×
Ad

ಸಾವರ್ಕರ್ - ಜಿನ್ನಾ ಇಬ್ಬರೂ ಒಂದೇ: ಬಿ ಕೆ. ಹರಿಪ್ರಸಾದ್

Update: 2022-08-25 19:46 IST

ಚಾಮರಾಜನಗರ: 'ಮಹಮ್ಮದ್ ಅಲಿ ಜಿನ್ನಾ ಮತ್ತು ಸಾವರ್ಕರ್ ಇಬ್ಬರೂ ಒಂದೇ. ಅವರಿಂದಲೇ ದೇಶ ಈ ಸ್ಥಿತಿಗೆ ಬಂದಿದ್ದು' ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಗಂಭೀರವಾಗಿ ಆರೋಪಿಸಿದರು.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿ.ಕೆ ಹರಿಪ್ರಸಾದ್ , ಸಾವರ್ಕರ್ ಭಾವಚಿತ್ರವನ್ನು ಗಣೇಶೋತ್ಸವದಲ್ಲಿ ಇರಿಸುವ ಅಭಿಯಾನದ ಬಗ್ಗೆ ಪ್ರತಿಕ್ರಿಯೆ ನೀಡಿ  ಒಬ್ಬ ನಾಸ್ತಿಕರನ್ನು ತೆಗೆದುಕೊಂಡು ಹೋಗಿ ನಂಬಿಕಸ್ಥರ ಜಾಗದಲ್ಲಿ ಇಡುವುದು ಹಾಸ್ಯಾಸ್ಪದ. ಅವರ ಆತ್ಮಕತೆ, ಚರಿತ್ರೆ ಓದದೇ ರಾಜಕೀಯ ಹಿತಾಸಕ್ತಿಗಾಗಿ ಮಾಡುತ್ತಿದ್ದಾರೆ. ಈ ರೀತಿ ಮಾಡಲು ಹೋದವರಿಗೆ ಏನು ಹೇಳಬೇಕೆಂದು ಗೊತ್ತಾಗುವುದಿಲ್ಲ ಎಂದು ಕಿಡಿಕಾರಿದರು.  ಸಾವರ್ಕರ್ ಓರ್ವ ನಾಸ್ತಿಕ, ಯಾವುದೇ ದೇವರ ಬಗ್ಗೆ ನಂಬಿಕೆ ಇಲ್ಲಾ, ಅವರೂ ನಾಸ್ತಿಕರೇ, ಜಿನ್ನಾ ಕೂಡ ನಾಸ್ತಿಕರೇ, ಅವರಿಬ್ಬರೂ ನಾಸ್ತಿಕರು ಸೇರಿ ದೇಶವನ್ನು ಈ ಸ್ಥಿತಿಗೆ ತಂದಿಟ್ಟಿದ್ದಾರೆ ಎಂದು ಹರಿಹಾಯ್ದರು.

ಭಾರತದ ಪರಿಕಲ್ಪನೆ ಕೊಟ್ಟಿರುವುದು ಮಹಾತ್ಮಾ ಗಾಂಧೀಜಿ‌. ದೇಶದ ಏಕತೆ, ಸಮಗ್ರತೆ ಬಗ್ಗೆ ಮಾತನಾಡಲು ಬಿಜೆಪಿಗೆ ಯಾವುದೇ ನೈತಿಕ ಹಕ್ಕಿಲ್ಲ. ಭಾಷೆ, ಧರ್ಮ, ಜಾತಿ ಹೆಸರಿನಲ್ಲಿ ರಾಜಕಾರಣ ಮಾಡಿ ದೇಶವನ್ನು ಕಲುಷಿತಗೊಳಿಸಿರುವುದು ಬಿಜೆಪಿ. ಬಿಜೆಪಿ ಅವರಂತೆ ಯಾತ್ರೆ ಮಾಡಿ ದಂಗೆ, ಕೊಲೆ, ಸುಲಿಗೆ ಮಾಡಿಲ್ಲ.ಬಿಜೆಪಿ ಯಾವಾಗ ಯಾತ್ರೆ ಮಾಡಿದರೂ ಕೋಮುಗಲಭೆ ಆಗಿದೆ. ನಮ್ಮದು ಭಾರತ್​ ಜೋಡೋ ಯಾತ್ರೆ. ಒಡೆದ ಮನಸ್ಸುಗಳನ್ನು ಒಂದುಗೂಡಿಸುವ ಕೆಲಸ ಮಾಡಲಿದೆ. ಭಾರತ ಕವಲುದಾರಿಯಲ್ಲಿದ್ದು, ಅಸಲಿ ದೇಶಭಕ್ತರು ಒಂದು ಕಡೆ.. ನಕಲಿ ದೇಶ ಭಕ್ತರಾದ ಸಂಘಿಗಳು ಮತ್ತೊಂದು ಕಡೆ ಎಂದು ಲೇವಡಿ ಮಾಡಿದ್ದಾರೆ.

ಕೇಂದ್ರದಲ್ಲಿ ಬಿಜೆಪಿ ಬಂದು 8 ವರ್ಷ ಆಗಿದೆ. ರಾಜ್ಯದಲ್ಲಿ ಬಿಜೆಪಿ ಬಂದು 3 ವರ್ಷ ಆಗಿದೆ‌. ಆದರೆ, ಜನರ ಕಷ್ಟಗಳಿಗೆ ಸ್ಪಂದಿಸಲು ಸಂಪೂರ್ಣ ವಿಫಲವಾಗಿದೆ. ಮಹಿಳೆಯರಿಗೆ ರಕ್ಷಣೆ ಕೊಡಲಾಗುತ್ತಿಲ್ಲ. ರೈತರಿಗೆ ಬೆಂಬಲ ಬೆಲೆ ಕೊಡುತ್ತಿಲ್ಲ. ಪ್ರವಾಹ ಹಾನಿಗೆ ಪರಿಹಾರ ಕೊಡುತ್ತಿಲ್ಲ. ಬೆಲೆ ಏರಿಕೆ, ಶೇ 50ರಷ್ಟು ಕಮಿಷನ್ ಇಂದಾಗಿ ಜನರು ತತ್ತರಿಸಿ ಹೋಗಿದ್ದಾರೆ. ಈ ವಿಚಾರವನ್ನು ಮರೆಮಾಚಲು ಇತಿಹಾಸ ತಿದ್ದಿ ಗೊಂದಲ ಎಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಬೇರೆ ಬೇರೆ ವಿಚಾರ ಎಳೆದು ತರುತ್ತಿದ್ದಾರೆ ಎಂದು ಸಾವರ್ಕರ್ ರಥಯಾತ್ರೆಗೆ ಬಗ್ಗೆ ಕಿಡಿಕಾರಿದರು.

ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ದೃವನಾರಾಯಣ್, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಪಿ.‌ಮರಿಸ್ವಾಮಿ ಹಾಗೂ ಕಾಂಗ್ರೇಸ್ ಯುವ ಮುಖಂಡ ಹೆಚ್ ಎಂ ಗಣೇಶ್ ಪ್ರಸಾದ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News