ತಮಿಳುನಾಡು ವಿತ್ತ ಸಚಿವ ಪಳನಿವೇಲು ಕಾರಿಗೆ ಚಪ್ಪಲಿ ಎಸೆದ ಐವರು ಬಿಜೆಪಿ ಕಾರ್ಯಕರ್ತರ ಬಂಧನ

Update: 2022-08-13 17:39 GMT

ಚೆನ್ನೈ, ಆ.13:  ತಮಿಳನಾಡಿನ ವಿತ್ತ ಸಚಿವ ಪಳನಿವೇಲು ತಂಗರಾಜನ್ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಚಪ್ಪಲಿ ಎಸೆದುದಕ್ಕಾಗಿ ಐವರು ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಜಮ್ಮುಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಉಗ್ರರ ಜೊತೆ ನಡೆದ ಎನ್‌ಕೌಂಟರ್‌ನಲ್ಲಿ  ವೀರಮರಣವನ್ನಪ್ಪಿದ ಸೇನಾ ಯೋಧ ರೈಫಲ್‌ಮ್ಯಾನ್ ಡಿ. ಲಕ್ಮಣನ್ ಅವರಿಗೆ ಪಾರ್ಥಿವ ಶರೀರಕ್ಕೆ ಅಂತಿಮ ಗೌರವ ಸಲ್ಲಿಸುವುದಕಕಾಗಿ ಸಚಿವ ಪಳನಿವೇಲು ಅವರು ಮದುರೈಗೆ ಆಗಮಿಸಿದ್ದಾಗ ಬಿಜೆಪಿ ಕಾರ್ಯಕರ್ತರ ಗುಂಪೊಂದು ಅವರ ಕಾರಿನ ಮೇಲೆ ಚಪ್ಪಲಿ ಎಸೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿಸಲ್ಪಟ್ಟ ಐವರು ಕೂಡಾ ಬಿಜೆಪಿ ಕಾರ್ಯಕರ್ತರಾಗಿದ್ದು, ತನಿಖೆ ನಡೆಯುತ್ತಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಡಿ.ಲಕ್ಷ್ಮಣನ್ ಅವರ ಪಾರ್ಥಿವ ಶರೀರಕ್ಕೆೆ ಅಂತಿಮ ಗೌರವ ಸಲ್ಲಿಸಲು ಆಗಮಿಸಲಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರನ್ನು ಸ್ವಾಗತಿಸಲು ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರ ಗುಂಪು, ಸಚಿವ ಪಳನಿವೇಲು ಅವರನ್ನು ಕಂಡಕೂಡಲೇ ಅವರ ವಿರುದ್ಧ ಘೋಷಣೆಗಳನ್ನು ಕೂಗಿತೆಂದು ವರದಿಯಾಗಿದೆ.

ಡಿ.ಲಕ್ಷ್ಮಣನ್ ಅವರಿಗೆ ಅಂತಿಮ ಗೌರವ ಸಲ್ಲಿಸಲು ನಿಗದಿಯಾದ ಸ್ಥಳವು ಬಿಜೆಪಿ ಕಾರ್ಯಕರ್ತರಿಂದ ತುಂಬಿ ತುಳುಕುತ್ತಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಕೂಡಾ ಅಗಲಿದ ಯೋಧನಿಗೆ ಶ್ರದ್ಧಾಂಜಲಿ ಸಲ್ಲಿಸಲು ಬಯಸಿದ್ದರು. ಆದರೆ ಇದರಿಂದ ಶಿಷ್ಟಾಚಾರದ ಉಲ್ಲಂಘನೆಯಾಗಬಹುದೆಂದು ಸಚಿವ ಪಳನಿವೇಲು ಹೇಳಿದ್ದರು.  ಜಿಲ್ಲಾಧಿಕಾರಿ ಸೇರಿದಂತೆ ಶಾಸನಾತ್ಮಕ ಅಧಿಕಾರವುಳ್ಳವರು ಮಾತ್ರವೇ  ಶ್ರದ್ಧಾಂಜಲಿ ಸಲ್ಲಿಸಬಹುದಾಗಿದೆಯೆಂದವರು  ತಿಳಿಸಿದ್ದರು.

ಆಗ ಪೊಲೀಸರು ಜನಜಂಗುಳಿಯನ್ನು ನಿಯಂತ್ರಿಸಲು ಯತ್ನಿಸುತ್ತಿದ್ದಂತೆಯೇ,  ಬಿಜೆಪಿ ಕಾರ್ಯಕರ್ತರನ್ನು  ಹೊರಹಾಕಲು ಸಚಿವರು ಬಯಸಿದ್ದಾರೆಂಬ ವದಂತಿಗಳು ಸ್ಥಳದಲ್ಲಿ ಹರಡಿದವು. ಈ ಸಂದರ್ಭದಲ್ಲಿ ಮಹಿಳೆಯೊಬ್ಬರು ತನ್ನ ಪಾದದಿಂದ ಸ್ಪಿಪ್ಪರ್ ತೆಗೆದು, ಅದನ್ನು ಸಚಿವರ ಕಾರಿನ ಮೇಲೆ ಎಸೆದಿರುವುದನ್ನು ತೋರಿಸುವ ವಿಡಿಯೋವನ್ನು ಎನ್‌ಡಿಟಿವಿ ಸುದ್ದಿಜಾಲತಾಣದಲ್ಲಿ ಪ್ರಸಾರವಾಗಿವೆ ಆ ಸ್ಲಿಪ್ಪರ್  ಕಾರಿನ ಮುಂಭಾಗದಲ್ಲಿ ಇರಿಸಲಾಗಿದ್ದ ರಾಷ್ಟ್ರಧ್ವಜ ಪಕ್ಕದಲ್ಲೇ ಇರುವ ವಿಂಡ್‌ಶೀಲ್ಡ್ ಮೇಲೆ ಬಂದು ಬಿದ್ದಿರುವುದು ಕೂಡಾ ವಿಡಿಯೋದಲ್ಲಿ ಕಂಡುಬಂದಿದೆ.

ಘಟನೆಯ ನಡೆದ ಬಳಿಕ ಅಣ್ಣಾಮಲೈ ಅವರಿಗೆ ಅಂತಿಮ ಗೌರವ ಸಲ್ಲಿಸಲು ಅವಕಾಶ ನೀಡಲಾಯಿತು.

‘‘ಕೇವಲ ಫೋಟೋ ತೆಗೆಸಿಕೊಳ್ಳುವ ಅವಕಾಶಕ್ಕಾಗಿ ಅಣ್ಣಾಮಲೈ ಅವರು ಸೇನಾ ಶಿಷ್ಟಾಚಾರಗಳನ್ನು ಉಲ್ಲಂಘಿಸಿದ್ದಾರೆ. ಮೃತ ಯೋಧನಿಗೆ ಅಂತಿಮ ಗೌರವವನ್ನು ಸೇನಾ ರೆಜಿಮೆಂಟ್ ಮಾತ್ರವೇ ಸಲ್ಲಿಸಬೇಕಾಗುತ್ತದೆ. ವೀರಯೋಧನ ಪಾರ್ಥಿವ ಶರೀರದ ಜೊತೆ ಫೋಟೋ ತೆಗೆಸಿಕೊಳ್ಳಲು ಅಣ್ಣಾಮಲೈ ಬಯಸಿದ್ದರು.  ಶ್ರದ್ಧಾಂಜಲಿ ಸಲ್ಲಿಕೆಯ ಛಾಯಾಚಿತ್ರವನ್ನು ಅವರು  ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅವರು ಮೃತ ಯೋಧನ ನಿವಾಸ ಅಥವಾ ಗ್ರಾಮದಲ್ಲಿ ಪಾರ್ಥಿವಶರೀರಕ್ಕೆ ಅಂತಿಮ ಗೌರವ ಸಲ್ಲಿಸಬಹುದಾಗಿತ್ತೇ ಹೊರತು ಸೇನಾ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅಲ್ಲ’’ ಎಂದು ಡಿಎಂಕೆ ಪದಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇತ್ತೀಚೆಗೆ ನಡೆದ ಜಿಎಸ್‌ಟಿ ಸಭೆಯಲಿ ಬ್ರಾಂಡೆಂಡ್ ಆಹಾರ ಉತ್ಪರನ್ನಗಳ ಮೇಲೆ ಜಿಎಸ್‌ಟಿ ಹೇರಿಕೆಯನ್ನು ಎಲ್ಲಾ ರಾಜ್ಯ ಒಪ್ಪಿಕೊಂಡಿವೆ ಎಂಬ ಹೇಳಿಕೆ ನೀಡಿರುವುಕ್ಕಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಆಡಳಿತರೂಢ ಡಿಎಂಕೆ ಪಕ್ಷದ  ಪ್ರಮುಖ ನಾಯಕರಲ್ಲೊಬ್ಬನಾದ  ಡಾ. ಪಳನಿವೇಲು ತಂಗರಾಜನ್  ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News