ಹುಲಿಹೈದರ್‌‌ ಗ್ರಾಮದ ಗಲಭೆ ಖಂಡಿಸಿ ಸಿಪಿಐ(ಎಂಎಲ್‌) ಪ್ರತಿಭಟನೆ

Update: 2022-08-17 18:06 GMT

ಬೆಂಗಳೂರು, ಆ.17: ಕೊಪ್ಪಳಜಿಲ್ಲೆ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ನಡೆದಿರುವ ಗಲಭೆ ಪ್ರಕರಣದಲ್ಲಿ ಸಣ್ಣಹನುಮಂತಪ್ಪ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ಭಾರತ ಕಮ್ಯೂನಿಷ್ಟ್ ಪಕ್ಷ (ಮಾರ್ಕ್ಸ್ ವಾದಿ-ಲೆನಿನ್ ವಾದಿ ) ಲಿಬರೇಷನ್, ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನ ಸೇರಿದಂತೆ ಮೈಸೂರು, ಕನಕಗಿರಿ, ಹರಪನಹಳ್ಳಿ, ಕೋಲಾರ, ಸಿಂಧನೂರು, ಗಂಗಾವತಿಯಲ್ಲಿ ಬೃಹತ್‌ ಪ್ರತಿಭಟನೆ ನಡೆಸಿತು. 

ಮೈಸೂರು ನಗರದ ಜಿಲ್ಲಾಧಿಕಾರಿಗಳ ಕಛೇರಿ ಬಳಿ ಬುಧವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ, ಸಣ್ಣ ಹನುಮಂತ ಮತ್ತು ಇತರರ ವಿರುದ್ಧ ದಾಖಲಿಸಿರುವ ಸುಳ್ಳು ಪ್ರಕರಣಗಳನ್ನು ಹಿಂಪಡೆಯಬೇಕು. ಮತ್ತು ಅವರ ಮೇಲಿರುವ ಆರೋಪಗಳನ್ನು ಕೈಬಿಡಬೇಕು. ಇಡೀ ಗಲಭೆ ಪ್ರಕರಣಕ್ಕೆ ಕಾರಣ ಕರ್ತರಾದ ಹನುಮೇಶ್ ನಾಯಕ ಮತ್ತು ರಮೇಶ್ ನಾಯಕರನ್ನು ತಕ್ಷಣವೇ ಬಂಧಿಸಿ ಸೂಕ್ತ ತನಿಖೆ ನಡೆಸಬೇಕು. ಹುಲಿ ಹೈದರ್ ಗ್ರಾಮದಲ್ಲಿ ಶಾಂತಿ, ನ್ಯಾಯ ಮತ್ತು ಸಾಮರಸ್ಯವನ್ನು ಖಚಿತಪಡಿಸಲು ಅಗತ್ಯ ಕ್ರಮವನ್ನು ವಹಿಸಬೇಕೆಂದು ಒತ್ತಾಯಿಸಿದರು.

ಜಿಲ್ಲಾದಿಕಾರಿಗಳ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಚೌಡಹಳ್ಳಿ ಜವರಯ್ಯ, ಸುಬ್ರಮಣಿ, ನಾ.ದಿವಾಕರ, ಜಯರಾಂ, ಸಾಹಿತಿ ರತಿರಾವ್, ಪಿ.ಎ.ಕುಮಾರ, ಗಂಗಾಧರ, ರವಿಕುಮಾರ ಸೇರಿದಂತೆ ಹಲವರು ಭಾಗವಹಿಸಿದ್ದರು. 

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಇಂದು ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ರಾಜ್ಯ ಕಾರ್ಯದರ್ಶಿ ಕ್ಲಿಪ್ಪನ್ ಡಿ ರೋಜಾರಿಯೋ ರವರು, 'ದಲಿತರು, ಕಾರ್ಮಿಕರು ಮತ್ತು ಶೋಷಿತ ಸಮುದಾಯಗಳ ಹಕ್ಕುಗಳ ಪರವಾಗಿ ಹೋರಾಟ ಮಾಡುತ್ತಿದ್ದಂತಹ ಸಣ್ಣಹನುಮಂತಪ್ಪರವನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿದ್ದು, ರಾಜಕೀಯವಾಗಿ ಒಳಸಂಚು ರೂಪಿಸಲಾಗಿದೆ. ಸಣ್ಣ ಹನುಮಂತರವರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಮತ್ತು ಗಲಭೆಗೆ ಕಾರಣಕರ್ತರಾದ ನಿಜವಾದ ಆರೋಪಿಗಳನ್ನು ಬಂಧಿಸಬೇಕು' ಒತ್ತಾಯಿಸಿದರು.

► ಪ್ರತಿಭಟನೆಯ ಭಾಗವಾಗಿ ನಮ್ಮ ಪಕ್ಷದ ವತಿಯಿಂದ ಈ ಕೆಳಕಂಡ ಹಕ್ಕೊತ್ತಾಯಗಳೊಂದಿಗೆ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರಿಗೆ ಮನವಿಯನ್ನು ನೀಡಲಾಗಿದೆ.

1. ಶ್ರೀ ಸಣ್ಣಹನುಮಂತ ಮತ್ತು ಇತರರ ವಿರುದ್ಧ ದಾಖಲಿಸಿರುವ ಸುಳ್ಳು ಪ್ರಕರಣವನ್ನು ಹಿಂಪಡೆಯಬೇಕು ಮತ್ತು ಅವರ ಮೇಲಿರುವ ಆರೋಪಗಳನ್ನು ಕೈಬಿಡಬೇಕು.

2. ಇರ್ಡಿ ಗಲಭೆ ಪ್ರಕರಣಕ್ಕೆ ಕಾರಣ ಕರ್ತರಾದ ಹನುಮೇಶ್ ನಾಯಕ ಮತ್ತು ರಮೇಶ ನಾಯಕರನ್ನು ತಕ್ಷಣವೇ ಬಂಧಿಸಿ ಸೂಕ್ತ ತನಿಖೆ ನಡೆಸಬೇಕು.

3. ಹುಲಿಹೈದರ್ ಗ್ರಾಮದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಖಚಿತಪಡಿಸಲು ಶಾಂತಿ ಸಭೆಯನ್ನು ಕರೆಯ ಬೇಕು.

4. ಗಲಭೆ ಪ್ರಕರಣದಲ್ಲಿ ಕೊಲೆಗೀಡಾದ ಕುಟುಂಬಗಳಿಗೆ ತಲಾ 50 ಲಕ್ಷ ಪರಿಹಾರ ಮತ್ತು ಒಬ್ಬರಿಗೆ ಸರ್ಕಾರಿ ಉದ್ಯೋಗವನ್ನು ನೀಡಬೇಕು.

5. ಈ ಪ್ರಕರಣದ ತನಿಖೆಯನ್ನು ನ್ಯಾಯಾಂಗದ ಮೇಲ್ವಿಚಾರಣೆಯಲ್ಲಿ ನಡೆಸಬೇಕು.

6. ಮುಂದೆ ಇಂತಹ ಪ್ರಕರಣಗಳು ನಡೆಯದಂತೆ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು.

ಈ ಮೇಲ್ಕಂಡ ವಿಚಾರವನ್ನು ತಮ್ಮ ಸುದ್ದಿ ಮಾಧ್ಯಮಗಳು ಮತ್ತು ಪತ್ರಿಕೆಗಳಲ್ಲಿ ಪ್ರಕಟನೆಗೊಳಿಸಬೇಕೆಂದು ಸಿಪಿಐ (ಎಂಎಲ್) ಲಿಬರೇಷನ್ ತಮ್ಮಲ್ಲಿ ಕೋರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News