ವೃತ್ತಿಪರ ಕೋರ್ಸ್ ಪ್ರವೇಶ | 75:25 ಅನುಪಾತದಲ್ಲಿ ಸಾಧ್ಯವೇ: ಹೈಕೋರ್ಟ್ ಪ್ರಶ್ನೆ

Update: 2022-08-18 16:54 GMT

ಬೆಂಗಳೂರು, ಆ.18: ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ(ಸಿಇಟಿ) ಪಡೆದಿರುವ ಶೇ. 75 ಅಂಕ ಮತ್ತು ಪಿಯು ಪರೀಕ್ಷೆಯಲ್ಲಿ ಪಡೆದಿರುವ ಶೇ.25ರಷ್ಟು ಅಂಕಗಳನ್ನು ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕೆ ಪರಿಗಣಿಸಲು ಸಾಧ್ಯವೇ ಎಂದು ರಾಜ್ಯ ಸರಕಾರಕ್ಕೆ ಹೈಕೋರ್ಟ್ ಪ್ರಶ್ನೆ ಮಾಡಿದೆ.

2020-21ನೆ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಪ್ರಸ್ತುತ ಶೈಕ್ಷಣಿಕ ಸಾಲಿನಲ್ಲಿ ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕೆ ಪರಿಗಣಿಸದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕ್ರಮ ಪ್ರಶ್ನಿಸಿ ಚಿಕ್ಕಮಗಳೂರಿನ ಆರ್.ಈಶ್ವರ್ ಸೇರಿದಂತೆ ಹಲವರು ಪ್ರತ್ಯೇಕವಾಗಿ ಸಲ್ಲಿಸಿರುವ ಒಟ್ಟು ಏಳು ಮನವಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರ ನೇತೃತ್ವದ ಏಕಸದಸ್ಯ ಪೀಠವು ಗುರುವಾರ ವಿಚಾರಣೆ ನಡೆಯಿತು.

ಈ ಸಂದರ್ಭದಲ್ಲಿ ಕಳೆದ ಶೈಕ್ಷಣಿಕ ಸಾಲಿನಲ್ಲಿ ಪರೀಕ್ಷೆ ಬರೆಯದೇ ಉತ್ತೀರ್ಣರಾಗಿರುವ ಪಿಯು ವಿದ್ಯಾರ್ಥಿಗಳು ಸಿಇಟಿ ಪಡೆದಿರುವ ಶೇ.75 ಅಂಕ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಪಡೆದಿರುವ ಶೇ.25ರಷ್ಟು ಅಂಕಗಳನ್ನು ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕೆ ಪರಿಗಣಿಸಲು ಸಾಧ್ಯವೇ. ಜತೆಗೆ, ಎರಡೂ ಕಡೆಯ ವಾದದಲ್ಲಿ ಸಮತೋಲನ ಸಾಧಿಸುವ ನಿಟ್ಟಿನಲ್ಲಿ ಈ ಸೂತ್ರಕಾರ್ಯ ಸಾಧ್ಯವೇ ಎಂದು ಪೀಠವೂ ಕೇಳಿತು.

ಪ್ರಮುಖವಾಗಿ ಅರ್ಜಿದಾರರು 25 ಸಾವಿರ ಪುನರಾವರ್ತಿತ ವಿದ್ಯಾರ್ಥಿಗಳ ಬಗ್ಗೆ ಮಾತನಾಡುತ್ತಿದ್ದಾರೆ. ಪ್ರಸಕ್ತ ವರ್ಷದಲ್ಲಿ ಪಿಯುಸಿ ಪರೀಕ್ಷೆ ಬರೆದು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಸಮನಾಗಿ ಹಿಂದಿನ ವರ್ಷ ಯಾವುದೇ ಪರೀಕ್ಷೆ ಬರೆಯದೇ ಉತ್ತೀರ್ಣವಾಗಿರುವ ವಿದ್ಯಾರ್ಥಿಗಳನ್ನು ಸಮಾನವಾಗಿ ಇಡುವುದು ನ್ಯಾಯಸಮ್ಮತವಲ್ಲವೆಂದು ಸರಕಾರ ತಿಳಿಸಿದೆ.

ಹಾಗಾಗಿ, ಉಭಯ ಪಕ್ಷಕಾರರ ನಡುವೆ ಸಮತೋಲನ ಸಾಧಿಸಲು ಶೇ. 75:25ರ ಅನುಪಾತದಲ್ಲಿ ಅಂಕಗಳನ್ನು ಪರಿಗಣಿಸಲು ಸಾಧ್ಯವೇ. ಪ್ರಸಕ್ತ ಇಬ್ಬರೂ ಜಯ ಸಾಧಿಸಲಾಗದು ಎಂದು ಪೀಠವು ಅಭಿಪ್ರಾಯ ವ್ಯಕ್ತಪಡಿಸಿತು.

ಇದೇ ವೇಳೆ ಸರಕಾರದ ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್‍ಚಿನ್ನಪ್ಪ ಅವರನ್ನು ಉಲ್ಲೇಖಿಸಿದ ಪೀಠವು, ಇದೊಂದು ಬಾರಿಗೆ ಶೇ.75:25 ಅನುಪಾತ ಮಾಡಿ. ಹಲವರ ದೃಷ್ಟಿಯಿಂದ ಇದು ನ್ಯಾಯಸಮ್ಮತವಲ್ಲ ಎಂಬುದು ಸತ್ಯ. ಆದರೆ, ಏನು ಮಾಡಲಾಗುತ್ತದೆ. ಯಾವುದೇ ರೀತಿಯಿಂದ ಮುಂದುವರೆದರೂ ಒಬ್ಬರು ಪಕ್ಷಕಾರರಿಗೆ ಸಮಸ್ಯೆಯಾಗುತ್ತದೆ ಎಂದು ಹೇಳಿದರು.

ಮುಂದುವರೆದು, ಈ ಅರ್ಜಿ ವಜಾ ಮಾಡಿದರೆ ಅವರಿಗೂ ಸಮಸ್ಯೆಯಾಗುತ್ತದೆ. ಸರಕಾರ ಶೇ.75:25 ಸೂತ್ರಕ್ಕೆ ಒಪ್ಪಿದರೆ ಇದೊಂದು ಮಾದರಿಯಾಗಲಿದ್ದು, ಶೇ.90ರಷ್ಟು ದಾವೆಗಳು ಬಗೆಹರಿಯುತ್ತವೆ ಎಂದು ನುಡಿದರು. ಬಳಿಕ ಎಎಜಿ ಉಲ್ಲೇಖಿಸಿ, ಈ ಸಂಬಂಧ ಸರಕಾರದ ನಿರ್ಧಾರ ತಿಳಿದುಕೊಳ್ಳುವುದಾಗಿ ಉತ್ತರಿಸಿದರು.

ಅರ್ಜಿದಾರರ ಪರ ಹಿರಿಯ ವಕೀಲ ಡಿ.ಆರ್.ರವಿಶಂಕರ್ ವಾದ ಮಂಡಿಸಿ, ಈ ಪ್ರಕರಣ ಮುಂದೂಡಲು ಕೋರಿದ್ದರಿಂದ ಮಧ್ಯಂತರ ಆದೇಶ ವಿಸ್ತರಿಸಿ, ಆ.22ಕ್ಕೆ ವಿಚಾರಣೆಯನ್ನು ಪೀಠವು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News