ಕೆಐಎಡಿಬಿಯಿಂದ ಭೂಮಿ ಹಂಚಿಕೆ ವ್ಯವಸ್ಥೆ ಸರಳೀಕರಣ: ಸಚಿವ ಮುರುಗೇಶ್ ನಿರಾಣಿ

Update: 2022-09-06 11:31 GMT

ಬೆಂಗಳೂರು, ಸೆ. 6: ‘ಕರ್ನಾಟಕ ಕೈಗಾರಿಕಾ ಇಲಾಖೆ ಭೂಮಿ ಹಂಚಿಕೆ ವ್ಯವಸ್ಥೆ ಸರಳೀಕರಣಗೊಳಿಸಿದೆ. ‘ಈಸ್ ಆಫ್ ಡುಯಿಂಗ್ ಬಿಸಿನೆಸ್’ ಮಾದರಿಯಲ್ಲಿ ‘ಈಸ್ ಆಫ್ ಲ್ಯಾಂಡ್ ಅಲಾಟ್‍ಮೆಂಟ್’ ಪದ್ಧತಿಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಹೊಸ ಆದೇಶದ ಮೂಲಕ ಜಾರಿಗೊಳಿಸಿದೆ' ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.

ಮಂಗಳವಾರ ಈ ಸಂಬಂಧ ಮಾಹಿತಿ ನೀಡಿರುವ ಅವರು, ‘ಭೂಪರಿಶೋಧನಾ ಸಮಿತಿಯಲ್ಲಿ 10 ಎಕರೆವರೆಗಿನ ಭೂಮಿ ಹಂಚಿಕೆಗೆ ಪರಿಶೀಲನೆ ಅವಶ್ಯವಿಲ್ಲ ಎಂದು ಹೊಸ ಆದೇಶ ಸ್ಪಷ್ಟಪಡಿಸಿದೆ. ಹೂಡಿಕೆ ಪ್ರಸ್ತಾವನೆಗಳು ಈಗ ನೇರವಾಗಿ ರಾಜ್ಯಮಟ್ಟದ ಸಮಿತಿಯ ಮುಂದೆ ಮಂಡನೆಯಾಗಲಿವೆ. ಬಂಡವಾಳ ಹೂಡಿಕೆ ಮಾಡಲು ಮುಂದೆ ಬರುವ ಉದ್ಯಮಗಳಿಗೆ ಅಗತ್ಯವಿರುವ ಭೂಮಿಯನ್ನು ಸುಲಭವಾಗಿ ನೀಡುವುದು ಇದರ ಮುಖ್ಯ ಉದ್ದೇಶ' ಎಂದು ಹೇಳಿದ್ದಾರೆ.

‘ಸುಲಲಿತ ವ್ಯವಹಾರದಲ್ಲಿ ದೇಶದಲ್ಲೇ ಮುಂಚೂಣಿ ಸ್ಥಾನದಲ್ಲಿರುವ ರಾಜ್ಯಕ್ಕೆ ಹೆಚ್ಚು ಹೆಚ್ಚು ಉದ್ಯಮಗಳನ್ನು ಆಕರ್ಷಿಸಲು ಈ ನಿರ್ಧಾರವನ್ನು ತೆಗೆದುಕೊಂಡಿದೆ. 10 ಎಕರೆಗಿಂತ ಕಡಿಮೆ ವಿಸ್ತೀರ್ಣದ ಭೂಮಿಗಾಗಿ ಜಮೀನು ಪರಿಶೀಲನಾ ಸಮಿತಿಗೆ ಹೋಗುವ ಬದಲು ನೇರವಾಗಿ ಜಿಲ್ಲಾ ಅಥವಾ ರಾಜ್ಯ ಮಟ್ಟದ ಅನುಮೋದನಾ ಸಮಿತಿಯಲ್ಲಿ ಅನುಮೋದನೆ ನೀಡುವುದರಿಂದ ಪ್ರಸ್ತಾವನೆಗಳಿಗೆ ತ್ವರಿತವಾಗಿ ಅನುಮೋದನೆ ದೊರೆಯುತ್ತದೆ. ಇದರಿಂದ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಉದ್ಯಮದಾರರಿಗೆ ಅನುಕೂಲವಾಗುವುದು' ಎಂದು ಅವರು ಹರ್ಷ ವ್ಯಕ್ತಪಡಿಸಿದರು. 

‘ನವೆಂಬರ್ 2, 3 ಮತ್ತು 4ರಂದು ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಭೆ ಪೂರ್ವಭಾವಿಯಾಗಿ ಈ ನಿರ್ಧಾರವನ್ನು ಇಲಾಖೆ ಕೈಗೊಂಡಿದೆ. 10 ಎಕರೆಗಿಂತ ಹೆಚ್ಚಿನ ವಿಸ್ತೀರ್ಣ ಮತ್ತು 15 ಕೋಟಿ ರೂ.ಗಳಿಂದ 500 ಕೋಟಿ ರೂ.ವರೆಗಿನ ಹೂಡಿಕೆಯ ಪ್ರಸ್ತಾವನೆಗಳನ್ನು ಭೂ ಲೆಕ್ಕ ಪರಿಶೋಧನಾ ಸಮಿತಿಯ ಮುಂದೆ ಮಂಡಿಸಬಹುದು, ಇಲ್ಲಿ ತೆರವುಗೊಳಿಸಿದ ನಂತರ, ಅಂತಿಮ ಅನುಮೋದನೆಗಾಗಿ ರಾಜ್ಯ ಮಟ್ಟದ ಏಕಗವಾಕ್ಷಿ ತೆರವು ಸಮಿತಿಯ ಮುಂದೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು' ಎಂದು ಮಾಹಿತಿ ನೀಡಿದರು.

----------------------------

‘ಹೂಡಿಕೆದಾರರ ಅಗತ್ಯಗಳನ್ನು ಅರ್ಥ ಮಾಡಿಕೊಂಡು ಭೂ ಮಂಜೂರಾತಿ ಪ್ರಕ್ರಿಯೆಯಲ್ಲಿ ತಿದ್ದುಪಡಿ ಮಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಧನ್ಯವಾದ. ಏಕಗವಾಕ್ಷಿ ಅನುಮೋದನಾ ವ್ಯವಸ್ಥೆಯನ್ನು ಸರಳೀಕರಣಗೊಳಿಸುವ ಮೂಲಕ ಸುಲಲಿತಕ್ಕೆ ವ್ಯವಹಾರ ಹಾಗೂ ಪಾರದರ್ಶಕತೆಗೆ ಒತ್ತು ನೀಡಿ ಈ ಆದೇಶ ಹೊರಡಿಸಿದೆ. ಹೂಡಿಕೆ ಪ್ರಸ್ತಾವನೆಗಳು ತ್ವರಿತವಾಗಿ ಅನುಮೋದನೆ ಪಡೆಯಲು ಸಾಧ್ಯವಾಗಲಿದೆ' 

-ಮುರುಗೇಶ ಆರ್.ನಿರಾಣಿ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News