ಓ ಮೆಣಸೇ ...

Update: 2022-08-14 19:30 GMT

ರೈತನ ಮಗನನ್ನು ಉಪರಾಷ್ಟ್ರಪತಿ ಹುದ್ದೆಯಲ್ಲಿ ಕಾಣಲು ಹೆಮ್ಮೆಯಾಗುತ್ತಿದೆ - ನರೇಂದ್ರ ಮೋದಿ, ಪ್ರಧಾನಿ
ಚಹಾ ಮಾರುತ್ತಿದ್ದವರನ್ನು ಅಪ್ಪಾ ಎಂದು ಕರೆಯುವಂತೆ ರೈತ ಪುತ್ರನನ್ನು ನಿರ್ಬಂಧಿಸಬೇಡಿ.

ರಾಜ್ಯದಲ್ಲಿ ಡಿಕೆಶಿ ಮತ್ತು ನಾನು ಮಾತ್ರ ಈ.ಡಿ., ಎಸಿಬಿ ಕಣ್ಣಿಗೆ ಬೀಳುವುದು - ಝಮೀರ್ ಅಹ್ಮದ್, ಶಾಸಕ
ಬಿಜೆಪಿಯವರು ಈ.ಡಿ.ಯನ್ನು ಕಾಂಗ್ರೆಸ್‌ನ ಬಡ ನಾಯಕರ ಮೇಲೆ ಛೂ ಬಿಡುವುದಿಲ್ಲ.

ಪ್ರತೀ ಮನೆಯಲ್ಲಿಯೂ ದೇವರ ಪೂಜೆಯಷ್ಟೇ ಗೌರವದಿಂದ ಧ್ವಜಾರೋಹಣ ಮಾಡಬೇಕು -ಸುನೀಲ್ ಕುಮಾರ್, ಸಚಿವ
ಹಾಗೆಯೇ, ಐವತ್ತು ವರ್ಷ ರಾಷ್ಟ್ರ ಧ್ವಜವನ್ನು ಬಹಿಷ್ಕರಿಸಿದ ದ್ರೋಹಿಗಳನ್ನು ಇನ್ನಾದರೂ ಕ್ಷಮಿಸಬೇಕು.

ಡಿಕೆಶಿ ಮತ್ತು ಸಿದ್ದರಾಮಯ್ಯರದ್ದು ಧೃತರಾಷ್ಟ್ರ ಆಲಿಂಗನವಿದ್ದಂತೆ - ಆರ್.ಅಶೋಕ್, ಸಚಿವ
ಆಲಿಂಗನಕ್ಕೆ ಸಿದ್ಧತೆ ನಡೆಸುತ್ತಿದ್ದಾಗ ಈ ಆಲೋಚನೆ ಹೊಳೆಯಿತೇ?

ಯಾರು ಕಾಂಗ್ರೆಸ್‌ಗೆ ಹಿಂದೆ ಛೀಮಾರಿ ಹಾಕಿದ್ದರೋ ಅವರೆಲ್ಲ ಈಗ ಕಾಂಗ್ರೆಸ್‌ಗೆ ಜೈಕಾರ ಹಾಕುತ್ತಿದ್ದಾರೆ - ಈಶ್ವರಪ್ಪ, ಶಾಸಕ
ಈ ರೀತಿಯ ಏರುಪೇರಿನ ಅನುಭವ ನಮ್ಮ ರಾಷ್ಟ್ರ ಧ್ವಜಕ್ಕೂ ಇದೆ.

ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುತ್ತಿರುವುದರಿಂದಲೇ ಇತ್ತೀಚಿನ ದಿನಗಳಲ್ಲಿ ಸಂತ್ರಸ್ತರ ಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ - ಅಶೋಕ್ ಗೆಹ್ಲೋಟ್, ರಾಜಸ್ಥಾನ ಸಿಎಂ
ಅತ್ಯಾಚಾರಿಗಳನ್ನು ಸನ್ಮಾನಿಸಿ ಗೌರವ ಧನ ಕೊಡಲಾರಂಭಿಸಿದರೆ ಈ ಸಮಸ್ಯೆ ಬಗೆಹರಿದೀತೇ?

ಮುಖ್ಯಮಂತ್ರಿ ಬದಲಾವಣೆ ಇಲ್ಲ, ನಾನು ಮುಖ್ಯಮಂತ್ರಿ ಎಂಬುದು ಬರೀ ಗಾಳಿ ಸುದ್ದಿ - ಗೋವಿಂದ ಕಾರಜೋಳ, ಸಚಿವ
ಇದು, ಸ್ಪರ್ಧೆಯಲ್ಲಿ ನಾನಿದ್ದೇನೆ ಎಂದು ಘೋಷಿಸುವ ಇನ್ನೊಂದು ವಿಧಾನ ಅಲ್ಲ ತಾನೇ?

ಬಿಜೆಪಿಗೆ ತಾಕತ್ತಿದ್ದರೆ 'ಸಿದ್ದರಾಮಯ್ಯ -75'ಕ್ಕೆ ಸೇರಿದ ಅರ್ಧದಷ್ಟು ಜನರನ್ನು ಸೇರಿಸಿ ಸಮಾವೇಶ ಮಾಡಿ ತೋರಿಸಲಿ - ಎಂ.ಬಿ.ಪಾಟೀಲ್, ಮಾಜಿ ಸಚಿವ
ಸಂತೆ ಸೇರಿಸುವ ನಿಮ್ಮ ಸಾಮರ್ಥ್ಯದಿಂದ ಅವರಿಗೇನೂ ನಷ್ಟವಿಲ್ಲ. ತಾಕತ್ತಿದ್ದರೆ ಅವರು ಸಂಗ್ರಹಿಸುವ ಓಟನ್ನು ಕಿತ್ತು ತೋರಿಸಿ.

ಮುಖ್ಯಮಂತ್ರಿ, ಗೃಹ ಸಚಿವ ಹಾಗೂ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ -ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
ಹಾಗಾದರೆ ಹೇಗೆ? ನಾಳೆ ನೀವೇ ಮುಖ್ಯಮಂತ್ರಿ ಎಂದು ಮೇಲಿನವರು ಹಠಾತ್ತಾಗಿ ಘೋಷಿಸಿ ಬಿಟ್ಟರೆ ಹೃದಯಾಘಾತವಾದೀತಲ್ಲಾ !

ಪ್ರಸಕ್ತ ಸನ್ನಿವೇಶದಲ್ಲಿ ಸುಪ್ರೀಂ ಕೋರ್ಟ್ ಮೇಲೆ ನನಗೆ ವಿಶ್ವಾಸ ಹೊರಟು ಹೋಗಿದೆ - ಕಪಿಲ್ ಸಿಬಲ್, ರಾಜ್ಯಸಭೆ ಸದಸ್ಯ
ಸಂವೇದನಾ ಶೀಲರಿಗೆ ಎಂದೋ ಆದ ಜ್ಞಾನೋದಯ ನಿಮಗೆ ಈಗಷ್ಟೇ ಆಗಿದೆ.

ಕೇಂದ್ರದ ಸರ್ವಾಧಿಕಾರಿ ಸರಕಾರದ ವಿರುದ್ಧ ಕ್ವಿಟ್ ಇಂಡಿಯಾ ಮಾದರಿಯ ಚಳವಳಿಯೊಂದನ್ನು ನಡೆಸುವ ಅಗತ್ಯವಿದೆ - ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ
ಅದಕ್ಕಿಂತ ಮುನ್ನ ಭಾರತದಲ್ಲಿ ಒಂದು ವಿಶ್ವಾಸಾರ್ಹ ಪ್ರತಿಪಕ್ಷವನ್ನು ನಿರ್ಮಿಸುವ ಅಗತ್ಯವಿದೆ.

ರಿಲಯನ್ಸ್ ಸಮೂಹ ಕಂಪೆನಿಗಳ ಮೂಲಕ ಮುಕೇಶ್ ಅಂಬಾನಿ ಎರಡನೇ ವರ್ಷವೂ ವೇತನ ರಹಿತವಾಗಿ ದುಡಿದಿದ್ದಾರೆ -ಸುದ್ದಿ
ಇದು 'ಸಂಬಳ ಕೇಳಬೇಡಿ' ಎಂದು ತಮ್ಮದೇ ನೌಕರರಿಗೆ ಹೇಳಲು ಅವರು ಬಳಸಿರುವ ಜಾಣ ದಾರಿಯಾಗಿರಬಹುದು.

ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿನ ಮಕ್ಕಳಿಗೆ ಸ್ಪೋಕನ್ ಇಂಗ್ಲಿಷ್ ತರಗತಿ ಆರಂಭಿಸುವ ಉದ್ದೇಶವಿದೆ - ಬಿ.ಸಿ.ನಾಗೇಶ್, ಸಚಿವ
ಅದಕ್ಕಿಂತ ಮುನ್ನ, ನಿಮ್ಮ ಪಕ್ಷದ ನಾಯಕರಿಗೆ, ಸಭ್ಯ ಭಾಷೆ ಮಾತನಾಡಲು ಕಲಿಸಬಲ್ಲ ಶಾಲೆಗಳನ್ನು ತೆರೆಯಿರಿ.

ಕಾಂಗ್ರೆಸ್‌ನವರು ತಮ್ಮೆಳಗಿನ ಒಳಜಗಳ ಮುಚ್ಚಿಹಾಕಲು ಉತ್ಸವ, ಪಾದಯಾತ್ರೆ ಮಾಡುತ್ತಿದ್ದಾರೆ - ನಳಿನ್ ಕುಮಾರ್ ಕಟೀಲು, ಸಂಸದ
ನಿಮ್ಮ ಉತ್ಸವ ಪಾದಯಾತ್ರೆಗಳೆಲ್ಲಾ ನಿಮ್ಮ ಪಕ್ಷದೊಳಗಿನ ಜಗಳಗಳನ್ನು ಬಯಲಿಗೆಳೆಯುವುದಕ್ಕೆ ನಡೆದಿದ್ದವೇ ?

ರಾಷ್ಟ್ರಧ್ವಜಕ್ಕೆ ಪಾಲಿಸ್ಟರ್ ಬಟ್ಟೆ ಬಳಕೆ ಸ್ವಾತಂತ್ರ ಚಳವಳಿಗೆ ಮಾಡಿದ ಅವಮಾನ - ಯು.ಟಿ.ಖಾದರ್, ಮಾಜಿ ಸಚಿವ
ರಾಷ್ಟ್ರ ಧ್ವಜವು ಭ್ರಷ್ಟ ಫುಡಾರಿಗಳ ಕೈಯಲ್ಲಿ ನರಳುತ್ತಿರುವುದು ಇನ್ನಷ್ಟು ದೊಡ್ಡ ಅಪಮಾನ.

ಯುವ ಪೀಳಿಗೆ ಮನಸ್ಸು ಮಾಡಿದರೆ ಈ ದೇಶಕ್ಕೆ ಉತ್ತಮ ಪರ್ಯಾಯ ರಾಜಕೀಯ ಶಕ್ತಿ ನೀಡಬಹುದು - ಎಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ
ಮೊಮ್ಮಕ್ಕಳನ್ನು ರಾಜಕೀಯ ಕೊಂಪೆಗೆ ಇಳಿಸುವ ಸಿದ್ಧತೆಯೇ?

ಭಾರತದಲ್ಲಿ ಹಿಂದೂ ಮತ್ತು ಮುಸ್ಲಿಮರು ಒಟ್ಟಿಗೆ ಬದುಕುವುದಕ್ಕೆ ಸಾಧ್ಯವಿಲ್ಲ ಎನ್ನುವವರು ಮುಹಮ್ಮದ್ ಅಲಿ ಜಿನ್ನಾರನ್ನು ಬೆಂಬಲಿಸುತ್ತಾರೆ - ರಾಮ ಮಾಧವ್, ಆರೆಸ್ಸೆಸ್ ನಾಯಕ
ಕೊನೆಗೂ ತಪ್ಪೊಪ್ಪಿಗೆ?

ಕಾರ್ಯಕರ್ತರ ರಾಜೀನಾಮೆಯಿಂದ ಬಿಜೆಪಿಗೆ ಯಾವುದೇ ನಷ್ಟ ಆಗಿಲ್ಲ - ಉಮೇಶ್ ಕತ್ತಿ, ಸಚಿವ
ಪಾಪ, ಪಕ್ಷದಲ್ಲಿ ಅವರಿಗೇನಾದರೂ ಬೆಲೆ ಇದ್ದರೆ ತಾನೇ ಅವರ ಆಗಮನ ಅಥವಾ ನಿರ್ಗಮನದಿಂದ ಏನಾದರೂ ಲಾಭ - ನಷ್ಟವಾಗುವುದು?

ನಿತೀಶ್ ಕುಮಾರ್ ನಮ್ಮ ಬೆನ್ನಿಗೆ ಚೂರಿ ಹಾಕಿದ್ದಾರೆ - ರವಿಶಂಕರ್ ಪ್ರಸಾದ್, ಬಿಜೆಪಿ ನಾಯಕ
ಮಹಾರಾಷ್ಟ್ರದಲ್ಲಿ ಠಾಕ್ರೆ ಬಳಗದ ಯಾವ ಭಾಗಕ್ಕೆ ಚೂರಿ ಹಾಕಲಾಗಿತ್ತು?

ನಮ್ಮದು ಎಲ್ಲರನ್ನೂ ಒಳಗೊಂಡ ಸರಕಾರ - ಏಕನಾಥ್ ಶಿಂದೆೆ, ಮಹಾರಾಷ್ಟ್ರ ಸಿಎಂ
ಹೌದು ಎಲ್ಲರ ವಿಭಿನ್ನ ತರದ ಕ್ರಿಮಿನಲ್ ದಾಖಲೆಗಳನ್ನು ನೋಡಿದರೆ ಅದು ಸ್ಪಷ್ಟವಾಗಿ ಬಿಡುತ್ತದೆ.

ಜೀವನೋಪಾಯ ಇಲಾಖೆಗೆ ಮುಖ್ಯಮಂತ್ರಿ ಬಜೆಟ್‌ನಲ್ಲಿ 1200 ಕೋಟಿ ರೂ. ನೀಡುವ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ - ಡಾ.ಸಿ.ಎನ್.ಅಶ್ವತ್ಥನಾರಾಯಣ, ಸಚಿವ
ರಾಜಕಾರಣಿಗಳ ಜೀವನೋಪಾಯಕ್ಕಾಗಿ ಇದರಲ್ಲಿ ಶೇ. 40 ಕಮಿಷನ್ ಕೂಡ ಮೀಸಲಿರಿಸಲಾಗಿದೆಯೇ?

ಮನುಸ್ಮತಿ ಭಾರತೀಯ ಮಹಿಳೆಯರಿಗೆ ಗೌರವಾನ್ವಿತ ಸ್ಥಾನವನ್ನು ನೀಡಿದೆ - ಪ್ರತಿಭಾಸಿಂಗ್, ದಿಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ
ನಿಮ್ಮನ್ನು ನ್ಯಾಯಮೂರ್ತಿ ಮಾಡಿದ ಸಂವಿಧಾನ ಮಹಿಳೆಯರಲ್ಲಿ ಕ್ಷಮೆ ಯಾಚಿಸಬೇಕೇ?

ಬಿಜೆಪಿಗೆ ನನ್ನನ್ನು ಕಂಡರೆ ಭಯ - ಸಿದ್ದರಾಮಯ್ಯ, ಮಾಜಿ ಸಿಎಂ
ಎಲ್ಲಿ ಬಿಜೆಪಿಗೆ ಪಕ್ಷಾಂತರ ಮಾಡಿ ಬಿಡುತ್ತಾರೋ ಎಂಬ ಭಯ ಇರಬೇಕು.

ಎಚ್.ಡಿ.ಕುಮಾರಸ್ವಾಮಿ, ಯಡಿಯೂರಪ್ಪ, ನರೇಂದ್ರ ಮೋದಿ ಎಲ್ಲರೂ ಅಧಿಕಾರಕ್ಕೆ ಬಂದದ್ದು ಕಾಂಗ್ರೆಸ್‌ನ ಸ್ವಾತಂತ್ರ ಹೋರಾಟದಿಂದ -ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಈ ಕಾರಣಕ್ಕಾಗಿ ಕಾಂಗ್ರೆಸ್ ದೇಶದ ಕ್ಷಮೆ ಯಾಚಿಸಬೇಕು.

ಮುಂಗಾರು ಅಧಿವೇಶನದ ಕಲಾಪ ಸರಿಯಾಗಿ ನಡೆಯಲು ವಿರೋಧ ಪಕ್ಷಗಳು ಅವಕಾಶ ನೀಡಲಿಲ್ಲ -ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
ಕೈಲಾಗದವರ ಪ್ರಲಾಪ.

ಬಿಹಾರದ ಸಿಎಂ ನಿತೀಶ್ ಕುಮಾರ್ ಒಮ್ಮೆ ಒಬ್ಬರ ಜೊತೆ, ಮತ್ತೊಮ್ಮೆ ಇನ್ನೊಬ್ಬರ ಜೊತೆ ಹೋಗುವುದು ಎಷ್ಟು ಸರಿ? - ಚಿರಾಗ್ ಪಾಸ್ವಾನ್, ಎಲ್‌ಜೆಪಿ ಮುಖಂಡ
ಅದೆಲ್ಲ ನಿಮ್ಮ ಪಿತಾಶ್ರೀಯಿಂದ ಕಲಿತಿರುವುದಂತೆ.

ದಲಿತರಿಗೆ ಪ್ರತ್ಯೇಕ ಮುಖ್ಯಮಂತ್ರಿ ಸ್ಥಾನ ಎಂಬುದಿಲ್ಲ - ಗೋವಿಂದ ಕಾರಜೋಳ, ಸಚಿವ
ಉಳಿದ ಕಡೆ ಎಲ್ಲ ಪ್ರತ್ಯೇಕ ಪಂಕ್ತಿ ಇರುವಾಗ ಇಲ್ಲಿ ಯಾಕೆ ಇರಬಾರದು?

Writer - ಪಿ.ಎ. ರೈ

contributor

Editor - ಪಿ.ಎ. ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ…
ಓ ಮೆಣಸೇ
ಓ ಮೆಣಸೇ...!
ಓ ಮೆಣಸೇ...
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...