ಆರೆಸ್ಸೆಸ್ ಸಂಘಟನೆಗಳಿಗೆ ತೊಂದರೆ ಆಗದಂತೆ ಪೊಲೀಸರ ಕೈ ಕಟ್ಟಿ ಹಾಕಲಾಗಿದೆ: ರಾಮಲಿಂಗಾ ರೆಡ್ಡಿ

Update: 2022-08-16 17:42 GMT

ಬೆಂಗಳೂರು, ಆ.16: ಕಾನೂನು ಸುವ್ಯವಸ್ಥೆ ಕಾಪಾಡಲು ನಮ್ಮಲ್ಲಿ ಉತ್ತಮ, ದಕ್ಷ ಅಧಿಕಾರಿಗಳಿದ್ದಾರೆ. ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿ ಕೋಮುಗಲಭೆ ನಿಯಂತ್ರಿಸಲು ಹೇಳಿದರೆ ಅವರು ನಿಭಾಯಿಸುತ್ತಾರೆ. ಆದರೆ ಬಿಜೆಪಿ ಸರಕಾರ ತಮ್ಮ ಸಂಘಪರಿವಾರದ ಸಂಘಟನೆಗಳಿಗೆ ಯಾವುದೇ ತೊಂದರೆ ಆಗದಂತೆ ಪೊಲೀಸರ ಕೈ ಕಟ್ಟಿ ಹಾಕಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದರು.

ಮಂಗಳವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೀಗಾಗಿ ನೈತಿಕ ಪೊಲೀಸ್‍ಗಿರಿಗೆ ಪ್ರೋತ್ಸಾಹ ನೀಡುತ್ತಾರೆ. ಹಿಜಾಬ್, ಹಲಾಲ್ ಕಟ್ ಸೇರಿದಂತೆ ಅನೇಕ ವಿಚಾರವಾಗಿ ಈ ಸಂಘಟನೆಗಳು ಸಾಕಷ್ಟು ಗೊಂದಲ ಸೃಷ್ಟಿಸಿದರು ಸರಕಾರ ಇವರನ್ನು ನಿಯಂತ್ರಿಸುವ ಕೆಲಸ ಮಾಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಯಾರೇ ಆದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸಮಾಜದಲ್ಲಿ ಶಾಂತಿಗೆ ಭಂಗ ತರುವ ಹೇಳಿಕೆ ನೀಡುತ್ತಿದ್ದರೆ ಕಾನೂನು ಸುವ್ಯವಸ್ಥೆ ನಾಶವಾಗುತ್ತದೆ. ಇದರಿಂದ ರಾಜ್ಯಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.

ಬಿಜೆಪಿ ವಿರೋಧ ಪಕ್ಷದಲ್ಲಿ ಇದ್ದಾಗ ಎಸ್‍ಡಿಪಿಐ ನಿಷೇಧ ಆಗಬೇಕು ಎಂದು ಹೇಳುತ್ತಿದ್ದರು, ಈಗ ಅವರದೇ ಸರಕಾರ ಇದ್ದರೂ ನಿμÉೀಧ ಮಾಡುತ್ತಿಲ್ಲ. ಎಸ್‍ಡಿಪಿಐ ಮೂಲಕ ಕಾಂಗ್ರೆಸ್ ಮತ ವಿಭಜನೆ ಮಾಡಬಹುದು ಎಂಬ ಕಾರಣಕ್ಕೆ ಬಿಜೆಪಿಯವರೇ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ದೂರಿದರು.

ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಯಾವುದೇ ಸಂಘಟನೆ ಇದ್ದರೂ ಅವುಗಳನ್ನು ನಿಷೇಧಿಸಲಿ. ಸರಕಾರ ಈ ಸಂಘಟನೆಗಳನ್ನು ನಿಯಂತ್ರಣದಲ್ಲೂ ಇಟ್ಟುಕೊಳ್ಳುತ್ತಿಲ್ಲ, ನಿಷೇಧಿಸುತ್ತಲೂ ಇಲ್ಲ. ಈ ಎಲ್ಲ ಸಂಘರ್ಷಕ್ಕೆ ಈ ಸಂಘಟನೆಗಳು ಎಷ್ಟು ಕಾರಣವಾಗಿವೆಯೋ, ಅಷ್ಟೇ ಆರೆಸೆಸ್ಸ್, ಸಂಘಪರಿವಾರದ ಸಂಘಟನೆಗಳೂ ಕಾರಣ. ಈ ವಿಚಾರವಾಗಿ ವಿಚಾರವಾಗಿ ನಾನು ಪುಸ್ತಕವನ್ನೇ ಬಿಡುಗಡೆ ಮಾಡಿ, ಸ್ಪಷ್ಟವಾಗಿ ಉಲ್ಲೇಖ ಮಾಡಿದ್ದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News