ಸರಕಾರ ಬೇಜವಾಬ್ದಾರಿ ಆಡಳಿತ ನಿಲ್ಲಿಸಿ ನಾಗರಿಕರಿಗೆ ನೆಮ್ಮದಿ ನೀಡಬೇಕು: ಸಿದ್ದರಾಮಯ್ಯ

Update: 2022-09-06 14:02 GMT

ಬೆಂಗಳೂರು, ಸೆ.6: ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಜನರ ಬದುಕು ನರಕ ಸದೃಶವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತ್ರ ಇದಕ್ಕೆಲ್ಲ ಹಿಂದಿನ ಸರಕಾರಗಳು ಕಾರಣ ಎಂದು ಓಡಾಡುತ್ತಿದ್ದಾರೆ. ಸರಕಾರ ಇಂತಹ ಬೇಜವಾಬ್ದಾರಿ ಆಡಳಿತವನ್ನು ನಿಲ್ಲಿಸಿ ನಾಗರಿಕರಿಗೆ ನೆಮ್ಮದಿ ನೀಡಬೇಕು ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಎ.ಟಿ.ರಾಮಸ್ವಾಮಿ ಬೆಂಗಳೂರಿನಲ್ಲಿ 11,980 ಎಕರೆ ಭೂಮಿ ಒತ್ತುವರಿಯಾಗಿತ್ತು ಎಂದು ವರದಿ ನೀಡಿದ್ದರು. ಇದರಲ್ಲಿ 11,680 ಎಕರೆ ಭೂಮಿಯನ್ನು ನಮ್ಮ ಸರಕಾರದ ಅವಧಿಯಲ್ಲಿ ತೆರವುಗೊಳಿಸಿದ್ದೆವು. ಅದರ ಜೊತೆಗೆ 7 ಸಾವಿರ ಎಕರೆ ಹೆಚ್ಚುವರಿ ಜಾಗವನ್ನು ತೆರವುಗೊಳಿಸಿದ್ದೆವು. ನಾವು ತೆರವುಗೊಳಿಸಿದ್ದ ಜಮೀನಿನ ಮೌಲ್ಯ ಅಂದಾಜು 4 ಲಕ್ಷ ಕೋಟಿ ರೂಪಾಯಿ ಎಂದು ಅವರು ಹೇಳಿದ್ದಾರೆ.

ಅಪೊಲೊ ಆಸ್ಪತ್ರೆಯಿಂದ 5 ಎಕರೆ, ರಾಷ್ಟ್ರೋತ್ಥಾನ ಪರಿಷತ್‍ನಿಂದ 10 ಎಕರೆ, ಮಿಥಿಕ್ ಸೊಸೈಟಿ ಸೇರಿದಂತೆ ಹಲವರಿಂದ ಜಮೀನು ವಾಪಸ್ಸು ಪಡೆದಿದ್ದೆವು. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಗೋಮಾಳ, ಕೆರೆ, ಕಟ್ಟೆ, ಕುಂಟೆ, ಸರಕಾರಿ ಖರಾಬು, ಗ್ರಾಮಠಾಣ, ಗುಂಡುತೋಪು, ಸ್ಮಶಾನ ಸೇರಿದಂತೆ ಸುಮಾರು 1.23 ಲಕ್ಷ ಎಕರೆ ಭೂಮಿ ಸರಕಾರಕ್ಕೆ ಸೇರಿದ್ದಾಗಿದೆ ಎಂಬ ಮಾಹಿತಿಯನ್ನೂ ಮುಖ್ಯಮಂತ್ರಿ ಗಮನಕ್ಕೆ ತರಬಯಸುತ್ತೇನೆ ಎಂದು ಅವರು ತಿಳಿಸಿದ್ದಾರೆ. 

ಸರಕಾರಕ್ಕೆ ಪಡೆದ ಜಮೀನಲ್ಲಿ ಬಡವರಿಗಾಗಿ 1 ಲಕ್ಷ ಮನೆ ಕಟ್ಟಲು 1,500 ಎಕರೆ ಭೂಮಿಯನ್ನು ವಸತಿ ಇಲಾಖೆಗೆ, ಸರಕಾರದಿಂದ 10 ಲಕ್ಷ ಸಸಿಗಳನ್ನು ನೆಡಲು ಬಿಬಿಎಂಪಿ, ಬಿಡಿಎಗಳಿಗೆ 1,618 ಎಕರೆ, ವಿವಿಧ ಸಮುದಾಯಗಳಿಗೆ ಹಾಗೂ ಎಚ್‍ಐವಿ ಪೀಡಿತರಿಗೆ ವಸತಿ ಕಲ್ಪಿಸಲು 300 ಎಕರೆ, ಸರಕಾರಿ ಆಸ್ಪತ್ರೆ, ಶಾಲೆ, ಕಾಲೇಜು, ಪೊಲೀಸ್ ಠಾಣೆಯಂತಹ ಸಾರ್ವಜನಿಕ ಉದ್ದೇಶಗಳಿಗೆ 3,604 ಎಕರೆ ಭೂಮಿ ನೀಡಲಾಗಿತ್ತು. ಉಳಿದ ಜಮೀನಿನಲ್ಲಿ ರಾಜಕಾಲುವೆ, ಕೆರೆ, ಕಟ್ಟೆ, ಅರಣ್ಯ ಮುಂತಾದವುಗಳಿದ್ದವು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. 

ನಮ್ಮ ಸರಕಾರದ ಅವಧಿಯಲ್ಲಿ ಮುಲಾಜಿಲ್ಲದೆ ಒತ್ತುವರಿ ತೆರವುಗೊಳಿಸಿದ್ದೆವು. 2014ರ ಸೆ.26ರಂದು ಒಂದೆ ದಿನ ಬಿದ್ದ ಮಳೆಯ ಪ್ರಮಾಣ 132 ಮಿ.ಮೀ. ಆದರೆ ಮೊನ್ನೆ ರವಿವಾರ ಬಿದ್ದ ಮಳೆಯ ಪ್ರಮಾಣ 131.6 ಮಿಮೀ ಮಾತ್ರ. ಆದರೂ ಬೆಂಗಳೂರಿನ ರಸ್ತೆಗಳಲ್ಲಿ ದೋಣಿಗಳನ್ನು ಓಡಾಡಿಸಬೇಕಾದ ಪರಿಸ್ಥಿತಿ ಬಂದಿತ್ತು ಎಂದು ಅವರು ಹೇಳಿದ್ದಾರೆ.

ಐಟಿ ಕಂಪೆನಿಗಳು ಸರಕಾರಕ್ಕೆ ಪತ್ರ ಬರೆದು ವ್ಯವಸ್ಥೆ ಸರಿಪಡಿಸದಿದ್ದರೆ ಹೊರ ರಾಜ್ಯಗಳಿಗೆ ಹೋಗಬೇಕಾಗುತ್ತದೆ ಎಂದವು. ಸರಕಾರದ ಆರೋಗ್ಯ ಸಚಿವರು ಪತ್ರ ಬರೆದ ಐಟಿ ಸಂಸ್ಥೆಗಳ ಮುಖ್ಯಸ್ಥರಿಗೆ ಧಮಕಿ ಹಾಕುವ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಗಾರಿದ್ದಾರೆ. 

ಬಾಣಸವಾಡಿ ಕೆರೆಯ ಒತ್ತುವರಿ ತೆರವು ಮಾಡುವಾಗ ಬಿಜೆಪಿ ಶಾಸಕ ಸುರೇಶ್ ಕುಮಾರ್ ‘ಸರಕಾರ ಹುಚ್ಚಾಟ ನಡೆಸುತ್ತಿದೆ, ಜನರು ಸರಕಾರಕ್ಕೆ ತೆರಿಗೆ ಕಟ್ಟುತ್ತಿದ್ದಾರೆ, ಆದರೂ ಈ ರೀತಿ ಮಾಡಿರುವುದು ಸರಿಯಲ್ಲ. ಸರಕಾರ ಮನೆ ಒಡೆಯುವ ಪ್ರವೃತ್ತಿ ನಿಲ್ಲಿಸಬೇಕು’ ಎಂದು ಹೇಳಿದ್ದರು. ಪರಿಸ್ಥಿತಿ ಹೀಗಿದ್ದರೂ, ಹಿಂದೆ ಮುಂದೆ ನೋಡದ, ಸಣ್ಣ ಮಾಹಿತಿಯನ್ನೂ ಇಟ್ಟುಕೊಳ್ಳದ ಬೊಮ್ಮಾಯಿ ಬೆಂಗಳೂರಿನ ಮಳೆ ಅನಾಹುತಗಳಿಗೆ ಹಿಂದಿನ ಸರಕಾರಗಳು ಕಾರಣ ಎಂದು ಹೇಳುತ್ತಾರೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ಒತ್ತುವರಿದಾರರಿಗೆ ಮಾರಾಟ ಮಾಡುವ ರಿಯಲ್ ಎಸ್ಟೇಟ್ ದಂಧೆಗೆ ಅನುಕೂಲ ಮಾಡಿಕೊಡುವ ಕಾನೂನನ್ನು ಇದೇ ಬಿಜೆಪಿ ಸರಕಾರ ಜಾರಿಗೆ ತಂದಿದೆ. ರೆವಿನ್ಯೂ ಲೇಔಟ್‍ಗಳಲ್ಲಿ ಅಕ್ರಮವಾಗಿ ನಿರ್ಮಿಸಿರುವ ನಿವೇಶನಗಳನ್ನು ಮುಕ್ತವಾಗಿ ಖಾತೆ ಮಾಡಿಕೊಡಲು ಬೊಮ್ಮಾಯಿ ಸರಕಾರವೆ ಅವಕಾಶ ನೀಡಿದೆ. ಪ್ರತಿ ನಿವೇಶನವನ್ನು ನೋಂದಣಿ ಮಾಡುವಾಗ ಯಾರು ಯಾರು ಎಷ್ಟೆಷ್ಟು ಕಮಿಷನ್ ತಿನ್ನುತ್ತಿದ್ದಾರೆ ಎಂಬ ಮಾಹಿತಿ ಈಗ ಎಲ್ಲರ ಬಳಿ ಇದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಅಕ್ರಮ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ನೀಡಲು ಇದ್ದ ನಿರ್ಬಂಧವನ್ನು ಬೊಮ್ಮಾಯಿ ಸರಕಾರವೆ ತೆಗೆದು ಹಾಕಿದೆ. ಈಗ ಜಲಾವೃತವಾಗಿರುವ ಮಹದೇವಪುರ, ಬೊಮ್ಮನಹಳ್ಳಿ, ಭಾಗಶಃ ತೊಂದರೆ ಅನುಭವಿಸುತ್ತಿರುವ ಕೆ.ಆರ್.ಪುರಂಗಳಲ್ಲಿ ಎಷ್ಟು ವರ್ಷಗಳಿಂದ ಯಾವ ಪಕ್ಷದ ಶಾಸಕರು ಅಧಿಕಾರದಲ್ಲಿದ್ದಾರೆ ಎಂಬುದನ್ನು ನಾನು ಬೊಮ್ಮಾಯಿಗೆ ನೆನಪಿಸಬೇಕೆ? ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. 

ಬೊಮ್ಮನಹಳ್ಳಿಯ ಸತೀಶ್ ರೆಡ್ಡಿ, ಮಹದೇವಪುರದ ಅರವಿಂದ ಲಿಂಬಾವಳಿ ಎಷ್ಟು ವರ್ಷದಿಂದ ಬಿಜೆಪಿಯಿಂದ ಆಯ್ಕೆಯಾಗುತ್ತಿದ್ದಾರೆ? ಕೆ.ಆರ್.ಪುರಂನ ನಂದೀಶ್ ರೆಡ್ಡಿ ಯಾವ ಪಕ್ಷದವರಾಗಿದ್ದರು? ಈಗಿರುವ ನಗರಾಭಿವೃದ್ಧಿ ಸಚಿವರಾದ ಬಸವರಾಜ ಯಾವ ಪಕ್ಷದಿಂದ ಆಯ್ಕೆಯಾಗಿದ್ದಾರೆ? ಇವರೆಲ್ಲ ತಮ್ಮ ಕ್ಷೇತ್ರಗಳನ್ನು ಸರಿಪಡಿಸಿಕೊಳ್ಳಲು ಯಾವ ಪ್ರಯತ್ನ ಮಾಡಿದ್ದಾರೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಯಾವ ಮಾಹಿತಿಯೂ ಇಲ್ಲದೆ ಸುಳ್ಳು ಹೇಳಿಕೊಂಡು ಓಡಾಡಿದರೆ, ರಿಯಲ್ ಎಸ್ಟೇಟ್ ದಂಧೆಯವರಿಗಾಗಿ ಕಾನೂನುಗಳನ್ನು ಮನಸೋ ಇಚ್ಛೆ ಬದಲಾಯಿಸಿ ನಗರವನ್ನು ನರಕ ಮಾಡಿದ್ದರೆ ಅದಕ್ಕೆ ಕಾರಣ ಯಾರು? ಬೊಮ್ಮಾಯಿ ಮುಖ್ಯಮಂತ್ರಿಯಾದ ಮೇಲೆ ಹೈಕೋರ್ಟ್ ಕೇವಲ ರಸ್ತೆ ಗುಂಡಿ ಮುಚ್ಚುವಂತೆ ಎಷ್ಟು ಸಾರಿ ಛೀಮಾರಿ ಹಾಕಿದೆ ಎಂಬ ಲೆಕ್ಕ ಏನಾದರೂ ಮುಖ್ಯಮಂತ್ರಿಗೆ ಗೊತ್ತಿದೆಯಾ? ಅದನ್ನೂ ನಾನೆ ಹೇಳಬೇಕಾ? ಎಂದು ಅವರು ಕಿಡಿಗಾರಿದ್ದಾರೆ.

ಬೆಂಗಳೂರು ಅಭಿವೃದ್ಧಿಗಾಗಿ ಈವರೆಗೂ ಒಬ್ಬ ಸ್ವತಂತ್ರ ಸಚಿವರನ್ನು ಬೊಮ್ಮಾಯಿ ಸರಕಾರ ನೇಮಿಸಿಲ್ಲ. ಶಿಸ್ತಿನ ಪಕ್ಷವೆಂದು ಹೇಳಿಕೊಳ್ಳುವ ಬಿಜೆಪಿಯು ಬೆಂಗಳೂರು ನಗರಾಭಿವೃದ್ಧಿಗಾಗಿ ಒಬ್ಬ ಸಚಿವರನ್ನು ನೇಮಿಸಿದರೆ ಉಳಿದವರು ಕಿತ್ತಾಟಕ್ಕಿಳಿಯುತ್ತಾರೆ. ಅದನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಈ ಖಾತೆಯನ್ನು ಮುಖ್ಯಮಂತ್ರಿ ಇಟ್ಟುಕೊಂಡಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

ಮುಖ್ಯಮಂತ್ರಿಗೆ ಧೈರ್ಯವಿದ್ದರೆ ಬೆಂಗಳೂರು ಅಭಿವೃದ್ಧಿಯ ಬಗ್ಗೆಯೆ ಅಧಿವೇಶನದಲ್ಲಿ ಪ್ರತ್ಯೇಕ ಚರ್ಚೆ ನಡೆಸಲಿ, ಜೊತೆಗೆ ಕಳೆದ 20 ವರ್ಷಗಳಲ್ಲಿ ಏನೇನಾಗಿದೆ ಎಂಬ ಕುರಿತು ಸಮಗ್ರ ವರದಿ ಬಿಡುಗಡೆ ಮಾಡಬೇಕು ಎಂದು ಸವಾಲು ಹಾಕಿರುವ ಸಿದ್ದರಾಮಯ್ಯ, ರಿಯಲ್ ಎಸ್ಟೇಟ್‍ನವರಿಗೆ ಅನುಕೂಲ ಮಾಡಿಕೊಡುವ ಕಾನೂನುಗಳನ್ನು ಹಿಂಪಡೆದು, ಸಮಸ್ಯೆಗಳು ಎಲ್ಲಿವೆ ಎಂದು ಪತ್ತೆ ಹಚ್ಚಿ ಜನಪರವಾಗಿ ಕೆಲಸ ಮಾಡಿ ನಗರದ ಜನರಿಗೆ ನೆಮ್ಮದಿ ನೀಡಬೇಕೆಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರೆಲ್ಲ ಮುಳುಗಿಲ್ಲ, ಮಳೆ ಯಾವ ಪಕ್ಷವನ್ನೂ ನೋಡಿ ಬರುವುದಿಲ್ಲ: ಸಿಎಂ ಬೊಮ್ಮಾಯಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News