ವಕೀಲರ ಆರೋಗ್ಯ ಸೌಲಭ್ಯ ಕಾರ್ಯಕ್ರಮ ಶೀಘ್ರದಲ್ಲಿ ಪ್ರಾರಂಭ : ಸಿಎಂ ಬಸವರಾಜ ಬೊಮ್ಮಾಯಿ

Update: 2022-08-21 10:06 GMT

ಶಿಗ್ಗಾಂವಿ: ಎಲ್ಲ ವಕೀಲರಿಗೆ ಆರೋಗ್ಯ ಸೌಲಭ್ಯ ಕಾರ್ಯಕ್ರಮವನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಶಿಗ್ಗಾಂವ್ ವಕೀಲರ ಸಂಘದ ನೂತನ ಕಟ್ಟಡದ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ  ನೆರವೇರಿಸಿ ಮಾತನಾಡಿದರು.

ಕರ್ನಾಟಕ ನ್ಯಾಯಾಂಗ ವ್ಯವಸ್ಥೆಯ ಮೂಲಭೂತ ಸೌಕರ್ಯಕ್ಕಾಗಿ 800 ಕೋಟಿ ರೂ.ಗಳನ್ನು ಈಗಾಗಲೇ ಅನುಮತಿ ನೀಡಲಾಗಿದೆ. ಇದರಿಂದ ಕೆಳಹಂತದ ನ್ಯಾಯಾಲಯಗಳಿಗೆ ಅತ್ಯುತ್ತಮ ವ್ಯವಸ್ಥೆಗಳು ದೊರೆಯಲಿದೆ. ಜನಸಂಖ್ಯೆ ಹೆಚ್ಚಾದಾಗ ನ್ಯಾಯಾಲಯಗಳು, ಅದರ ಸೌಕರ್ಯಗಳು ಹೆಚ್ಚಾಗಬೇಕಾಗುತ್ತವೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನ್ಯಾಯಾಂಗಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುತ್ತಿದೆ ಎಂದರು.

ನ್ಯಾಯಾಲಯಗಳಲ್ಲಿ ಪ್ರಕರಣಗಳ ಸಂಖ್ಯೆ ಕಡಿಮೆಗೊಳಿಸಲು ಕ್ರಮ

ಶಿಗ್ಗಾಂವಿ, ಸವಣೂರು, ಹಾವೇರಿಗಳಲ್ಲಿ ವಕೀಲರ ಸಂಘಗಳಿಗೆ ಅನುಮತಿ ನೀಡಿ, ಕಟ್ಟಡಕ್ಕೆ ಪೀಠೋಪಕರಣ, ಮೂಲಭೂತಸೌಕರ್ಯಗಳನ್ನು ಸರ್ಕಾರ ಪೂರೈಸಲಿದೆ. ಈ ಭಾಗದ ರೈತರಿಗೆ, ಬಡಜನರಿಗೆ ಶೀಘ್ರವಾಗಿ ನ್ಯಾಯ ದೊರಕಲು ಅನುಕೂಲ ಕಲ್ಪಿಸಲಾಗುವುದು. ನ್ಯಾಯಾಲಯಗಳ್ಲಿ ಪ್ರಕರಣಗಳ ಸಂಖ್ಯೆ ಕಡಿಮೆಗೊಳಿಸಲು ಸೂಚನೆಗಳನ್ನು ನೀಡಲಾಗಿದೆ. ಮೂಲಭೂತವಾಗಿ, ಕಾನೂನು ರೂಪಿಸುವಾಗ ಗೊಂದಲವಿಲ್ಲದೇ ನಿಖರತೆ ಇರಬೇಕು. ಕಾನೂನಿನ ನಿಖರತೆಯಿಂದ ಪ್ರಕರಣಗಳು ಕಡಿಮೆಯಾಗುತ್ತವೆ. ನ್ಯಾಯಾಲಯ ಪ್ರಕರಣ ಮಾನಿಟರಿಂಗ್ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ. ಕರ್ನಾಟಕದಲ್ಲಿ ಉನ್ನತ ಮಟ್ಟದ ನ್ಯಾಯಾಂಗ ವ್ಯವಸ್ಥೆ ಹಾಗೂ ಮೂಲಭೂತ ಸೌಕರ್ಯ ಇದೆ. ಶಿಗ್ಗಾಂವಿ, ಸವಣೂರು ನಲ್ಲಿ ನ್ಯಾಯಾಂಗ ವ್ಯವಸ್ಥೆ ಬಹಳಷ್ಟು ಸುಧಾರಣೆಗಳನ್ನು ಕಂಡಿವೆ. ಶಿಗ್ಗಾಂವ, ಸವಣೂರಿಗೆ ಮ್ಯಾಜಿಸ್ಟ್ರೇಟ್ ಕೋರ್ಟ್ಗಳನ್ನು ಮಾಡಲಾಗಿದೆ  ಎಂದರು.

ಪ್ರಜಾಪ್ರಭುತ್ವದಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು

ಭಾರತದ ನ್ಯಾಯಾಂಗ ವ್ಯವಸ್ಥೆಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಪ್ರಜಾಪ್ರಭುತ್ವದಲ್ಲಿ ನ್ಯಾಯಾಂಗಕ್ಕೆ ಗೌರವ, ಅಧಿಕಾರ ಮತ್ತು ಜವಾಬ್ದಾರಿಯನ್ನು ನೀಡಲಾಗಿದೆ. ಭಾರತದ  ಸ್ವಾತಂತ್ರ್ಯದ ಅಮೃತ ಮಹೋತ್ಸವದ ಆಚರಣೆ ಮಾತ್ರವಲ್ಲ, ಲೋಕತಂತ್ರ , ಜನತಂತ್ರದ ಆಚರಣೆಯಾಗಿದೆ. ಈ ಲೋಕತಂತ್ರಕ್ಕೆ ಎಪ್ಪತ್ತೈದು ವರ್ಷ ಕಟ್ಟುನಿಟ್ಟಾಗಿ ನಡೆದುಕೊಂಡು ಬಂದಿರುವುದರಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದಿದೆ. ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗದ ಪಾತ್ರ ಮುಖ್ಯವಾಗಿದ್ದು, ಇವೆಲ್ಲವನ್ನೂ  ಗಮನಿಸುವ ಮಹತ್ವದ ಕಾರ್ಯವನ್ನು ಪತ್ರಿಕಾ ರಂಗಕ್ಕೆ ಇದೆ.  ಈ ನಾಲ್ಕೂ ಕಂಬದ ಮೇಲೆ ನಿಂತಿರುವ ಪ್ರಜಾಪ್ರಭುತ್ವದ ಯಶಸ್ಸು, ಇಡೀ ಜಗತ್ತಿಗೆ ಮಾದರಿಯಾಗಿದೆ. ಭಾರತದಲ್ಲಿ ಪ್ರಜಾಪ್ರಭುತ್ವದ ಬೇರು ಗಟ್ಟಿಯಾಗಿದ್ದು, ಅದರ ಆದರ್ಶಗಳು ಇಂದಿಗೂ ಜೀವಂತವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಸರಿಯಿಲ್ಲದಿದ್ದರೆ ಬದುಕಿಗೆ ಸಮಭಾವ ಸಿಗುವುದೂ ಕಷ್ಟವಾಗುತ್ತದೆ ಎಂದು ತಿಳಿಸಿದರು.

ಸದೃಢ ನ್ಯಾಯಾಂಗ ವ್ಯವಸ್ಥೆಯಿಂದ ರಾಜ್ಯದ ಅಭಿವೃದ್ಧಿ ಸಾಧ್ಯ

ವಕೀಲ ವೃತ್ತಿ ನ್ಯಾಯಾಂಗದ ಜೊತೆಗೆ ಸಾಮಾಜಿಕ ಹೊಣೆಗಾರಿಕೆ ಇರುತ್ತದೆ.  ಪ್ರಜಾಪ್ರಭುತ್ವದಲ್ಲಿ ನ್ಯಾಯಾಂಗ ಕ್ಷೇತ್ರ ಪ್ರಾತಿನಿಧ್ಯವೂ ಇರಬೇಕು. ನ್ಯಾಯಾಂಗ ವೃತ್ತಿಗೂ ನನಗೂ ಅನ್ಯೋನ್ಯ ಸಂಬಂಧವಿದೆ. ಕುಟುಂಬದವರೂ ವಕೀಲ ವೃತ್ತಿಯಲ್ಲಿದ್ದರು. ಶಿಗ್ಗಾಂವಿ, ಸವಣೂರಿನ ಸಮಗ್ರ ಅಭಿವೃದ್ಧಿಯಲ್ಲಿ ನ್ಯಾಯಾಂಗ ವ್ಯವಸ್ಥೆಯೂ ಅತ್ಯುತ್ತಮವಾಗಿಸಬೇಕು ಎಂಬುದು ಸರ್ಕಾರದ ಆಶಯವಾಗಿದೆ. ಸದೃಢವಾದ ನ್ಯಾಯಾಂಗ ವ್ಯವಸ್ಥೆಯಿಂದ ರಾಜ್ಯದ ಅಭಿವೃದ್ಧಿ ಸಾದ್ಯ. ದೇಶದಲ್ಲಿನ ದೃಢ ನ್ಯಾಯಾಂಗ ವ್ಯವಸ್ಥೆಯಿಂದ ವಿದೇಶಿ ಬಂಡವಾಳ ಹೂಡಿಕೆದಾರರು ಹೂಡಿಕೆಗೆ ಮುಂದಾಗಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News