ಕ್ರೀಡಾಪಟುಗಳಿಗೆ ನೌಕರಿಯಲ್ಲಿ ಮೀಸಲಾತಿ; ಎಲ್ಲಾ ಇಲಾಖೆಗಳಿಗೂ ವಿಸ್ತರಣೆ: ಸಿಎಂ ಬಸವರಾಜ ಬೊಮ್ಮಾಯಿ

Update: 2022-08-16 08:55 GMT

ಬೆಂಗಳೂರು, ಆ. 16 : ಸರ್ಕಾರ ಈಗಾಗಲೇ ಕ್ರೀಡಾಪಟುಗಳಿಗೆ ಶೇ 2 ರಷ್ಟು  ಮೀಸಲಾತಿಯನ್ನು ಪೋಲೀಸ್ ಮತ್ತು ಅರಣ್ಯ ಇಲಾಖೆಗಳಲ್ಲಿ  ಮೀಸಲಿಟ್ಟಿದ್ದೇವೆ. ಮೀಸಲಾತಿಯನ್ನು  ಇತರೆ ಇಲಾಖೆಗಳಿಗೂ ವಿಸ್ತರಣೆ ಮಾಡುವ ಕಡತವನ್ನು  ಅನುಮೋದಿಸಲಾಗುವುದು ಎಂದು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 

ಅವರು ಇಂದು ಬರ್ಮಿಂಗ್ ಹ್ಯಾಂ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾಗವಹಿಸಿ ಪದಕ ಪಡೆದ ಕರ್ನಾಟಕದ ಕ್ರೀಡಾಪಟುಗಳಿಗೆ ಹಾಗೂ ಅಮೃತ ಕ್ರೀಡಾ ದತ್ತು ಯೋಜನೆಯಡಿಯಲ್ಲಿ ಆಯ್ಕೆಯಾಗಿರವ 75 ಕ್ರೀಡಾ ಪಟುಗಳಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಕ್ರೀಡಾಪಟುಗಳ ಜೀವನಕ್ಕೆ ಭದ್ರತೆ ಬೇಕು ಎನ್ನುವುದನ್ನು ಸರ್ಕಾರ ಮನಗಂಡಿದೆ. ಮನಸ್ಸಿನಲ್ಲಿ ಕ್ರೀಡೆಯನ್ನು ನನಗೋಸ್ಕರ ಹಾಗೂ ದೇಶಕ್ಕಾಗಿ ಪದಕ ಗೆಲ್ಲಲು ಆಡುತ್ತಿದ್ದೇನೆ ಎನ್ನುವುದನ್ನು ಮಾತ್ರ ಕ್ರೀಡಾಪಟುಗಳು  ಮರೆಯಬಾರದು. ಮಿಕ್ಕಿದ್ದನ್ನು  ಸರ್ಕಾರಕ್ಕೆ ಬಿಡಿ. ನಿಮ್ಮ  ಸಾಧನೆಗಳಿಗೆ ತಕ್ಕಂತೆ   ಉತ್ಸಾಹದಿಂದ ಕೆಲಸ ಮಾಡುತ್ತಿದ್ದೇವೆ ಎಂದರು.

ಬ್ಯಾಸ್ಕೆಟ್ ಬಾಲ್ ರಾಜ್ಯದ ಕ್ರೀಡೆ

ಕ್ರೀಡಾ ದತ್ತು ಯೋಜನೆ ಜಾರಿಯಲ್ಲಿರುವ ಮೊಟ್ಟ ಮೊದಲ ರಾಜ್ಯ ಕರ್ನಾಟಕ.  ಕ್ರೀಡಾಂಗಣಗ:ಳ ಅಭಿವೃದ್ಧಿಯನ್ನೂ ಮಾಡಲಾಗುತ್ತಿದೆ.  ಬ್ಯಾಸ್ಕೆಟ್ ಬಾಲ್ ರಾಜ್ಯದ ಕ್ರೀಡೆ ಎಂದು  ಅಳವಡಿಸಿಕೊಳ್ಳುತ್ತಿದ್ದೇವೆ.  ಪ್ರತಿಭೆಗಳನ್ನು ಗುರುತಿಸುವ ಸಲುವಾಗಿ ಎರಡು ತಿಂಗಳೊಳಗೆ ಗ್ರಾಮೀಣ ಕ್ರೀಡಾಕೂಟವನ್ನು ಪ್ರಾರಂಭಿಸಲಾಗುತ್ತದೆ.  ನಮ್ಮ ಸರ್ಕಾರ ಕ್ರೀಡೆ ಹಾಗೂ ಕ್ರೀಡಾಪಟುಗಳ ಕಲ್ಯಾಣಕ್ಕೆ ಆದ್ಯತೆಯನ್ನು ನೀಡಿದೆ. ಯಾವುದನ್ನೂ ಚಿಂತೆ ಮಾಡದೆ ಧೈರ್ಯವಾಗಿ ಆಡಿ ಬನ್ನಿ. ಸರ್ಕಾರ ನಿಮ್ಮ ಜೊತೆ ಇದೆ ಎಲ್ಲಾ ದೃಷಿಯಿಂದ ನಿಮ್ಮ ಸುರಕ್ಷತೆಯನ್ನು ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಗೆಲ್ಲಬೇಕೆಂದು ಆಟವಾಡಿ: ಕ್ರೀಡಾ ಮನೋಭಾವ ಬಹಳ ಮುಖ್ಯ. ಕ್ರೀಡಾ ಮನೋಭಾವದಿಂದ ಶಿಸ್ತು ಸಂಯಮ ಹಾಗೂ ಹೆಚ್ಚು ಸಾಧಿಸುವ ಶಕ್ತಿ ಬರುತ್ತದೆ. ಶಿಸ್ತು ಚಾರಿತ್ರ್ಯ ಬೆಳೆಯುತ್ತದೆ. ಸರಿಯಾದುದ್ದನ್ನು ಯೋಚಿಸುವ ಶಕ್ತಿ ನೀಡುತ್ತದೆ. ಪ್ರಾಮಾಣಿಕ ಹಾಗೂ ಸಮರ್ಪಣಾ ಭಾವದ ಕ್ರೀಡಾಪಟುವಿಗೆ ಸದ್ಚಾರಿತ್ರ್ಯವಿರುತ್ತದೆ. ಆಗ ಜೀವನದಲ್ಲಿ ಸಾಧನೆಗಳನ್ನು ಮಾಡಬಹುದಾಗಿದೆ.. ಗೆಲ್ಲಬೇಕೆಂದು ಆಡಬೇಕು. ಸೋಲಬಾರದು ಎಂದು ಆಡಬಾರದು. ಗೆಲುವನ್ನೇ ಗುರಿಯಾಗಿಸಿಕೊಂಡಿರಬೇಕು ಎಂದರು.

''ರಾಜ್ಯದ ಕ್ರೀಡಾಪಟುಗಳ  ಮೇಲೆ  ಸಂಪೂರ್ಣ ವಿಶ್ವಾಸ''

ರಾಜ್ಯದಲ್ಲಿ ಬೇರೆ ಬೇರೆ  ಕ್ಷೇತ್ರಗಳಲ್ಲಿ ಹಲವಾರು ಕ್ರೀಡಾಪಟುಗಳಿದ್ದಾರೆ, ಒಲಂಪಿಯನ್ಸ್ ಇದ್ದಾರೆ, ಏಶಿಯ್ ಗೇಮ್ಸ್, ಕಾಮನ್ ವೆಲ್ತ್ ಗೇಮ್ಸ್ ನಲ್ಲಿದ್ದಾರೆ, ಈಜುಗಾರರಿದ್ದಾರೆ, ಬ್ಯಾಸ್ಕೆಟ್ ಬಾಲ್, ಹಾಕಿ ಮುಂತಾದ ಎಲ್ಲಾ ಕ್ರೀಡೆಗಳಲ್ಲಿದ್ದಾರೆ. ಅವರೆಲ್ಲರ  ಸಾಧನೆ ನಮಗೆಲ್ಲರಿಗೂ ಸ್ಪೂರ್ತಿ, ನಿಮ್ಮ ಸಾಧನೆಗೂ ಸ್ಪೂರ್ತಿ. ಪದಕ  ಪಡೆದಿರುವವರು ಇತರರಿಗೆ ಪದಕ ಗೆಲ್ಲಲು ಸ್ಪೂರ್ತಿಯಾಗಬೇಕು. ಯಾರು ಭಾಗವಹಿಸಿದ್ದಾರೆ ಅವರು  ತರಬೇತಿ ಪಡೆಯುತ್ತಿರುವವರಿಗೆ ಸ್ಪೂರ್ತಿಯಾಗಬೇಕೆಂಬ ಉದ್ದೇಶ ಈ ಸಂದರ್ಭದಲ್ಲಿ ಕ್ರೀಡಾಪಟುಗಳನ್ನು ಕರೆಸಿ ಬೆಂಬಲಿಸುತ್ತಿದ್ದೇವೆ. ನಮ್ಮ ರಾಜ್ಯದ ಕ್ರೀಡಾಪಟುಗಳ  ಮೇಲೆ  ದೃಢ ವಿಶ್ವಾಸ ಹಾಗೂ  ಅವರ ಸಾಮಥ್ರ್ಯದ ಬಗ್ಗೆ ಸಂಪೂರ್ಣ ವಿಶ್ವಾಸವಿದೆ. ಅದಕ್ಕೆ ಸ್ವಲ್ಪ ಪ್ರೋತ್ಸಾಹ ನೀಡಿದರೆ ಫಲಿತಾಂಶ ಬರುವ ವಿಶ್ವಾಸದೊಂದಿಗೆ 75 ಜನರ ಕ್ರೀಡಾ ದತ್ತು ಯೋಜನೆಯನ್ನು  ರೂಪಿಸಲಾಯಿತು.  ಸರ್ಕಾರ ಏನು ಮಾಡಬೇಕೆಂದು ಹೇಳುವ ಮುನ್ನ ನೀವೇನು ಮಾಡಬೇಕೆಂದು ಮೊದಲು ತೀರ್ಮಾನ ಮಾಡಿ. ಸರ್ಕಾರ ನಮಗಿಷ್ಟು ಸೌಲಭ್ಯಗಳನ್ನು ಕೊಟ್ಟಿದೆ. ಇದಕ್ಕೂ ಮುನ್ನ ಯಾವುದೇ ಯೋಜನೆಯೂ ಇರಲಿಲ್ಲ. ನೀವು ಸಾಧನೆಯನ್ನು ಮಾಡಬೇಕೆಂದು ನಾವು ನಿಮ್ಮ  ಪ್ರತಿಭೆಯನ್ನು ಗುರುತಿಸಿದ್ದೇವೆ ಎಂದರು.

ದೇಶಕ್ಕಾಗಿ ಆಡಿ, ಪದಕವನ್ನು ಗೆಲ್ಲಿ

ನೌಕರಿಗಾಗಿ  ಕ್ರೀಡೆಯನ್ನು ಆಡುವುದಲ್ಲ. ದೇಶಕ್ಕಾಗಿ ಆಡಿ, ಪದಕವನ್ನು ಗೆಲ್ಲಬೇಕು. ಪ್ರಧಾನ ಮಂತ್ರಿಗಳು ಖೇಲೋ ಇಂಡಿಯಾ ಎಂದಿದ್ದಾರೆ. ಮೊದಲು ಆಟವಾಡುವುದನ್ನು ಕಲಿಯಿರಿ ಆಮೇಲೆ ಜೀತೋ ಇಂಡಿಯಾ ಎಂದರು. ಇದನ್ನು ನೆನಪಿಟ್ಟುಕೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಕಿವಿಮಾತು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News