ಚಿತ್ರದುರ್ಗ: ಮುರುಘಾ ಶರಣರ ವಿಚಾರಣೆ ಮುಂದುವರಿಕೆ, ಸ್ಥಳ ಮಹಜರ್‌ಗೆ ಮಠಕ್ಕೆ ಕರೆತಂದ ಪೊಲೀಸರು

Update: 2022-09-04 14:50 GMT

ಚಿತ್ರದುರ್ಗ: ಅಪ್ರಾಪ್ತ ಬಾಲಕಿಯರಿಬ್ಬರಿಗೆ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಡಾ.ಮುರುಘಾಶ್ರೀಗಳನ್ನು ಕಳೆದೆರಡು ದಿನಗಳಿಂದ ಪೊಲೀಸರು ತಮ್ಮ ವಶದಲ್ಲಿರಿಸಿಕೊಂಡಿದ್ದು, ವಿವಿಧ ಹಂತದ ತನಿಖೆಗಳನ್ನು ಕೈಗೊಂಡಿರುವ ಪೊಲೀಸರು ಇಂದು ಮುರುಘಾಮಠದ ಒಳಾಂಗಣಕ್ಕೆ ತೆರಳಿ, ಮುರುಘಾಶರಣರನ್ನು ಮಹಜರ್‌ಗೆ ಒಳಪಡಿಸಿದರು.

ಮುರುಘಾ ಮಠದ ಅನಾಥಶ್ರಮದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಬಾಲಕಿಯರಿಬ್ಬರಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಮೈಸೂರಿನ ನಝರಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಹಿನ್ನೆಲೆಯಲ್ಲಿ ಬಾಲಕಿಯರು ಹಾಗೂ ಮುರುಘಾ ಶ್ರೀಗಳನ್ನು ತನಿಖೆಗೆ ಒಳಪಡಿಸಿರುವ ಪೊಲೀಸರು ಮುರುಘಾಶ್ರೀಗಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಪುರುಷತ್ವ ಸೇರಿದಂತೆ ಆರೋಗ್ಯದಲ್ಲಾಗುತ್ತಿರುವ ಏರುಪೇರುಗಳ ಬಗ್ಗೆಯೂ ಚಿಕಿತ್ಸೆ ಮತ್ತು ಪರೀಕ್ಷೆ ನಡೆಸಿದ್ದರು. ವೈದ್ಯಾಧಿಕಾರಿಗಳು ವಿವಿಧ ಹಂತದ ವರದಿಗಳನ್ನು ಪೊಲೀಸರಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಇಂದು ಬೆಳಿಗ್ಗೆ 10.45ರ ಸುಮಾರಿಗೆ ಮುರುಘಾಮಠಕ್ಕೆ ಕರೆದೊಯ್ದ ಪೊಲೀಸರು ಮಠದ ಒಳಗೆ ಕೃತ್ಯ ನಡೆದಿರುವ ಸ್ಥಳಗಳು ಮತ್ತು ವಿವಿಧ ಹಂತದ ತನಿಖೆಗಳನ್ನು ಕೈಗೊಂಡಿದ್ದು, ಮಹಜರ್ ಸಂದರ್ಭದಲ್ಲಿ ಮುರುಘಾಶ್ರೀಗಳನ್ನು ಜೊತೆಗಿರಿಸಿಕೊಂಡು ತನಿಖೆಗೆ ಒಳಪಡಿಸಲಾಗಿದೆ ಎಂದು ಪೊಲೀಸರಿಂದ ಮಾಹಿತಿ ಲಭ್ಯವಾಗಿದೆ. 2ನೇ ಹೆಚ್ಚುವರಿ ನ್ಯಾಯಾಧೀಶರ ಆದೇಶದಂತೆ ಪೊಲೀಸರ ವಶದಲ್ಲಿರುವ ಮುರುಘಾಶ್ರೀಗಳನ್ನು ಕೃತ್ಯ ನಡೆದ ಸ್ಥಳಕ್ಕೆ ಕರೆದೊಯ್ದು ವಿಚಾರಣೆಯನ್ನು ತೀವ್ರಗೊಳಿಸುವ ಮೂಲಕ ಮಾಹಿತಿ ಸಂಗ್ರಹಿಸಿದ್ದು, ಸುಮಾರು ಎರಡರಿಂದ ಎರಡೂವರೆ ಗಂಟೆಗಳ ಕಾಲ ಮಹಜರ್ ನಡೆಸಿರುವ ಪೊಲೀಸರು ಸಮಗ್ರ ಮಾಹಿತಿ ಕಲೆ ಹಾಕಿದ್ದಾರೆ.

ಬಾಲಕಿಯರಿಬ್ಬರಿಗೆ ಕಿರುಕುಳ ಮತ್ತು ದೌರ್ಜನ್ಯ ಪ್ರಕರಣವು ಪೋಕ್ಸೋ ಕಾಯ್ದೆಯಡಿಯಲ್ಲಿ ಕೇಸು ದಾಖಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News