ಮುರುಘಾ ಮಠದಲ್ಲಿ ಲೈಂಗಿಕ ಕಿರುಕುಳದ ಆರೋಪ | ಸರ್ಕಾರ ಯಾರ ಪರವಾಗಿದೆ ಎಂದು ಸ್ಪಷ್ಟಪಡಿಸಲಿ: ಎಚ್.ವಿಶ್ವನಾಥ್ ಆಗ್ರಹ

Update: 2022-09-04 15:27 GMT

ಮೈಸೂರು,ಸೆ.4: 'ಚಿತ್ರದುರ್ಗದ ಮುರುಘಾ ಶರಣರ ವಿರುದ್ಧ ಪೊಕ್ಸೋ ಕಾಯ್ದೆ ದಾಖಲಾದರೂ ಸರ್ಕಾರ ಗಂಭೀರವಾಗಿ ಪರಿಗಣಿಸದೆ ಇದ್ದುದರಿಂದಲೇ ಸಾಕ್ಷ್ಯಗಳು ನಾಶವಾಗಿವೆ. ಸರ್ಕಾರ ಸಂತ್ರಸ್ತರ ಪರವಾಗಿದಿಯೋ ಅಥವಾ ಸ್ವಾಮೀಜಿ ಪರವಾಗಿದಿಯೋ ಎಂಬುದನ್ನು ಸ್ಪಷ್ಟಪಡಿಸಬೇಕು' ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆಗ್ರಹಿಸಿದರು.

ನಗರದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾದಾಗ ಆರೋಪಿಯೇ ಅಪರಾಧಿಯಾಗುತ್ತಾನೆ. ಆದರೆ ಚಿತ್ರದುರ್ಗ ಎಸ್ಪಿ ಆರೋಪಿಯನ್ನು ಕೂಡಲೇ ಬಂಧಿಸಲು ಕ್ರಮ ಕೈಗೊಳ್ಳಲಿಲ್ಲ, ಬೆಡ್ ಶೀಟ್, ಹಾಸಿಗೆ ಒದಿಕೆಗಳೆಲ್ಲ ಬದಲಾದ ಮೇಲೆ ಮಠದಲ್ಲಿದ್ದ ಸಾಕ್ಷ್ಯಗಳು ನಾಶವಾದ ನಂತರ ಬಂಧಿಸಲಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

'ಆರೋಪಿಯ ಪರವಾಗಿಯೇ ಹಲವು ಮಠಗಳ ಸ್ವಾಮೀಜಿಗಳು, ಜನಪ್ರತಿನಿಧಿಗಳು ಮಾತನಾಡುತ್ತಿದ್ದಾರೆ. ಅವರುಗಳ ವಿರುದ್ಧವೂ ಪ್ರಕರಣ ದಾಖಲಿಸಿ ಬಂಧಿಸಬೇಕು, ಪೋಕ್ಸೊ ಗಟ್ಟಿಯಾದ ಕಾಯ್ದೆ ಎನ್ನುವುದು ಅವರಿಗೆ ಗೊತ್ತಿಲ್ಲವೇ? ಅಪರಾಧಿಗಳು ಮಠದೊಳಗೆ ಇದ್ದರೂ ಪೊಲೀಸರು ಹುಡುಕುತ್ತಿದ್ದಾರೆ. ಕರ್ತವ್ಯ ಲೋಪ ಎಸಗಿದ ಚಿತ್ರದುರ್ಗ ಎಸ್ಪಿಯನ್ನು ಅಮಾನತ್ತುಗೊಳಿಸಬೇಕು. ನ್ಯಾಯಾಂಗ  ಬಂಧನಕ್ಕೊಳಗಾದ ಆರೋಪಿಯನ್ನು ಖಾವಿಯಲ್ಲಿ ಕರೆದೊಯ್ಯುತ್ತಾರಾ? 'ಎಂದು ಪ್ರಶ್ನಿಸಿದರು.

'ಮಕ್ಕಳಿಗೆ ನ್ಯಾಯ ಸಿಗಲಿ ಎಂದು ಇಡೀ ರಾಜ್ಯದ ಜನತೆ ಸರ್ಕಾರದತ್ತ ನೋಡುತ್ತಿದೆ ಎಂಬ ಎಚ್ಚರವಿರಲಿ, ಸಾಮಾಜಿಕ ಹೋರಾಟಗಾರರಿಗೆ ರಕ್ಷಣೆ ನೀಡುವ ಕೆಲಸವಾಗಬೇಕು, ಮಕ್ಕಳಿಗೆ ನೆರವಾಗಿರುವ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಮತ್ತು ಪರಶುರಾಮ್ ಕಾರ್ಯ ಅಭಿನಂದನೀಯ, ಅವರಿಗೂ ಬೆದರಿಕೆ ಕರೆಗಳು ಬರುತ್ತಿದ್ದು, ಅವರಿಗೆ ಸೂಕ್ತ ರಕ್ಷಣೆ ನೀಡಬೇಕು' ಎಂದರು.

'ನಾಡಿನ ಬಹುತೇಕ ಪೀಠಾಧಿಪತಿಗಳು ಬ್ರಹ್ಮಚಾರಿಗಳಲ್ಲ, ಸ್ವಾಮೀಜಿ ವೇಷ ಧರಿಸಿ ಅಪ್ರಾಪ್ತ ಹೆಣ್ಣುಮಕ್ಕಳ ಭವಿಷ್ಯ ಹಾಳು ಮಾಡುತ್ತಿದ್ದಾರೆ. ಆದ್ದರಿಂದ ವಿವಾಹಿತರೇ ಮಠಾಧಿಪತಿಗಳಾಗಬೇಕು' ಎಂದು ವಿಶ್ವನಾಥ್ ಹೇಳಿದರು.

ಜಗದ್ಗುರುಗಳೆಲ್ಲಾ ಜಾತಿ ಗುರುಗಳಾಗಿದ್ದಾರೆ. ಸಮುದಾಯ ಬೆಂಬಲಕ್ಕಿದೆ ಎಂಬ ಉಸಿ ನಂಬಿಕೆ ಅವರಿಗಿದೆ. ಕಾನೂನು ನ್ಯಾಯಾಲಯ ದೊಡ್ಡದೇ ಹೊರತು ಧರ್ಮ ಜಾತಿಯಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News