ಬಾಗಲಕೋಟೆಯಲ್ಲಿ ಮಳೆಗೆ 65 ಕ್ಕೂ ಅಧಿಕ ಮನೆಗಳ ಕುಸಿತ

Update: 2022-08-09 15:17 GMT

ಬಾಗಲಕೋಟೆ:  ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನಾದ್ಯಂತ ಸತತ ಜಿಟಿ ಜಿಟಿ ಸುರಿಯುತ್ತಿರುವ ಮಳೆಗೆ ಮಣ್ಣಿನ ಮನೆಗಳು ಕುಸಿಯುತ್ತಿವೆ. ಇದರಿಂದ ಜನರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಹಾನಿಗೊಳಗಾದ ಮನೆಗಳಿಗೆ ಶಾಸಕ ಸಿದ್ದು ಸವದಿ, ತಹಶೀಲ್ದಾರ ಸಂಜಯ ಇಂಗಳೆ ಖುದ್ದಾಗಿ ಭೆಟ್ಟಿ ನೀಡಿ ಹಾನಿಗೊಳಗಾದ ಮನೆಗಳ ಸರ್ವೆ ಕಾರ್ಯ ಮಾಡಿಸಿ ಸೂಕ್ತ ದಾಖಲೆಗಳೊಂದಿಗೆ ಸರ್ಕಾರಕ್ಕೆ ಮಾಹಿತಿ ಒದಗಿಸಿದ್ದಾರೆ. 

ಕಳೆದ ಜುಲೈ 25 ರಿಂದ ಕಂದಾಯ ಇಲಾಖೆಯಿಂದ ನಡೆಯುತ್ತಿರುವ ಸರ್ವೆ ಕಾರ್ಯದ ಪ್ರಕಾರ 65 ಮನೆಗಳು ಬಿದ್ದಿರುವ ಮಾಹಿತಿಯಿದ್ದು, ಕಳೆದೊಂದು ವಾರದಲ್ಲಿಯೇ 50 ಕ್ಕೂ ಅಧಿಕ ಮನೆಗಳು ಕುಸಿದ ವರದಿಯಾಗಿದೆ.

ಇರಲು ಸೂರಿಲ್ಲದೆ ಪರದಾಡುತ್ತಿರುವ ಕುಟುಂಬಗಳಿಗೆ ಶೀಘ್ರ ಪರಿಹಾರ ಒದಗಿಸುವದಲ್ಲದೆ ಸ್ವಲ್ಪ ಹಾಗು ಭಾಗಶಃ ಬಿದ್ದಿರುವ ಮನೆಗಳ ಸರ್ವೆ ಕಾರ್ಯದೊಂದಿಗೆ ತ್ವರಿತ ಪರಿಹಾರ ಒದಗಬೇಕಿದೆ ಎಂಬುದು ಮನೆ ಕಳೆದುಕೊಂಡ ಸಂತ್ರಸ್ತರ ಅಂಬೋಣ. 

ಮಳೆ ಹಾನಿಗೆ ಮನೆ ಕುಸಿದ ಅಥವಾ ಸಮಸ್ಯೆ ಎದುರಾದಲ್ಲಿ ತಕ್ಷಣವೇ ಕಂದಾಯ ಇಲಾಖೆಯ ಸಹಾಯ ವಾಣಿ 08353-230555 ನಂಬರನ್ನು ಸಂಪರ್ಕಿಸಬೇಕು.

ಉದ್ಯೋಗ ಕಸಿದ ಮಳೆ: ನೇಕಾರಿಕೆಯಿಂದ ಕೂಲಿ-ನಾಲಿ ಮಾಡಿ ಬದುಕು ಸಾಗಿಸುತ್ತಿರುವ ಕುಟುಂಬಕ್ಕೆ ಮಳೆರಾಯ ಬರಸಿಡಿಲಿನಂತೆ ಬಂದು ಉದ್ಯೋಗವನ್ನೇ ಕಸಿದುಕೊಂಡಿದ್ದಲ್ಲದೇ ಮಲಗಲೂ ಜಾಗವಿಲ್ಲದಂತೆ ಮಾಡಿರುವದು ವಿಪರ್ಯಾಸ.

`ಆಯಾ ಇಲಾಖೆಗಳು ತೇರದಾಳ ಕ್ಷೇತ್ರಾದ್ಯಂತ ಬಿದ್ದ ಮನೆಗಳ ಸರ್ವೆ ಕಾರ್ಯ ನಡೆಸುತ್ತಿದ್ದಾರೆ. ಸೂರು ಕಳೆದುಕೊಂಡ ಅರ್ಹ ಫಲಾನುಭವಿಗಳಿಗೆ ಸೂಕ್ತ ಪರಿಹಾರ ಒದಗಿಸಿ, ಅಲ್ಪ ಪ್ರಮಾಣದಲ್ಲಿ ಬಿದ್ದ ಮನೆಗಳಿಗೆ 50 ಸಾವಿರದಿಂದ 3 ಲಕ್ಷ. ಭಾಗಶಃ ಬಿದ್ದಿರುವ ಮನೆಗಳಿಗೆ 5 ಲಕ್ಷದವರೆಗೆ ಸರ್ಕಾರ ನೀಡಲಿದ್ದು, ಪಾರದರ್ಶಕವಾಗಿ ಪರಿಹಾರ ಒದಗಿಸುವೆವು ಏಂದು ಶಾಸಕರಾದ ಸಿದ್ದು ಸವದಿ ತಿಳಿಸಿದರು.

ಶಾಸಕರ, ಜಿಲ್ಲಾಧಿಕಾರಿ ಹಾಗು ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಪ್ರತ್ಯೇಕ ಸಭೆಗಳು ನಡೆದಿವೆ. ಆಯಾ ಗ್ರಾಮ ಮಟ್ಟದಲ್ಲಿ ನೂಡಲ್ ಅಧಿಕಾರಿಗಳನ್ನೂ ನೇಮಿಸಲಾಗಿದ್ದು, ಸಾಧ್ಯವಾದಷ್ಟು ಹಳೆಯ ಮತ್ತು ಜಂತಿ ಮನೆಗಳು ಬೀಳುವ ಲಕ್ಷಣಗಳನ್ನು ಹೊಂದಿರುವ ಮನೆಗಳಲ್ಲಿ ಮಲಗಬಾರದು ಎಂದು ತಹಶೀಲ್ದಾರ ಸಂಜಯ ಇಂಗಳೆ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News