ತಂತ್ರಜ್ಞಾನ, ಸಂಪರ್ಕ ಕ್ಷೇತ್ರಗಳಲ್ಲಿನ ಕ್ರಾಂತಿಗೆ ರಾಜೀವ್ ಗಾಂಧಿ ಕಾರಣ: ಸಿದ್ದರಾಮಯ್ಯ
ಬೆಂಗಳೂರು, ಆ.20: ರಾಜೀವ್ ಗಾಂಧಿ ಚಿಕ್ಕ ವಯಸ್ಸಿನಲ್ಲಿ ಪ್ರಧಾನಿ ಆಗಿ, ದೇಶವನ್ನು 21ನೇ ಶತಮಾನಕ್ಕೆ ವಿಜ್ಞಾನ, ತಂತ್ರಜ್ಞಾನ, ಸಂಪರ್ಕ ಕ್ಷೇತ್ರಗಳಲ್ಲಿ ಜಗತ್ತಿನ ಇತರೆ ರಾಷ್ಟ್ರಗಳ ಮಟ್ಟಕ್ಕೆ ನಿಲ್ಲಲು ತೀರ್ಮಾನಿಸಿ ಇವುಗಳ ಬೆಳವಣಿಗೆಗೆ ಕ್ರಾಂತಿ ಮಾಡಿದರು. ಇಡೀ ಜಗತ್ತು ಭಾರತದತ್ತ ತಿರುಗಿ ನೋಡುವಂತೆ ಮಾಡಿದರು. ಅವರಿಗೆ ಯುವಕರಲ್ಲಿ ಅಪಾರವಾದ ಭರವಸೆ ಇತ್ತು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಶನಿವಾರ ನಗರದ ರೇಸ್ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಆಯೋಜಿಸಲಾಗಿದ್ದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಿಜೆಪಿಯವರು ಕುವೆಂಪು, ಅಂಬೇಡ್ಕರ್, ಕನಕದಾಸರು, ಭಗತ್ ಸಿಂಗ್, ನಾರಾಯಣ ಗುರು ಸೇರಿದಂತೆ ಅನೇಕ ಮಹಾನ್ ವ್ಯಕ್ತಿಗಳ ಚರಿತ್ರೆ ಬದಲಿಸಲು ಪ್ರಯತ್ನಿಸುತ್ತಿದ್ದಾರೆ. ನಮ್ಮ ಯುವಕರು ಚರಿತ್ರೆ ತಿಳಿದುಕೊಳ್ಳಬೇಕಾದದ್ದು ಅವಶ್ಯಕ, ಆಗ ಮಾತ್ರ ನೀವು ಭವಿಷ್ಯದಲ್ಲಿ ಸರಿಯಾದ ತೀರ್ಮಾನ ಮಾಡಲು ಸಾಧ್ಯ ಎಂದು ಅವರು ಹೇಳಿದರು.
ರಾಜೀವ್ ಗಾಂಧಿ ಯುವಕರಿಗೆ ಮತದಾನದ ಹಕ್ಕನ್ನು 21 ವರ್ಷದಿಂದ 18 ವರ್ಷಕ್ಕೆ ಇಳಿಸಿದರು. ಸಂವಿಧಾನಕ್ಕೆ 73 ಹಾಗೂ 74ನೇ ತಿದ್ದುಪಡಿ ತಂದು ಯಾರಿಗೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿರಲಿಲ್ಲ, ಅವರು ಕೂಡ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟರು. ಇದರಿಂದಾಗಿ, ತಾಲೂಕು ಪಂಚಾಯ್ತಿ, ಪಾಲಿಕೆ, ನಗರ ಸಭೆ ಚುವನಾವಣೆಯಲ್ಲಿ ಮೀಸಲಾತಿ ಸಿಕ್ಕಿತು ಎಂದು ಸಿದ್ದರಾಮಯ್ಯ ಹೇಳಿದರು.
ಬಿಜೆಪಿಯವರಿಗೆ ಹಿಂದುಳಿದವರು, ಮಹಿಳೆಯರಿಗೆ ಮೀಸಲಾತಿ ನೀಡುವ ಇಚ್ಛಾಶಕ್ತಿ ಬದ್ಧತೆ ಇಲ್ಲ. ಬಿಜೆಪಿ ಉಪಾಧ್ಯಕ್ಷರಾಗಿದ್ದ ರಾಮಾಜೋಯಿಸ್ ಮೀಸಲಾತಿ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದಾಗ ಮಹಾ ವೀರರಾದ ಯಡಿಯೂರಪ್ಪ, ಈಶ್ವರಪ್ಪ ಇವರನ್ನು ತಡೆದಿದ್ದರಾ? ಅದೃಷ್ಟವಶಾತ್ ಸುಪ್ರೀಂಕೋರ್ಟ್ನಲ್ಲಿ ಆ ಅರ್ಜಿ ವಜಾಗೊಂಡು, ಮೀಸಲಾತಿ ಉಳಿಯಿತು. ಈಗ ಮತ್ತೆ ಅಪಾಯ ಎದುರಾಗಿದೆ. ಸುಪ್ರೀಂಕೋರ್ಟ್ ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶ ಕೊಟ್ಟ ಮೀಸಲಾತಿಯನ್ನು ಒಡೆದು ಹಾಕಿದೆ. ಇದೇ ಕಾರಣಕ್ಕೆ ನಾವು ಜಾತಿ ಗಣತಿ ಮಾಡಿದ್ದೆವು. ಅದನ್ನು ಕುಮಾರಸ್ವಾಮಿ ಹಾಗೂ ಬಿಜೆಪಿ ಒಪ್ಪಲಿಲ್ಲ ಎಂದು ಸಿದ್ದರಾಮಯ್ಯ ಕಿಡಿಗಾರಿದರು.
ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಸುಪ್ರೀಂ ಕೋರ್ಟ್ಗೆ ನೀಡದೆ ಭಕ್ತವತ್ಸಲ ಸಮಿತಿ ಮಾಡಿದರು. ಅವರು ಸಮೀಕ್ಷೆ ಮಾಡದೇ 2 ತಿಂಗಳಲ್ಲಿ ವರದಿ ಕೊಟ್ಟರು. ಒಂದು ವೇಳೆ ಇದು ಸುಪ್ರೀಂ ಕೋರ್ಟ್ನಲ್ಲಿ ಮಾನ್ಯತೆ ಪಡೆಯದಿದ್ದರೆ ಹಿಂದುಳಿದವರಿಗೆ ಮೀಸಲಾತಿ ಇರುವುದಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ದೇವರಾಜ ಅರಸು 1972ರಲ್ಲಿ ಮುಖ್ಯಮಂತ್ರಿಯಾದರು. ಹಾವನೂರು ಆಯೋಗ ರಚಿಸಿ 1977ರಲ್ಲಿ ಹಿಂದುಳಿದವರಿಗೆ, ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡಿದರು. 1959ರವರೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ನೀಡಿದ್ದ ಮೀಸಲಾತಿ ಇತ್ತು. 26 ವರ್ಷ ಹಿಂದುಳಿದ ವರ್ಗದವರಿಗೆ ಮೀಸಲಾತಿ ಇರಲಿಲ್ಲ. ಹೀಗಾಗಿ ಅರಸು ಅವರನ್ನು ಸಾಮಾಜಿಕ ನ್ಯಾಯದ ಹರಿಕಾರ ಎಂದು ಕರೆಯುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಉಳುವವನೆ ಭೂಮಿಯ ಒಡೆಯ ಮಾಡಿದರು. ಮಲಹೊರುವ ಪದ್ಧತಿ, ಜೀತ ಪದ್ಧತಿ ತಪ್ಪಿಸಿದರು. ಬದಲಾವಣೆ ಆಗಬೇಕಾದರೆ, ಸಾಮಾಜಿಕ, ಆರ್ಥಿಕ ಚಲಾವಣೆ ಆಗಬೇಕಾದರೆ, ಸಾಮಾಜಿಕ ಆರ್ಥಿಕ ಪ್ರಭುತ್ವ ಇರಬೇಕು ಎಂದು ಅಂಬೇಡ್ಕರ್ ಹೇಳಿದ್ದರು. ಇದರಲ್ಲಿ ನಂಬಿಕೆ ಇಟ್ಟುಕೊಂಡಿರುವವರು ಕಾಂಗ್ರೆಸ್ನವರು, ಇದಕ್ಕೆ ವಿರುದ್ಧ ಇರುವವರು ಬಿಜೆಪಿಯವರು ಎಂದು ಅವರು ವಾಗ್ದಾಳಿ ನಡೆಸಿದರು.
ಇಂದು ಪ್ರಜಾಪ್ರಭುತ್ವ ಹಾಗೂ ಸಂವಿಧಾನಕ್ಕೆ ಅಪಾಯ ಎದುರಾಗಿದೆ. ಸಂವಿಧಾನ ಉಳಿದರೆ ನಾವು ಉಳಿಯುತ್ತೇವೆ, ಉಳಿಯಲಿಲ್ಲ ಎಂದರೆ ನಾವು ಉಳಿಯುವುದಿಲ್ಲ. ಪ್ರಜಾಪ್ರಭುತ್ವ ಇದ್ದರೆ ಮಾತ್ರ ಕಟ್ಟಕಡೆಯ ವ್ಯಕ್ತಿಗೂ ಹಕ್ಕು ಗೌರವ ಸಿಗುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದರು.