ: ಪದೇ ಪದೇ ವೈಯಕ್ತಿಕ ಬದುಕಿನಲ್ಲಿ ಹಸ್ತಕ್ಷೇಪ ಮಾಡುತ್ತಿದ್ದ ಸಹೋದರನನ್ನು, ಸ್ವಂತ ಅಕ್ಕಂದಿರೇ ಬಾಡಿಗೆ ಹಂತಕರ ಮೂಲಕ ಹತ್ಯೆ ಮಾಡಿಸಿದ ನಿಗೂಢ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.

ತಮ್ಮನ ಹತ್ಯೆಗೆ ಸುಪಾರಿ ನೀಡಿದ ಸಂಬಂಧ ಗಂಡಂದಿರಿಂದ ಬೇರ್ಪಟ್ಟಿದ್ದ ಇಬ್ಬರು ಸಹೋದರಿಯರು ಮತ್ತು ನಾಲ್ವರು ಬಾಡಿಗೆ ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ಜುಲೈನಲ್ಲಿ ಕಲಬುರಗಿಯ ಗಾಜಿಪುರದಲ್ಲಿ ನಾಗರಾಜ್ ಮಟಮಾರಿ (29) ಎಂಬ ಯುವಕನ ನಿಗೂಢ ಹತ್ಯೆ ನಡೆದಿತ್ತು. ಜುಲೈ 29ರಂದು ಹತ್ಯೆಯಾದ ಆತನ ಮೃತದೇಹ ಅಳಂದ ರಸ್ತೆಯ ಭೋಸಗಾ ಕ್ರಾಸ್ ಬಳಿ ಪತ್ತೆಯಾಗಿತ್ತು. ದೊಡ್ಡ ಕಲ್ಲು ಹೊತ್ತುಹಾಕಿ ಆತನ ತಲೆ ಜಜ್ಜಿ ಸಾಯಿಸಲಾಗಿತ್ತು. ತನಿಖೆಯ ಬಳಿಕ ಪೊಲೀಸರು ಸಹೋದರಿಯರಾದ ಅನಿತಾ ಹಾಗೂ ಮೀನಾಕ್ಷಿ, ಸುಪಾರಿ ಹಂತಕರಾದ ಅವಿನಾಶ್, ಆಸಿಫ್, ರೋಹಿತ್ ಹಾಗೂ ಮೊಹ್ಸಿನ್ ಎಂಬವರನ್ನು ಬಂಧಿಸಿದ್ದಾರೆ.

ಬಹಳಷ್ಟು ಹಿಂದೆಯೇ ಗಂಡಂದಿರಿಂದ ಬೇರ್ಪಟ್ಟಿದ್ದ ಇಬ್ಬರು ಸಹೋದರಿಯರು ಸಹೋದರ ನಾಗರಾಜ್ ಮತ್ತು ತಾಯಿ ಜತೆ ಕಲಬುರಗಿಯಲ್ಲಿ ವಾಸವಿದ್ದರು. ಸಹೋದರಿಯರು ಹಲವು ಪ್ರೇಮಸಂಬಂಧಗಳಲ್ಲಿ ಸಿಲುಕಿದ್ದನ್ನು ನಾಗರಾಜ್ ಆಕ್ಷೇಪಿಸಿದ್ದ ಎನ್ನಲಾಗಿದೆ. ತಮ್ಮನ ಸಲಹೆಯನ್ನು ತಿರಸ್ಕರಿಸಿದ ಇಬ್ಬರೂ ಮನೆ ತೊರೆದು ಪ್ರತ್ಯೇಕವಾಗಿ ವಾಸ ಮಾಡಲು ಆರಂಭಿಸಿದರು.

ತಮ್ಮನ ಹಸ್ತಕ್ಷೇಪವನ್ನು ಸಹಿಸದೇ ಆತನ ಹತ್ಯೆಗೆ ಸಂಚು ರೂಪಿಸಿದರು. ಸುಪಾರಿ ಹಂತಕರು ನಾಗರಾಜ್ ಅವರನ್ನು ಆಟೊರಿಕ್ಷಾದಲ್ಲಿ ಕತ್ತು ಸೀಳಿ ಕೊಲೆ ಮಾಡಿ ಬಳಿಕ ನಗರದ ಹೊರವಲಯದಲ್ಲಿ ಎಸೆದಿದ್ದರು. ಮರುದಿನ ಪೊಲೀಸರು ಈ ಬಗ್ಗೆ ಸಹೋದರಿಯರಿಗೆ ಮಾಹಿತಿ ನೀಡಿದ್ದರು. ಸಹೋದರಿಯರು ಸುಪಾರಿ ಹಂತಕರಿಗೆ ಮಾಡಿದ ದೂರವಾಣಿ ಕರೆಯ ಆಧಾರದಲ್ಲಿ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ ಎಂದು timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News