×
Ad

ಕಮಿಷನ್ ಕೇಳಿದರೆ ಒಂದು ವರ್ಷ ಕಾಮಗಾರಿ ನಿಲ್ಲಿಸಿ: ಗುತ್ತಿಗೆದಾರರಿಗೆ ಕುಮಾರಸ್ವಾಮಿ ಕಿವಿಮಾತು

Update: 2022-08-25 21:35 IST

ಬೆಂಗಳೂರು, ಆ.25: ಪರ್ಸೆಂಟೇಜ್ ಯಾಕೆ ಕೊಡುತ್ತೀರಿ? ಕಮಿಷನ್ ಕೇಳಿದರೆ ಕಾಮಗಾರಿ ಮಾಡುವುದಿಲ್ಲವೆಂದು ಒಂದು ವರ್ಷ ಕೆಲಸ ನಿಲ್ಲಿಸಿ, ಆಗ ತಂತಾನೆ ಎಲ್ಲವೂ ಸರಿ ಆಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಗುತ್ತಿಗೆದಾರರಿಗೆ ಕಿವಿಮಾತು ಹೇಳಿದ್ದಾರೆ.

ಗುರುವಾರ ನಗರದಲ್ಲಿರುವ ಜೆಡಿಎಸ್ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟೆಂಡರ್‍ನಲ್ಲಿ ಭಾಗವಹಿಸುವುದು ಬಿಟ್ಟು ಸರಕಾರಕ್ಕೆ ಬಿಸಿ ಮುಟ್ಟಿಸಿ. ಪರ್ಸಂಟೇಜ್ ವಿರುದ್ಧ ಬೀದಿಗೆ ಇಳಿಯಿರಿ. ದಾಖಲೆಗಳನ್ನು ಜನರ ಮುಂದಿಡಿ. ಸುಖಾಸುಮ್ಮನೆ ಹೇಳಿಕೆಗಳಿಂದ ಪ್ರಯೋಜನ ಇಲ್ಲ ಎಂದರು.

40 ಪರ್ಸೆಂಟ್ ಕಮೀಷನ್ ಬಗ್ಗೆ ಕೆಲ ಗುತ್ತಿಗೆದಾರರು ಆರೋಪ ಮಾಡಿದ್ದಾರೆ. ಯಾವುದಾದರೂ ಸಾಕ್ಷಿ ಇದ್ದರೆ ತನಿಖೆ ನಡೆಸುವುದಾಗಿ ಸರಕಾರ ಹೇಳುತ್ತಿದೆ. ತನಿಖೆಗೆ ಕೊಟ್ಟರೆ ಸಾಕ್ಷಿ ಕೊಡುತ್ತೇವೆಂದು ಗುತ್ತಿಗೆದಾರರು ಹೇಳುತ್ತಾರೆ. ಇದರಿಂದ ಪ್ರಯೋಜನ ಆಗಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ನಾನು ಎರಡು ಬಾರಿ ಮುಖ್ಯಮಂತ್ರಿಯಾದಾಗಲೂ ಈ ಪಸರ್ಂಟೇಜ್ ಏನೂ ಇರಲಿಲ್ಲ. ನಾನು ಲಾಟರಿ ನಿಷೇಧ ಮಾಡಿದಾಗ ಇದ್ದ ಕಿಂಗ್ ಪಿನ್‍ಗಳು, ಮಂತ್ರಿಗಳು ಎಷ್ಟೆಷ್ಟು ಆಫರ್ ಕೊಟ್ಟರು ಎನ್ನುವುದು ಗೊತ್ತಿದೆ. ಆ ಆಫರ್ ಕೊಟ್ಟವರು ಇನ್ನೂ ಬದುಕಿದ್ದಾರೆ. ಆದರೂ ಎಲ್ಲವನ್ನು ಧಿಕ್ಕರಿಸಿ ಲಾಟರಿ ನಿಷೇಧ ಮಾಡಿದ್ದೆ. ಅಂತಹ ಬದ್ಧತೆ ಈ ಸರಕಾರಕ್ಕೆ ಇದೆಯಾ ಎಂದು ಅವರು ಪ್ರಶ್ನಿಸಿದರು.

ಬೈಯ್ಯಪ್ಪನಹಳ್ಳಿ-ಮಹಾತ್ಮ ಗಾಂಧಿ ರಸ್ತೆ ನಡುವಿನ ಮೊದಲ ಹಂತದ ನಮ್ಮ ಮೆಟ್ರೊ ಯೋಜನೆಗೆ ಒಪ್ಪಿಗೆ ನೀಡಿದಾಗ ಅದರ ಗುತ್ತಿಗೆದಾರರು ಯಾರು ಎಂಬುದೇ ನನಗೆ ಗೊತ್ತಿರಲಿಲ್ಲ. ಆದರೆ, ಯೋಜನೆ ಕಾಲಮಿತಿಯಲ್ಲಿ ಮುಗಿಯಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದೆ. ಮುಖ್ಯಮಂತ್ರಿ ಕಚೇರಿ ಅಷ್ಟು ಪಾರದರ್ಶಕವಾಗಿತ್ತು. ಮೈತ್ರಿ ಸರಕಾರದ ಅವಧಿಯಲ್ಲಿಯೂ ಕಮಿಷನ್ ವ್ಯವಹಾರ ನಡೆದಿದೆ. ಆದರೆ ನನ್ನ ಕಚೇರಿಯಲ್ಲಿ ನಡೆದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಕೋಟ್ಯಂತರ ರೂ. ಹಣ ಮಾಡಿರುವ ಅಧಿಕಾರಿಗಳ ಮನೆಗಳ ಮೇಲೆ ದಾಳಿ ಮಾಡಿ ಎಷ್ಟು ಕಳಂಕಿತರನ್ನು ಜೈಲಿಗೆ ಕಳುಹಿಸಿದ್ದಾರೆ? ಎಷ್ಟು ಜನರಿಗೆ ನ್ಯಾಯ ಕೊಡಿಸಿದ್ದಾರೆ?  ನ್ಯಾಯಾಂಗ ತನಿಖೆಯಲ್ಲಿ ಏನಾದರೂ ಸಿಕ್ಕಿತೇ? ಇಲ್ಲ, ಅರ್ಕಾವತಿ ‘ರಿಡೂ’ ತನಿಖೆ ನಡೆಸಿದ ನ್ಯಾ.ಕೆಂಪಣ್ಣ ಆಯೋಗ ಮಾಡಿದ ತನಿಖೆಯಲ್ಲಿ ಏನು ಸಿಕ್ಕಿತು? ಏನೇ ಸಾಕ್ಷಿ ಕೊಟ್ಟರೂ ಯಾವುದೇ ನ್ಯಾಯ ಸಿಗುವುದಿಲ್ಲ. ಸುಮ್ಮನೆ ಗುತ್ತಿಗೆದಾರರು ಇದೆಲ್ಲವನ್ನು ಬಿಟ್ಟು ಕೆಲಸ ನಿಲ್ಲಿಸಲಿ. ಆಮೇಲೆ ಎಲ್ಲವೂ ದಾರಿಗೆ ಬರುತ್ತದೆ ಎಂದು ಅವರು ತಿಳಿಸಿದರು.

ಸಚಿವ ಮುನಿರತ್ನ ಅವರು ಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಯಾರಿಗಿದೆ ಮಾನ, ಮರ್ಯಾದೆ? ಮಾನನಷ್ಟ ಮೊಕದ್ದಮೆ ಹೂಡುವುದಕ್ಕೆ. ಅವರು ಶಾಸಕರಾಗುವುದಕ್ಕೂ ಮೊದಲು ಗುತ್ತಿಗೆದಾರರೇ ಆಗಿದ್ದರು. ಆ ಸಂದರ್ಭದಲ್ಲಿ ಗಂಗಾನಗರದಲ್ಲಿ ಗೋಡೆ ಕುಸಿದು ಒಂದು ಮಗು ಮೃತಪಟ್ಟಿತ್ತು. ಆಗ ಇವರೇ (ಮುನಿರತ್ನ) ತಾನೇ ಗುತ್ತಿಗೆದಾರರು. ಅವರು ಏನೇನು ಮಾಡಿದ್ದಾರೆ ಅಂತ ಗೊತ್ತಿದೆ ಎಂದು ಮುನಿರತ್ನ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದರು.

ಪ್ರಧಾನಿಗೂ ನೈತಿಕತೆ ಇಲ್ಲ: ತನಿಖೆ, ಒತ್ತಾಯ, ಹೇಳಿಕೆ, ಪ್ರತಿಹೇಳಿಕೆ ಇವೆಲ್ಲಾ ಸಮಯ ವ್ಯರ್ಥ ಆಗುವುದಕ್ಕೆ ಅಷ್ಟೇ. ಪ್ರಧಾನಿ ನರೇಂದ್ರ ಮೋದಿಯಿಂದ ಹಿಡಿದು ಯಾರಿಗೂ ಕಮಿಷನ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಇದಕ್ಕೆ ಕಾಂಗ್ರೆಸ್, ಬಿಜೆಪಿ ಯಾರು ಹೊರತಲ್ಲ. ಮೊದಲು ವಿಧಾನಸೌಧದಿಂದಲೆ ಸ್ವಚ್ಛ ಮಾಡಬೇಕು. ನನ್ನ ಪಕ್ಷಕ್ಕೆ ಐದು ವರ್ಷ ಸ್ವತಂತ್ರ ಸರಕಾರ ಕೊಡಿ, ಕಮಿಷನ್ ವ್ಯವಹಾರವನ್ನು ಬುಡಸಮೇತ ಕಿತ್ತು ಹಾಕುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.

ಈದ್ಗಾ, ತೀರ್ಪು ಪಾಲಿಸಬೇಕು: ಚಾಮರಾಜಪೇಟೆ ಈದ್ಗಾ ಮೈದಾನದ ವಿಚಾರದಲ್ಲಿ ಹೈಕೋರ್ಟ್ ತೀರ್ಪನ್ನು ಎಲ್ಲರೂ ಪಾಲಿಸಬೇಕು. ನ್ಯಾಯಾಲಯದ ತೀರ್ಪಿಗೆ ತಲೆಬಾಗಿ, ಬೆಂಗಳೂರಿನ ಶಾಂತಿ ಕಾಪಾಡಬೇಕು. ರಾಜ್ಯ ಬಿಜೆಪಿ ಸರಕಾರಕ್ಕೆ ಆಗಾಗ ಇಂತಹ ಘಟನೆಗಳು ಆಗುವ ಮೂಲಕ ಅವರ ಹುಳುಕುಗಳನ್ನು ಮುಚ್ಚಿಕೊಳ್ಳಲು ಅನುಕೂಲ ಆಗುತ್ತಿದೆ. ಇಂತಹ ವಿಚಾರಗಳನ್ನು ಸರಕಾರ ಲಘುವಾಗಿ ತೆಗೆದುಕೊಳ್ಳಬಾರದು ಎಂದು ಕುಮಾರಸ್ವಾಮಿ ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News