ಅಧಿಕಾರಿಗಳು ಫೋನ್ ಕರೆ ಸ್ವೀಕರಿಸುವಾಗ ‘ಹಲೋ’ ಬದಲಿಗೆ ‘ವಂದೇ ಮಾತರಂ’ ಎನ್ನಬೇಕು: ಸಚಿವರ ಆದೇಶ
ಮುಂಬೈ: ಮಹಾರಾಷ್ಟ್ರದ ಸರಕಾರಿ ಅಧಿಕಾರಿಗಳು ಈಗ ತಮ್ಮ ಕಚೇರಿಗಳಲ್ಲಿ ಫೋನ್ ಕರೆಗಳನ್ನು ಸ್ವೀಕರಿಸುವಾಗ "ಹಲೋ" ಬದಲಿಗೆ "ವಂದೇ ಮಾತರಂ" ಎಂದು ಹೇಳಬೇಕಾಗುತ್ತದೆ ಎಂದು ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸುಧೀರ್ ಮುಂಗಂಟಿವಾರ್ ರವಿವಾರ ಆದೇಶಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಆಗಸ್ಟ್ 18 ರೊಳಗೆ ಈ ಬಗ್ಗೆ ಅಧಿಕೃತ ಆದೇಶವನ್ನು ಹೊರಡಿಸಲಾಗುವುದು ಎಂದು ಏಕನಾಥ್ ಶಿಂಧೆ ನೇತೃತ್ವದ ರಾಜ್ಯ ಸಚಿವ ಸಂಪುಟದಲ್ಲಿ ರವಿವಾರ ಸಚಿವರಿಗೆ ಖಾತೆಗಳನ್ನು ಘೋಷಿಸಿದ ತಕ್ಷಣ ಸಚಿವ ಮುಂಗಂಟಿವಾರ್ ಹೇಳಿದರು.
"ಹಲೋ ಒಂದು ಇಂಗ್ಲಿಷ್ ಪದ ಹಾಗೂ ಅದನ್ನು ಬಿಟ್ಟುಕೊಡುವುದು ಮುಖ್ಯವಾಗಿದೆ. ವಂದೇ ಮಾತರಂ ಕೇವಲ ಪದವಲ್ಲ, ಅದು ಪ್ರತಿಯೊಬ್ಬ ಭಾರತೀಯನ ಅನುಭವದ ಭಾವನೆ...ನಾವು ಸ್ವಾತಂತ್ರ್ಯದ 76ನೇ ವರ್ಷಕ್ಕೆ ಕಾಲಿಡುತ್ತಿದ್ದೇವೆ. ನಾವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದೇವೆ. ಆದ್ದರಿಂದ ಅಧಿಕಾರಿಗಳು ಹಲೋ ಬದಲು ಫೋನ್ ಮೂಲಕ 'ವಂದೇ ಮಾತರಂ' ಹೇಳಬೇಕೆಂದು ನಾನು ಬಯಸುತ್ತೇನೆ ಎಂದು ಮುಂಗಂಟಿವಾರ್ NDTV ಗೆ ತಿಳಿಸಿದ್ದಾರೆ.