ಮೈಸೂರು: ರಿಯಲ್ ಎಸ್ಟೇಟ್ ಉದ್ಯಮಿಯ ಹತ್ಯೆ ಪ್ರಕರಣಕ್ಕೆ ತಿರುವು
Update: 2022-08-09 16:04 GMT
ಮೈಸೂರು,ಆ.9: ಉದ್ಯಮಿಯೊಬ್ಬರ ಕೊಲೆ ಪ್ರಕರಣ ಇದೀಗ ತಿರುವು ಪಡೆದುಕೊಂಡಿದ್ದು, ಮಗನೇ ತಂದೆಯನ್ನು ಹತ್ಯೆ ಮಾಡಿರುವುದು ತಿಳಿದು ಬಂದಿದೆ.
ಮೈಸೂರು ನಗರದ ಬೃಂದಾವನ ಮೊದಲಹಂತದಲ್ಲಿ ಉದ್ಯಮಿ ಹಾಗೂ ರಿಯಲ್ ಎಸ್ಟೇಟ್ ಮಾಡುತ್ತಿದ್ದ ಸಂಪತ್ ಕುಮಾರ್ ಎಂಬುವವರನ್ನು ಆ.8 ರಂದು ಸೋಮವಾರ ಯಾರೋ ಅಪರಿಚಿತರು ಬಂದು ಕೊಲೆ ಮಾಡಿದ್ದಾರೆ ಎಂದು ಆತನ ಮಗ ವಿ.ವಿ.ಪುರಂನಪೊಲೀಸರಿಗೆ ದೂರು ನೀಡಿದ್ದ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು ಪರಿಶೀಲನೆ ನಡೆಸಿದಾಗ ಮಗನೇ ತಂದೆಯನ್ನು ಹತ್ಯೆ ಮಾಡಿರುವುದು ತಿಳಿದು ಬಂದಿದೆ.
ಸಂಪತ್ ಕುಮಾರ್ ಪ್ರತಿ ನಿತ್ಯ ಪತ್ನಿ ಮತ್ತು ಮಗನ ಜೊತೆ ಜಗಳವಾಡುತ್ತಿದ್ದ ಎಂದು ತಿಳಿದುವಬಂದಿದೆ. ಇದರಿಂದ ಬೇಸತ್ತ ಮಗ ತಂದೆಯನ್ನೇ ರಾಡ್ ನಿಂದ ಹೊಡೆದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮಾಧ್ಯಮದವರಿಗೆ ತಿಳಿಸಿದರು.
ಈ ಸಂಬಂಧ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.