ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ; ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಖಂಡನೆ
ಬೆಂಗಳೂರು, ಆ.27: ಅತ್ಯಾಚಾರ ದೌರ್ಜನ್ಯಗಳ ಸರಣಿ ಮುಂದುವರೆದಿದೆ. ಇಂದು ಮಾಧ್ಯಮಗಳಲ್ಲಿ ಚಿತ್ರದುರ್ಗದ ಮುರುಘಾ ಮಠದ ಸ್ವಾಮಿ ತಮ್ಮದೆ ಸಂಸ್ಥೆ ಸಂಚಾಲಿತ ಶಾಲೆ ಮತ್ತು ಹಾಸ್ಟೆಲ್ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ನಡೆದುಕೊಂಡು ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂದು ವರದಿಯಾಗಿದೆ. ಇಂಥಹ ಒಂದು ಘಟನೆಯನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಉಗ್ರವಾಗಿ ಖಂಡಿಸುತ್ತದೆ.
ಮಹಿಳೆ, ಮಕ್ಕಳೊಂದಿಗೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಗಳು ಸಮಾಜದ ದೃಷ್ಟಿಯಲ್ಲಿ ಎಷ್ಟೇ ದೊಡ್ಡವರು ಎನಿಸಿಕೊಂಡಿರಲಿ. ಅವರ ಕೊಳಕು ಕ್ರಿಯೆಯನ್ನು ಸಹಿಸಲಾಗದು. ಈ ದಿಸೆಯಲ್ಲಿ ಸರಕಾರ ಕೂಡಲೇ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಮತ್ತು ಯಾವುದೇ ಪ್ರಭಾವಕ್ಕೆ ಒಳಗಾಗದೇ ಸತ್ಯವನ್ನು ಹೊರಗೆಳೆಯಬೇಕು ಎಂದು ಸಂಘಟಣೆಯ ಅಧ್ಯಕ್ಷೆ ಮೀನಾಕ್ಷಿ ಬಾಳಿ ಹಾಗೂ ಪ್ರಧಾನ ಕಾರ್ಯದರ್ಶಿ ದೇವಿ ಒತ್ತಾಯಿಸಿದ್ದಾರೆ.
ಸಾಮಾನ್ಯವಾಗಿ ಸಮಾಜದಲ್ಲಿ ಗಣ್ಯರೆಂದು ಪೋಸು ಕೊಡುತ್ತಿರುವ ವ್ಯಕ್ತಿಗಳು ತಾವು ಮಾಡಿದ ಅಪರಾಧಗಳನ್ನು ಮುಚ್ಚಿ ಹಾಕಲು ನೂರು ಒಳದಾರಿಗಳನ್ನು ಬಳಸುತ್ತಾರೆ. ಪ್ರಭುತ್ವದ ಮೇಲೆ ಒತ್ತಡ ಹೇರುತ್ತಾರೆ. ಹಣ ಬಲ, ಜನಬಲ, ರಾಜಕೀಯ ಬಲಗಳನ್ನು ಬಳಸಿ ಅಪರಾಧವು ಸಾಬೀತಾಗದಂತೆ ನೋಡಿಕೊಳ್ಳುವುದುಂಟು. ಈ ಹಿಂದೆಯೂ ಮಠಾಧಿಪತಿಗಳು ನಂಬಿಸಿ, ಬೆದರಿಸಿ ಅತ್ಯಾಚಾರ ನಡೆಸಿದ ಪ್ರಕರಣಗಳು ಬಹಿರಂಗಗೊಂಡಿವೆ ಎಂದು ಅವರು ಹೇಳಿದ್ದಾರೆ.
ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿಯವರ ಮೇಲಿನ ಅತ್ಯಾಚಾರದ ಆರೋಪ ಪ್ರಕರಣದಲ್ಲಿ ಅದು ಸಾಬೀತಾಗಿದೆ. ಆರೋಪ ಹೊತ್ತವರನ್ನು ಕನಿಷ್ಠ ಪ್ರಾಥಮಿಕ ತನಿಖೆಗೂ ಒಳಪಡಿಸದೇ ಇದ್ದಿದ್ದಷ್ಟೇ ಅಲ್ಲದೆ ಕರ್ನಾಟಕದ ಉಚ್ಚನ್ಯಾಯಾಲಯ ತಾಂತ್ರಿಕ ಕಾರಣಗಳನ್ನು ಮುಂದೆ ಮಾಡಿ ಆರೋಪ ಮುಕ್ತಗೊಳಿಸಿದೆ. ನ್ಯಾಯದ ದಾರಿ ಮಹಿಳೆಯರಿಗೆ ದೂರ ಎಂಬುದು ಈ ದೇಶದಲ್ಲಿ ಪ್ರತಿ ಕ್ಷಣ ಸಾಬೀತಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಮಹಿಳಾ ಸಂಘಟನೆ ಈ ದಿಸೆಯಲ್ಲಿ ಸಮಾಜದ ವಿದ್ಯಮಾನಗಳನ್ನು ಎಚ್ಚರದಿಂದ ಗಮನಿಸುತ್ತದೆ. ಯಾವುದೇ ಕಾರಣಕ್ಕೂ ಅಪರಾಧಿಗಳು ತಪ್ಪಿಸಿಕೊಳ್ಳದಂತೆ ವಸ್ತುನಿಷ್ಠ ತನಿಖೆ ನಡೆಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಅತ್ಯಾಚಾರದಂಥ ಗಂಭೀರ ಪ್ರಕರಣಗಳಲ್ಲಿ ವಿಳಂಬವು ಸಲ್ಲದು. ಅಪರಾಧಿ ತಪ್ಪಿಸಿಕೊಳ್ಳುವ ಅವಕಾಶ ನೀಡಬಾರದು ಎಂದು ಅವರು ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.