ಸಿಎಂ ಬದಲಾವಣೆ ಇಲ್ಲ, ರಾಜ್ಯಾಧ್ಯಕ್ಷರ ನೇಮಕ ಹೈಕಮಾಂಡ್ ನಿರ್ಧಾರ: ಬಿ.ಎಸ್ ಯಡಿಯೂರಪ್ಪ

Update: 2022-08-10 12:53 GMT

ಬೆಂಗಳೂರು: 'ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಉದ್ಭವಿಸಲ್ಲ' ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. 

ನಗರದಲ್ಲಿ ಸುದ್ದಿಗರಾರರೊಂದಿಗೆ ಮಾತನಾಡಿದ ಅವರು, ''ಕೇವಲ ಏಳೆಂಟು ತಿಂಗಳಿಗೆ ಸಿಎಂ ಬದಲಾವಣೆ ಪ್ರಶ್ನೆ ಬರಲ್ಲ. ಸಿಎಂ ಬೊಮ್ಮಾಯಿ ಉಳಿದ ಅವಧಿಯನ್ನು ಪೂರೈಸುತ್ತಾರೆ. ಸಹಜವಾಗಿ ರಾಜ್ಯಾಧ್ಯಕ್ಷರ ಅವಧಿ ಮುಗಿದ ಮೇಲೆ ಬದಲಾವಣೆಯಾಗುತ್ತೆ. ಯಾರನ್ನು ಮಾಡಬೇಕೆಂಬುದು ಹೈಕಮಾಂಡ್ ತೀರ್ಮಾನ ಮಾಡುತ್ತೆ'' ಎಂದು ತಿಳಿಸಿದರು. 

‘ಬಸವರಾಜ ಬೊಮ್ಮಾಯಿ ಅವರನ್ನು ಮುಂದುವರಿಸುವ ವಿಚಾರದಲ್ಲಿ ಯಾವುದೇ ಗೊಂದಲಗಳು ಇಲ್ಲ. ರಾಜ್ಯ ಬಿಜೆಪಿಯಲ್ಲಾಗಲಿ ಅಥವಾ ಹೈಕಮಾಂಡ್ ಮಟ್ಟದಲ್ಲಾಗಲಿ ಮುಖ್ಯಮಂತ್ರಿ ಬದಲಾವಣೆಗೆ ಸಂಬಂಧಿಸಿದಂತೆ ಯಾವುದೇ ಚಿಂತನೆ ನಡೆದಿಲ್ಲ. ಮುಖ್ಯಮಂತ್ರಿ ಬದಲಾವಣೆ ಎಂಬುದು ಕೇವಲ ವದಂತಿಯಷ್ಟೇ ' ಎಂದು ಯಡಿಯೂರಪ್ಪ ಇದೇ ಸಂದರ್ಭದಲ್ಲಿ ತಿಳಿಸಿದರು.

‘ಕೇಂದ್ರ ಗೃಹ ಸಚಿವರೂ ಆಗಿರುವ ಅಮಿತ್ ಶಾ ಅವರನ್ನು ಭೇಟಿಯಾದಾಗಲೂ ಈ ವಿಚಾರ ಬಗ್ಗೆ ಯಾವುದೇ ರೀತಿಯ ಚರ್ಚೆ ಮಾಡಿಲ್ಲ. ವಿಧಾನಸಭಾ ಚುನಾವಣೆ ಹಾಗೂ ಪಕ್ಷ ಸಂಘಟನೆ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ಬಸವರಾಜ್ ಬೊಮ್ಮಾಯಿ ಅವರೇ ಪೂರ್ಣಾವಧಿವರೆಗೂ ಮುಖ್ಯಮಂತ್ರಿ ಆಗಿ ಮುಂದುವರೆಯುತ್ತಾರೆ. ಹೀಗಾಗಿ ಸಿಎಂ ಬದಲಾವಣೆ ಚರ್ಚೆಯನ್ನು ಇಲ್ಲಿಗೆ ನಿಲ್ಲಿಸಿ' ಎಂದು ಅವರು ತಾಕೀತು ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News