ಸಿದ್ದಾಪುರ: ಮರ ಬಿದ್ದು ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಸ್ಥಳದಲ್ಲೇ ಮೃತ್ಯು
Update: 2022-08-11 11:47 GMT
ಸಿದ್ದಾಪುರ (ಕೊಡಗು): ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನ ಮೇಲೆ ಮರ ಬಿದ್ದ ಪರಿಣಾಮ ಗಂಭೀರ ಗಾಯಗೊಂಡ ಕಾರ್ಮಿಕ ಮೃತಪಟ್ಟ ಘಟನೆ ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ ಹೊಸಕೋಟದಲ್ಲಿ ಸಂಭವಿಸಿದೆ.
ಸಿದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಹ್ಯ ಗ್ರಾಮದ ಪ್ರಕಾಶ್ (52) ಮೃತರು ಎಂದು ತಿಳಿದುಬಂದಿದೆ.
ಕೂಲಿ ಕಾರ್ಮಿಕನಾಗಿರುವ ಪ್ರಕಾಶ್ ಇಂದು ಬೆಳಗ್ಗೆ ಅಮ್ಮತ್ತಿ ಹೊಸಕೋಟದ ಕಾಫಿ ತೋಟ ಒಂದರಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಘಟನೆ ನಡೆದಿದೆ. ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಮರವೊಂದು ಹಠಾತ್ತನೆ ಪ್ರಕಾಶ್ ಅವರ ತಲೆ ಮೇಲೆ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಸ್ಥಳಕ್ಕೆ ವಿರಾಜಪೇಟೆ ತಹಶೀಲ್ದಾರ್ ಅರ್ಚನಾ ಭಟ್, ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಅನಿಲ್ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.