ಮೋದಿ ನಾಯಕತ್ವದಿಂದ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಪ್ರತಿಷ್ಠಿತ ಸ್ಥಾನಮಾನ: ವಿದೇಶಾಂಗ ಸಚಿವ ಜೈಶಂಕರ್

Update: 2022-08-13 12:47 GMT
Photo: Twitter/@DrSJaishankar

ಬೆಂಗಳೂರು: 40 ವರ್ಷಗಳ ಹಿಂದೆ ನಾನು ವಿದೇಶಾಂಗ ಸೇವೆಗೆ ಸೇರಿಕೊಂಡಾಗ ಜಾಗತಿಕ ಮಟ್ಟದಲ್ಲಿ ಭಾರತದ ದನಿಯೇ ಇರಲಿಲ್ಲ. ಆದರೆ, ಪ್ರಧಾನಿ ಮೋದಿಯವರ ದಕ್ಷ ನಾಯಕತ್ವದಿಂದಾಗಿ ಈಗ ನಮ್ಮ ದನಿಗೆ ಅಭೂತಪೂರ್ವ ಬೆಲೆ ಬಂದಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಪ್ರತಿಪಾದಿಸಿದ್ದಾರೆ.

ಶನಿವಾರ ನಗರದ ಹೊರವಲಯದಲ್ಲಿರುವ ಹಾರೋಹಳ್ಳಿಯಲ್ಲಿರುವ ಜೈನ್ ವಿವಿ ಆವರಣದಲ್ಲಿ ನಡೆದ ಹರ್ ಘರ್ ತಿರಂಗಾ ಮತ್ತು ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.

ವಿದೇಶಾಂಗ ನೀತಿಯು ದೇಶದ ಜನರ ದಿನನಿತ್ಯದ ಬದುಕಿನ ಮೇಲೆ ಅಪಾರ ಪರಿಣಾಮ ಬೀರುತ್ತದೆ. ಇದರಲ್ಲಿ ಭಾರತೀಯರ ಹಿತಾಸಕ್ತಿ, ರಾಷ್ಟ್ರೀಯ ಅಭಿವೃದ್ಧಿ ಮತ್ತು ಜಾಗತಿಕ ಸಮಸ್ಯೆಗಳ ಬಗ್ಗೆ ನಾವು ತಾಳುವ ನಿಲುವು ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದು ಅವರು ಹೇಳಿದರು.

ಎಂಟು ವರ್ಷಗಳಿಂದ ಈಚೆಗೆ ನಮ್ಮ ಯೋಗ, ಆಹಾರ, ಅಧ್ಯಾತ್ಮ, ಸಂಸ್ಕøತಿ ಹಾಗೂ ಪರಂಪರೆಗಳಿಗೆ ವಿಶ್ವ ಮಟ್ಟದಲ್ಲಿ ಅಪಾರ ಗೌರವ ಪ್ರಾಪ್ತಿಯಾಗಿದೆ. ಮೋದಿ ಅವರ ನಾಯಕತ್ವವು ಜಗತ್ತಿಗೆ ಗೊತ್ತಾಗಿದೆ. ಕಳೆದ ಎಂಟು ವರ್ಷಗಳಲ್ಲಿ ಜಗತ್ತಿನ ನಾನಾ ದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 70 ಲಕ್ಷ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ ಕರೆತರಲಾಗಿದೆ. ಹಾಗೆಯೇ ವಿದೇಶಗಳಲ್ಲಿ ಓದುತ್ತಿರುವ 12 ಲಕ್ಷ ಭಾರತೀಯ ವಿದ್ಯಾರ್ಥಿಗಳ ಹಿತರಕ್ಷಣೆ ಮಾಡುವುದು ಸಾಧ್ಯವಾಗಿದೆ ಎಂದು ಅವರು ವಿವರಿಸಿದರು.

ಪರಸ್ಪರ ಬೆಸೆದುಕೊಂಡಿರುವ ಜಗತ್ತಿನಲ್ಲಿ ವಿದೇಶಾಂಗ ಸಚಿವರು ದೇಶದ ಹೂಡಿಕೆ, ತಂತ್ರಜ್ಞಾನ, ಮಧುರ ಬಾಂಧವ್ಯ, ಸಹಭಾಗಿತ್ವ, ಸಹಕಾರ ಇತ್ಯಾದಿಗಳನ್ನು ಗಮನಕ್ಕೆ ತೆಗೆದುಕೊಂಡು ಹೆಜ್ಜೆ ಇಡಬೇಕಾದ್ದು ಬಹಳ ಮುಖ್ಯ. ಉಕ್ರೇನ್-ರಷ್ಯಾ ಯುದ್ಧದ ಸಮಯದಲ್ಲಿ ನಾವು ಕಡಿಮೆ ಬೆಲೆಗೆ ತೈಲೋತ್ಪನ್ನಗಳನ್ನು ಪಡೆದುಕೊಂಡಿರುವುದು ಇದಕ್ಕೆ ಸೂಕ್ತ ನಿದರ್ಶನವಾಗಿದೆ ಎಂದು ಜೈಶಂಕರ್ ನುಡಿದರು.

ಭಾರತದ ವಿದೇಶಾಂಗ ನೀತಿಯು ಹಿಂದೆ ರಕ್ಷಣಾತ್ಮಕವಾಗಿತ್ತು. ಈಗ ತೀಕ್ಷ್ಣವಾಗಿದ್ದು, ಕೊರೋನ ಕಾಲದಲ್ಲಿ ನಮ್ಮ ಶಕ್ತಿ ಸಾಮಥ್ರ್ಯ ಕಂಡು ದೊಡ್ಡ ದೇಶಗಳು ಕೂಡ ಬೆರಗಾಗಿವೆ ಎಂದು ಜೈಶಂಕರ್ ಬಣ್ಣಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ರಾಮನಗರ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ರಾಮನಗರ ಜಿಲ್ಲೆಯಲ್ಲಿ ಹರ್ ಘರ್ ತಿರಂಗಾ ಅಂಗವಾಗಿ 50 ಸಾವಿರ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಲಾಗುತ್ತಿದೆ ಎಂದರು.

ಮೋದಿ ಅವರ ನಾಯಕತ್ವದಡಿ ರಾಜ್ಯದಲ್ಲಿ ಎನ್‍ಇಪಿ ಜಾರಿಯಾಗುತ್ತಿದೆ. ಗುಣಮಟ್ಟದ ಶಿಕ್ಷಣ ನಮ್ಮಲ್ಲಿ ಇದ್ದು, ಉಚಿತವಾಗಿ ಅತ್ಯುತ್ತಮ ಕೋರ್ಸುಗಳನ್ನು ಕಡ್ಡಾಯವಾಗಿ ಕಲಿಸಲಾಗುತ್ತಿದೆ. ಜೈಶಂಕರ್ ಅವರಂತಹ ಪ್ರತಿಭಾವಂತರು ವಿದೇಶಾಂಗ ಸಚಿವರಾಗಿರುವುದು ದೇಶದ ಸುದೈವವಾಗಿದೆ. ಇಂತಹ ಸಮರ್ಥರಿಂದ ಭಾರತದ ದಿಕ್ಕುದೆಸೆಯೇ ಬದಲಾಗುತ್ತಿದೆ ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅವಿನಾಶ್ ಮೆನನ್, ಎಸ್ಪಿ ಸಂತೋಷ್ ಬಾಬು, ವಿಧಾನಪರಿಷತ್ ಸದಸ್ಯ ಅ.ದೇವೇಗೌಡ, ಜೈನ್ ವಿವಿ ಸ್ಥಾಪಕ ಚೆನ್ ರಾಜ್ ಜೈನ್ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ಕುಶಾಲನಗರ: ಇಬ್ಬರು ವಿದ್ಯಾರ್ಥಿಗಳಿಗೆ ಚೂರಿ ಇರಿತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News