ಬಿಜೆಪಿಯವರಿಗೆ ಅಭ್ಯರ್ಥಿಯೇ ಸಿಗುತ್ತಿಲ್ಲ, ನನ್ನನ್ನು ಸೋಲಿಸುವುದು ಅಸಾಧ್ಯ: ಶಾಸಕ ಪ್ರಿಯಾಂಕ್ ಖರ್ಗೆ ವಿಶ್ವಾಸ

Update: 2022-08-30 15:40 GMT

ಕಲಬುರಗಿ: 'ಬಿಜೆಪಿಯ ಯಾವ ನಾಯಕರೂ ಬಂದರು ನನ್ನನ್ನು ಸೋಲಿಸಲು ಸಾಧ್ಯವಿಲ್ಲ. ನಾವೇನು  ಪರ್ಸೆಂಟೇಜ್ ತಗೋತಿವಾ, ಅಕ್ರಮ ಮರಳು ಸಾಗಾಣಿಕೆ ಮಾಡ್ತೀವಾ, ಅಟ್ರಾಸಿಟಿ ಕೇಸು ಹಾಕಿಸುತ್ತೇವಾ? ಯಾವ ಕಾರಣಕ್ಕೆ ಸೋಲಿಸುತ್ತಾರೆ ? ಬಿಜೆಪಿಯವರಿಗೆ ಒಂದೇ ಒಂದು ಅಭ್ಯರ್ಥಿ ಸಿಗುತ್ತಿಲ್ಲ ಅಂತವರು ನನ್ನನ್ನು ಸೋಲಿಸುತ್ತಾರಾ?' ಎಂದು ಮಾಜಿ ಸಚಿವ, ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. 

ಅವರು ಮಂಗಳವಾರ ಶಂಕರವಾಡಿ ಗ್ರಾಮದಲ್ಲಿ ಅಂದಾಜು ರೂ 12 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಡಾ ಬಿ.ಆರ್. ಅಂಬೇಡ್ಕರ್ ಭವನಕ್ಕೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.

ಕೆಪಿಟಿಸಿಎಲ್, ಶಿಕ್ಷಣ ಇಲಾಖೆಯಲ್ಲಿ ಹಾಗೂ ಪಿಎಸ್ ಐ ನೇಮಕಾತಿಯಲ್ಲಿ ನೌಕರಿಗಳನ್ನು ಲಕ್ಷ ಲಕ್ಷ ಹಣ ಪಡೆದುಕೊಂಡು ಮಾರಿಕೊಂಡಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಯವರು ಭ್ರಷ್ಟಾಚಾರದ ಬಗ್ಗೆ ಮೋದಿಗೆ ಪತ್ರ ಬರೆದಿದ್ದಾರೆ ಎಂದರು.

ಕೇವಲ ಒಂದು ವರ್ಷದ ಅವಧಿಗೆ ಮಾತ್ರ ಎಂ ಎಲ್ ಸಿ ಮಾಡಿದ್ದಕ್ಕೆ ಮೆರವಣಿಗೆ ಮಾಡಿಸಿಕೊಂಡಿದ್ದಾರೆ ಎಂದು ಬಾಬುರಾವ ಚಿಂಚನಸೂರು ಅವರನ್ನು ಕುಟುಕಿದ ಪ್ರಿಯಾಂಕ್ ಅವರು,  ಇಬ್ರಾಹಿಂ ಅವರು ರಾಜೀನಾಮೆ ನೀಡಿದ್ದಕ್ಕೆ ಅಲ್ಪಾವಧಿಗೆ ಅವರನ್ನು ನೇಮಿಸಲಾಗಿದೆ' ಎಂದು ಲೇವಡಿ ಮಾಡಿದರು.

'ಬಸವಣ್ಣ, ಅಂಬೇಡ್ಕರ ಹಾಗೂ ನಿಜಶರಣ ಅಂಬಿಗೇರ ಚೌಡಯ್ಯನವರ ತತ್ವ ಪಾಲನೆ ಮಾಡುವಲ್ಲಿ ರಾಜಕಾರಣಿಗಳು ವಿಫಲರಾಗಿದ್ದಾರೆ ಎಂದು ವಿಷಾದ  ವ್ಯಕ್ತಪಡಿಸಿದ ಅವರು, ರಾಜಕಾರಣಿಗಳನ್ನು ಸೇವಕರಂತೆ ನೋಡಿ ಹೊರತು ಅವರ ಗುಲಾಮರಂತೆ ವರ್ತಿಸಬೇಡಿ' ಎಂದು ಮನವಿ ಮಾಡಿದರು.

'ಬಿಜೆಪಿಗರು ತಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುತ್ತಿದ್ದಾರೆ. ಆದರೆ, ಬಡವರ ಮಕ್ಕಳ ಹೆಗಲಿಗೆ ಕೇಸರಿ ಶಾಲು ಹಾಕಿಸಿ ರಾಜಕೀಯ ಮಾಡಿಕೊಂಡು ಕೋಮು ವಿಷ ಬೀಜ ಬಿತ್ತುತ್ತಿದ್ದಾರೆ. ನಾನು ನನ್ನ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುತ್ತಿದ್ದೇನೆ. ಬುದ್ದ ಬಸವ ಅಂಬೇಡ್ಕರ್ ಚಿಂತನೆ ಕಲಿಸುತ್ತಿದ್ದೇನೆ. ನೀವು ಕೂಡಾ ನಿಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿ ಎಂದು' ಮನವಿ ಮಾಡಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News