ಕೊಡಗು: ಸಿದ್ದರಾಮಯ್ಯಗೆ ಕಪ್ಪು ಬಾವುಟ ಪ್ರದರ್ಶಿಸಿದ BJP ಯುವ ಮೋರ್ಚಾ ಕಾರ್ಯಕರ್ತರು
Update: 2022-08-18 06:46 GMT
ಕೊಡಗು, ಆ.18: ಒಂದು ದಿನದ ಜಿಲ್ಲಾ ಪ್ರವಾಸಕ್ಕಾಗಿ ಗುರುವಾರ ಕೊಡಗಿಗೆ ಆಗಮಿಸಿದ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯರಿಗೆ ಕೊಡಗಿನ ಗಡಿಭಾಗವಾದ ತಿತಿಮತಿಯಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದರು.
ಯುವ ಮೋರ್ಚಾ ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಪ ನೇತೃತ್ವದಲ್ಲಿ ರಸ್ತೆ ಬದಿಯಲ್ಲಿ ಜಮಾಯಿಸಿದ್ದ ಮೋರ್ಚಾ ಕಾರ್ಯಕರ್ತರು 'ಗೋ ಬ್ಯಾಕ್ ಸಿದ್ದರಾಮಯ್ಯ' ಎಂಬ ಘೋಷಣೆ ಕೂಗಿದರು. ಸ್ಥಳದಲ್ಲಿ ಪೊಲೀಸರಿದ್ದರೂ ಪ್ರತಿಭಟನಾಕಾರರು ಸಿದ್ದರಾಮಯ್ಯರ ಕಾರಿನ ಬಳಿ ತೆರಳಿ ಅವರ ಮಡಿಲಿಗೆ ಸಾವರ್ಕರ್ ಭಾವಚಿತ್ರವನ್ನು ಹಾಕಿದರು. ಅಷ್ಟರಲ್ಲಿ ಪೊಲೀಸರು ಯುವ ಮೋರ್ಚಾ ಕಾರ್ಯಕರ್ತರನ್ನು ತಡೆದು ಸಿದ್ದರಾಮಯ್ಯರ ಕಾರಿನ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಕೊಡವರನ್ನು ಗೋಮಾಂಸ ಭಕ್ಷಕರೆಂದು ಪ್ರತಿಬಿಂಬಿಸಿದ ಸಿದ್ದರಾಮಯ್ಯ ಇದೀಗ ಮತ್ತೆ ಕೊಡಗಿಗೆ ಕಾಲಿಟ್ಟಿರುವುದರಿಂದ ಶಾಂತಿಭಂಗವಾಗಬಹುದೆಂದು ಯುವ ಮೋರ್ಚಾ ಕಾರ್ಯಕರ್ತರು ಆರೋಪಿಸಿದರು.