ಬೆಂಗಳೂರು- ಮೈಸೂರು ಹೆದ್ದಾರಿಯ ಪ್ಲ್ಯಾನಿಂಗ್ ಮಾಡಿದವರಿಗೆ ಪ್ರಶಸ್ತಿ ಕೊಡಿಸಬೇಕು: ಡಿಕೆಶಿ ಆಕ್ರೋಶ

Update: 2022-08-30 10:02 GMT

ಬೆಂಗಳೂರು: 'ಬೆಂಗಳೂರು- ಮೈಸೂರು ಹೆದ್ದಾರಿ  ಪ್ಲ್ಯಾನ್ ಮಾಡಿರುವ ಇಂಜಿನಿಯರ್ ಗಳಿಗೆ ಮುಖ್ಯಮಂತ್ರಿಗಳು ಪದ್ಮಭೂಷಣ ಅಥವಾ ಬೇರೆ ಪ್ರಶಸ್ತಿ ಕೊಡಿಸಬೇಕು' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (D. K. Shivakumar) ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು  ನಗರದಲ್ಲಿ ಮಂಗಳವಾರ ಮಾಧ್ಯಮಗಳೊಂದಿಗೆ  ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, 'ರಾಷ್ಟ್ರೀಯ ಹೆದ್ದಾರಿ ಮಾಡುವಾಗ ಎತ್ತರ ಪ್ರದೇಶದಲ್ಲಿ ನೀರು ಯಾವ ರೀತಿ ಹೋಗಬೇಕು ಎಂಬುದರ ಬಗ್ಗೆ ಸಾಮಾನ್ಯ ಪ್ರಜ್ಞೆ ಇಟ್ಟುಕೊಂಡು ಯೋಜನೆ ರೂಪಿಸಬೇಕು. ಆದರೆ ಈ ರಸ್ತೆಯ ಟೋಲ್ ಜಾಗ ಈಗ ಕೆರೆಯಾಗಿದೆ. ಮುಖ್ಯಮಂತ್ರಿಗಳು ಕೂಡಲೇ ಈ ವಿಚಾರದಲ್ಲಿ ಕ್ರಮಕೈಗೊಳ್ಳಬೇಕು' ಎಂದು ಆಗ್ರಹಿಸಿದರು.

'ರಸ್ತೆ ನಿರ್ಮಾಣ ಎಂದರೆ ಜಲ್ಲಿ, ಟಾರು ಅಥವಾ ಕಾಂಕ್ರೀಟ್ ಹಾಕಿ ಹಣ ಪಡೆಯುವುದಲ್ಲ. ಮಳೆ ಬಂದಾಗ ನೀರು ಹೇಗೆ ಹೋಗಬೇಕು, ಎಲ್ಲಿ ಕಾಲುವೆ ತೆಗೆಯಬೇಕು ಎಂದು ಯೋಜನೆ ರೂಪಿಸುವುದು ಸರ್ಕಾರ ಹಾಗೂ ಇಂಜಿನಿಯರ್ ಗಳ ಕರ್ತವ್ಯ' ಎಂದರು.

'ರಾಷ್ಟ್ರೀಯ ಹೆದ್ದಾರಿ ಸ್ಥಿತಿ ಹೀಗಾದರೆ ಹಳ್ಳಿ ರಸ್ತೆಗಳ ಪರಿಸ್ಥಿತಿ ಏನಾಗಬೇಕು. ಒಬ್ಬಿಬ್ಬರ ಪ್ರಾಣ ಹಾನಿಯಾಗಿರುವ ಮಾಹಿತಿ ಬಂದಿದ್ದು, ರಾಮನಗರ, ಚನ್ನಪಟ್ಟಣ, ಕನಕಪುರದ ಕೆಲವು ಭಾಗಗಳಿಗೆ ಹೋಗಿ ಪರಿಸ್ಥಿತಿ ಪರಿಶೀಲಿಸುತ್ತೇನೆ. ಅವರಿಗೆ ಧೈರ್ಯ ತುಂಬುತ್ತೇನೆ. ಸರ್ಕಾರದ ಮೇಲೆ ಒತ್ತಡ ಹಾಕುತ್ತೇನೆ' ಎಂದು ತಿಳೀಸಿದರು. 

'ಈ ಸಮಯದಲ್ಲಿ ಆಡಳಿತ ವ್ಯವಸ್ಥೆ ಚುರುಕಾಗಿ ಕೆಲಸ ಮಾಡಬೇಕು. ಒಂದು ವಾರ ಅಥವಾ 10 ದಿನಗಳಲ್ಲಿ ಪರಿಹಾರ ನೀಡುತ್ತೇನೆ ಎಂದು ಹೇಳುವುದಲ್ಲ. ತಕ್ಷಣ ಸ್ಥಳದಲ್ಲೇ ಚೆಕ್ ಮೂಲಕ ಪರಿಹಾರ ನೀಡಲು ಸಮಸ್ಯೆ ಏನು? ಹಾನಿಗೆ ಒಳಗಾದವರನ್ನು ಬೇರೆ ಕಡೆಗೆ ಸ್ಥಳಾಂತರಿಸಬೇಕು. ರೈತನ ಮಗನಾಗಿ, ರೈತನಾಗಿ, ಇಂಧನ ಸಚಿವನಾಗಿ, ಜಲಸಂಪನ್ಮೂಲ ಸಚಿವನಾಗಿ ಮಳೆಯ ಅವಶ್ಯಕತೆ ಎಷ್ಟಿದೆ ಎಂಬುದು ನನಗೆ ಅರಿವಿದೆ. ಹೀಗಾಗಿ ಮಳೆ ಬರಬಾರದು ಎಂದು ಹೇಳುವುದಿಲ್ಲ. ಇಷ್ಟು ಮಳೆ ಬಂದು ಪ್ರವಾಹದ ಸ್ಥಿತಿ ನಿರ್ಮಾಣವಾದ ನಂತರ ಎಲ್ಲಾ ನೀರು ಸಮುದ್ರ ಸೇರುತ್ತಿದೆ. ಈ ನೀರನ್ನು ತಡೆಹಿಡಿದು ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮೇಕೆದಾಟು ಯೋಜನೆ ಆಗ್ರಹಿಸಿ ಪಾದಯಾತ್ರೆ ಮಾಡಿದೆವು ಎಂದು ತಿಳಿಸಿದರು.

ರೈತರ ಪಂಪ್ ಸೆಟ್ ಗಾಗಿ ನಮ್ಮ ಸರ್ಕಾರ 12 ರಿಂದ 15 ಸಾವಿರ ಕೋಟಿ ನೀಡಿತ್ತು. ಇನ್ನು ನಮ್ಮ ಸರ್ಕಾರ ವಿದ್ಯುತ್ ಕಂಪನಿಗಳಿಂದ ಕರೆಂಟ್ ಖರೀದಿ ಮಾಡಿ ಅದನ್ನು ಕಡಿಮೆ ಬೆಲೆಗೆ ರೈತರಿಗೆ ನೀಡುತ್ತದೆ. ಅಣೆಕಟ್ಟುಗಳು ತುಂಬಿದಾಗ ಕಡಿಮೆ ದರದಲ್ಲಿ ಹೆಚ್ಚಿನ ಪ್ರಮಾಣದ ವಿದ್ಯುತ್ ಉತ್ಪಾದನೆ ಮಾಡಬಹುದು. ಒಂದು ದಿನ ಮಳೆ ಹೆಚ್ಚಾಗಿ ಸುರಿದರೆ ರೈತ ಪಂಪ್ ಸೆಟ್ ಆನ್ ಮಾಡದೆ, ಜನ ಎಸಿ ಬಳಸದೆ ಇದ್ದರೆ ಹಾಗೂ ಇತರ ಮಾರ್ಗಗಳಿಂದ ಸರ್ಕಾರದ ಬೊಕ್ಕಸಕ್ಕೆ 1 ಸಾವಿರ ಕೋಟಿ ರು. ಉಳಿಯುತ್ತದೆ. ಹೀಗಾಗಿ ಮಳೆಯಿಂದ ಈ ಎಲ್ಲಾ ಲಾಭದಾಯಕ ಅಂಶಗಳು ಇವೆ ಎಂದರು.

' ನೋವಿನ ಸಂಗತಿ ಎಂದರೆ ಅತಿಯಾದ ಮಳೆಗೆ ಆಸ್ತಿಪಾಸ್ತಿಗಳು ನಷ್ಟವಾಗುತ್ತಿದೆ. ಹೀಗಾಗಿ ಸರ್ಕಾರ ಸಂತ್ರಸ್ತರ ನೆರವಿಗೆ ನಿಲ್ಲಬೇಕು. ತಗ್ಗು ಪ್ರದೇಶದಲ್ಲಿ ಇರುವ ಜನರಿಗೆ ರಕ್ಷಣೆ ನೀಡಬೇಕು' ಎಂದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News