ಮುರುಘಾ ಶ್ರೀ ವಿರುದ್ಧ ಪೊಕ್ಸೊ ಪ್ರಕರಣ: ಕೋರ್ಟ್ ನಿಗಾದಲ್ಲಿ ತನಿಖೆಗೆ ವಕೀಲರ ಒತ್ತಾಯ

Update: 2022-09-01 12:47 GMT

ಬೆಂಗಳೂರು, ಸೆ.1: ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದ ಪೊಲೀಸ್ ತನಿಖೆಯು ಕೋರ್ಟ್ ನಿಗಾದಲ್ಲಿ ನಡೆಯುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ವಕೀಲರು ಮನವಿ ಮಾಡಿದ್ದಾರೆ.

ಈ ಸಂಬಂಧ ಸೆ.1ರಂದು ರಿಜಿಸ್ಟ್ರಾರ್ ಜನರಲ್ ಅವರಿಗೆ ಬೆಂಗಳೂರಿನ ವೃತ್ತಿಪರ ವಕೀಲರಾದ ಸಿದ್ಧಾರ್ಥ ಭೂಪತಿ, ಶ್ರೀರಾಮ್ ಟಿ. ನಾಯಕ್, ಬಿ.ಎಸ್.ಗಣೇಶ ಪ್ರಸಾದ್ ಹಾಗೂ ವಿ.ಗಣೇಶ್ ಲಿಖಿತ ಮನವಿ ಸಲ್ಲಿಸಿದ್ದಾರೆ.

ಮುರುಘಾ ಶ್ರೀಗಳು ಮುರುಘಾ ಮಠದಲ್ಲಿರುವ ಪ್ರಿಯದರ್ಶನಿ ಶಾಲೆಯ ಇಬ್ಬರು ಹೈಸ್ಕೂಲ್ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. 16 ವರ್ಷದ ಬಾಲಕಿಯ ಮೇಲೆ ಕಳೆದ ಮೂರೂವರೆ ವರ್ಷಗಳಿಂದ ಹಾಗೂ 15ರ ಬಾಲಕಿಯ ಮೇಲೆ ಕಳೆದ ಒಂದೂವರೆ ವರ್ಷದಿಂದ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ಸಂಬಂಧ ಎಫ್‌ಐಆರ್ ದಾಖಲಾಗಿದ್ದರೂ ಪೊಲೀಸರ ತನಿಖೆ ಸಂಪೂರ್ಣ ಲೋಪಗಳಿಂದ ಕೂಡಿದೆ ಎಂದು ವಕೀಲರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಕಿರುಕುಳ, ಬೆದರಿಕೆ ಆರೋಪ: ಮುರುಘಾ ಮಠದ ಆಡಳಿತಾಧಿಕಾರಿ ಬಸವರಾಜನ್‌ ದಂಪತಿಗೆ ಜಾಮೀನು 

ಮುರುಘಾ ಶ್ರೀಗಳು ನಾಡಿನ ಪ್ರಭಾವಿ ಮಠಾಧೀಶರಾಗಿದ್ದಾರೆ. ಹೀಗಾಗಿ, ಈ ಪ್ರಕರಣದಲ್ಲಿ ತನಿಖೆ ನಡೆಸಬೇಕಾದ ಪೊಲಿಸರು ಇನ್ನೂ ಅವರನ್ನು ವಿಚಾರಣೆಗೆ ಬರಮಾಡಿಕೊಂಡಿಲ್ಲ. ಬಂಧಿಸಿಲ್ಲ. ಏತನ್ಮಧ್ಯೆ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮುರುಘಾ ಮಠಕ್ಕೆ ಹೋಗಿ ಶರಣರನ್ನು ಭೇಟಿ ಮಾಡಿ ಬಂದಿದ್ದಾರೆ. ಅವರನ್ನು ಬೆಂಬಲಿಸುವ ಮಾತುಗಳನ್ನಾಡಿ ಅವರ ರಕ್ಷಣೆಗೆ ನಿಂತಿದ್ದಾರೆ. ಅಂತೆಯೇ ರಾಜ್ಯ ಗೃಹಮಂತ್ರಿ ಆರಗ ಜ್ಞಾನೇಂದ್ರ ಅವರೂ ಹೇಳಿಕೆಯೊಂದನ್ನು ನೀಡಿ, ಈ ಪ್ರಕರಣದಲ್ಲಿ ಮಠದ ನೌಕರನ ಪಿತೂರಿ ಇದೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಎಲ್ಲ ಅಂಶಗಳನ್ನು ಗಮನಿಸಿದರೆ ಸರಕಾರ ಆರೋಪಿ ಶರಣರ ಹಿತ ಕಾಪಾಡುವಲ್ಲಿ ಸಜ್ಜಾಗಿ ನಿಂತಿರುವುದು ಕಂಡು ಬರುತ್ತಿದೆ ಎಂದು ವಕೀಲರು ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಈ ಪ್ರಕರಣದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ತನಿಖೆ ನಡೆಯುವ ಸಾಧ್ಯತೆ ಇಲ್ಲದಿರುವ ಕಾರಣ ಕೂಡಲೇ ಕೋರ್ಟ್ ನಿಗಾದಲ್ಲಿ ಇದರ ತನಿಖೆ ನಡೆಯುವಂತೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News