KPTCL ನೇಮಕಾತಿಯಲ್ಲಿ ಅಕ್ರಮ ಆರೋಪ | ಇದು ಸರಕಾರದ ವೈಫಲ್ಯವೋ-ಹಗರಣಗಳ ಸಾಧನೆಯೋ ಎಂದು ಪ್ರಶ್ನಿಸಿದ ಡಿಕೆಶಿ

Update: 2022-08-22 12:21 GMT

ಬೆಂಗಳೂರು, ಆ.22: 'ಪಿಎಸ್‍ಐ ನೇಮಕಾತಿ ಹಗರಣ ಮಾಸುವ ಮುನ್ನವೇ ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆ ಪರೀಕ್ಷೆಯಲ್ಲಿ ನಡೆದ ಹಗರಣ ಬಯಲಿಗೆ ಬಂದಿದೆ. ತಂದೆ-ಮಗ ಪರೀಕ್ಷಾ ಕೇಂದ್ರಕ್ಕೆ ಬಂದು ಪ್ರಶ್ನೆ ಪತ್ರಿಕೆಯನ್ನು ಸೋರಿಕೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದು ಸರಕಾರದ ವೈಫಲ್ಯವೋ ಅಥವಾ ಹಗರಣಗಳ' ಸಾಧನೆಯೋ ತಿಳಿಯುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಬಿಜೆಪಿ ಸರಕಾರದ ಆಡಳಿತಾವಧಿಯಲ್ಲಿ ಹಗರಣಗಳ ಸಂಖ್ಯೆ ಆಕಾಶದತ್ತ ಮುಖ ಮಾಡುತ್ತಲೇ ಇದೆ. ಪ್ರತಿಯೊಂದು ವಿಚಾರಕ್ಕೂ ‘ಕಠಿಣ ಕ್ರಮ’ ಕೈಗೊಳ್ಳುವ ಸರಕಾರ ಈ ವಿಚಾರಗಳಲ್ಲಿ ಮೌನವ್ರತ ಆಚರಿಸುತ್ತಿದೆಯೇ? ಎಂದು ಕೇಳಿದ್ದಾರೆ.

ನಿರುದ್ಯೋಗ ಸಮಸ್ಯೆ ಎಲ್ಲರ ಊಹೆಗೂ ಮೀರಿ ಬೆಳೆಯುತ್ತಿದೆ. ಹೀಗಿದ್ದಾಗ ಇಂತಹ ಹಗರಣಗಳು ಪದೇ ಪದೇ ನಡೆಯುತ್ತಿದ್ದರೆ ಉದ್ಯೋಗಾಕಾಂಕ್ಷಿಗಳ ಗತಿಯೇನು? ಕಠಿಣ ಕ್ರಮ ಎನ್ನುವುದು ಬಿಜೆಪಿ ಸರಕಾರದ ಮಾತಿಗೆ ಸೀಮಿತವಾಗಿರದೆ ಅದು ಅನುಷ್ಠಾನಕ್ಕೆ ಬರಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈ ಹಗರಣದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ನಡೆದ ಪ್ರಮಾದವನ್ನು ಸರಿಮಾಡುವುದಕ್ಕೆ ಬೇಕಾದ ಸೂಕ್ತ ಕ್ರಮಗಳನ್ನು ರಾಜ್ಯ ಸರಕಾರ ಕೈಗೊಳ್ಳಬೇಕೆಂದು ಶಿವಕುಮಾರ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News