ಹರ್ ಘರ್ ತಿರಂಗ ಅಭಿಯಾನದ ಮೂಲಕ ಬಿಜೆಪಿಯಿಂದ ನಾಟಕ: ಮಧುಬಂಗಾರಪ್ಪ ಕಿಡಿ

Update: 2022-08-11 17:01 GMT

ಶಿವಮೊಗ್ಗ, ಆ.11: 75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ  ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ಮಧು ಬಂಗಾರಪ್ಪ ನೇತೃತ್ವದಲ್ಲಿ ರಾಷ್ಟ್ರಧ್ವಜ ಹಿಡಿದು ಸ್ವಾತಂತ್ರ್ಯ ನಡಿಗೆ ಮಾಡಲಾಯಿತು.

ಸೊರಬ ತಾಲೂಕಿನ ಬಿಳುವಾಣಿ ಗ್ರಾಮದಿಂದ ನಡಿಗೆ ಆರಂಭವಾಗಿ ಸೊರಬ ಪಟ್ಟಣದಲ್ಲಿ ಅಂತ್ಯಗೊಳಿಸಲಾಯಿತು. ನಡಿಗೆಯಲ್ಲಿ ಪಾಲ್ಗೊಂಡಿದ್ದವರೆಲ್ಲರೂ ರಾಷ್ಟ್ರಧ್ವಜವನ್ನು ಹಿಡಿದು ಪಾದಯಾತ್ರೆ ನಡೆಸಿದರು.

ಪಾದಯಾತ್ರೆಯಲ್ಲಿ ಎಸ್. ಮಧುಬಂಗಾರಪ್ಪ ಅವರ ಪತ್ನಿ ಅನಿತಾ ಮಧು ಬಂಗಾರಪ್ಪ ಮತ್ತು ಪುತ್ರ ಸೂರ್ಯ ಮಧು ಬಂಗಾರಪ್ಪ ಹೆಜ್ಜೆ ಹಾಕಿದರು. ಪಾದಯಾತ್ರೆ ಬರುವ ಮಾರ್ಗದ ಗ್ರಾಮಗಳಲ್ಲಿ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಮಹಿಳೆಯರು ಆರತಿ ಎತ್ತಿ ಶುಭ ಹಾರೈಸಿದರು. ಪಟ್ಟಣದಲ್ಲಿ ಪ್ರಥಮ ದರ್ಜೆ ಕಾಲೇಜ್ ಸಮೀಪದಲ್ಲಿ ವಿದ್ಯಾರ್ಥಿಗಳು ಮಧು ಬಂಗಾರಪ್ಪ ಅವರಿಗೆ ರಾಖಿ ಕಟ್ಟಿದ್ದು ವಿಶೇಷವಾಗಿತ್ತು. ಮಳೆ-ಗಾಳಿಯ ನಡುವೆಯು ರಾಷ್ಟ್ರ ಧ್ವಜದೊಂದಿಗೆ ಸುಮಾರು 15 ಕಿ.ಮೀ ಪಾದಯಾತ್ರೆ ಯಶಸ್ವಿಯಾಗಿ ನಡೆಯಿತು. ಪೊಲೀಸ್ ಇಲಾಖೆಯಿಂದ ವಾಹನಗಳ ಸಂಚಾರಕ್ಕೆ ತೊಡಕಾಗದಂತೆ ಸೂಕ್ತ ಕ್ರಮ ಕೈಗೊಂಡು, ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ಮಾಜಿ ಶಾಸಕ ಮಧುಬಂಗಾರಪ್ಪ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ಮಹನೀಯರು ಮತ್ತು ವೀರಯೋಧರ ನೆನಪಿಗಾಗಿ ಹಾಗೂ ತ್ಯಾಗ, ಬಲಿದಾನ, ದೇಶದ ಸಮಗ್ರತೆ, ಸಾಮರಸ್ಯ ಮತ್ತು ಸಮಾನತೆಯನ್ನು ಸಾರುವ ಅಗತ್ಯವಿದೆ. ಅದಕ್ಕಾಗಿಯೇ ಈ ಪಾದಯಾತ್ರೆ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಅನೇಕ ಪಾದಯಾತ್ರೆಗಳು, ಉಪವಾಸ ಸತ್ಯಾಗ್ರಹಗಳು ಸೇರಿದಂತೆ ಹಲವಾರು ಹೋರಾಟದ ಪ್ರತಿಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. ರಾಷ್ಟ್ರ ಧ್ವಜ ಹಾಗೂ ಸಂವಿಧಾನಕ್ಕೆ ಅಗೌರವ ತೋರುವವರಿಗೆ ಬದಲಾವಣೆ ಮಾಡುವ ಶಕ್ತಿ ಸಾಮಾನ್ಯ ಜನತೆಗಿದೆ. ದೇಶದ ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುವರು ಪ್ರಸ್ತುತ ಮನೆ ಮನೆಗಳಿಗೆ ರಾಷ್ಟ್ರ ಧ್ವಜ ನೀಡುತ್ತಿದ್ದಾರೆ. ದೇಶ, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸಂವಿಧಾನಕ್ಕೆ ಗೌರವ ತೋರದವರ ವಿರುದ್ಧ ಮಹಾತ್ಮ ಗಾಂಧಿಯವಂತೆ ಶಾಂತಿಯುತ ಹೋರಾಟ ಮಾಡುವುದು ತಿಳಿದಿದೆ ಹಾಗೂ ಸುಭಾಷ್ ಚಂದ್ರ ಬೋಸ್ ಅವರಂತೆ ಹೋರಾಟ ಮಾಡುವುದು ತಿಳಿದಿದೆ ಎಂದು ಎಚ್ಚರಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಎಸ್. ಸುಂದರೇಶ್ ಮಾತನಾಡಿ, ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಚಳುವಳಿ ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ಆರಂಭವಾದ ಸಂದರ್ಭದಲ್ಲಿ ಯಾವುದೇ ಬಿಜೆಪಿಯ ನಾಯಕರು ಪಾಲ್ಗೊಂಡಿರಲಿಲ್ಲ ಹಾಗೂ ದೇಶಕ್ಕೆ ಸ್ವಾತಂತ್ರ್ಯಕ್ಕಾಗಿ ಯಾವುದೇ ಬಿಜೆಪಿ ನಾಯಕರು ಸೆರೆಮನೆ ವಾಸ ಅನುಭವಿಸಿಲ್ಲ. ಪ್ರಸ್ತುತ ಹರ್ ಘರ್ ತಿರಂಗ ಅಭಿಯಾನದ ಮೂಲಕ ನಾಟಕ ಮಾಡುತ್ತಿದ್ದಾರೆ. ದೇಶದ ಎಲ್ಲಿಯೂ ಸಹ ಆರೆಸ್ಸೆಸ್ ಕಚೇರಿಗಳಲ್ಲಿ ರಾಷ್ಟ್ರ ಧ್ವಜ ಹಾರಿಸುವುದಿಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಎಲ್ಲಾ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರಿದವರಾಗಿದ್ದಾರೆ ಎನ್ನುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳಬಹುದು ಎಂದರು.

ಪಾದಯಾತ್ರೆಯಲ್ಲಿ ಸೊರಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಬಿ. ಅಣ್ಣಪ್ಪ ಹಾಲಘಟ್ಟ, ಮಹಿಳಾ ಘಟಕ ಅಧ್ಯಕ್ಷೆ ಸುಜಾತಾ ಜೋತಾಡಿ, ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಸಿ. ಪಾಟೀಲ್, ಮಾಜಿ ಸಚಿವ ಶಿವಮೂರ್ತಿ ನಾಯಕ್, ಮಾಜಿ ಶಾಸಕ ಮಹಾಲಿಂಗಪ್ಪ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಆರ್. ಶ್ರೀಧರ್ ಹುಲ್ತಿಕೊಪ್ಪ, ಜಿಪಂ ಮಾಜಿ ಸದಸ್ಯರಾದ ತಾರಾ ಶಿವಾನಂದ, ರಾಜೇಶ್ವರಿ ಗಣ ಪತಿ,ಜಿ.ಡಿ ಮಂಜುನಾಥ್, ಶಿವಲಿಂಗೇ ಗೌಡ,ಪ್ರಮುಖರಾದ ಪಿ.ಎಸ್. ಮಂಜು ನಾಥ್, ಕೆ. ಮಂಜುನಾಥ ಹಳೇಸೊರಬ, ಎಚ್. ಗಣಪತಿ, ಗೋಣಿ ಮಾಲತೇಶ್, ಸೇರಿ ದಂತೆ ಸಾವಿರಾರು ಮಂದಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News